ADVERTISEMENT

ಭಗವಂತನ ಸೇವೆಯಿಂದ ಮನೋಬಲ ಹೆಚ್ಚು: ಪೇಜಾವರ ವಿಶ್ವಪ್ರಸನ್ನ ಶ್ರೀ

ಬಪ್ಪನಾಡು : ಸ್ವರ್ಣ ಪಲ್ಲಕಿಯ ಶೋಭಾಯಾತ್ರೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 11:45 IST
Last Updated 26 ಫೆಬ್ರುವರಿ 2020, 11:45 IST
ಮೂಲ್ಕಿಯ ಬಪ್ಪನಾಡು ದುರ್ಗಾಪರಮೇಶ್ವರಿ ದೇವಳಕ್ಕೆ ಭವ್ಯ ಶೋಭಾಯಾತ್ರೆಯ ಮೂಲಕ ಸ್ವರ್ಣಪಲ್ಲಕಿಯನ್ನು ಮಂಗಳವಾರ ಸಮರ್ಪಿಸಲಾಯಿತು
ಮೂಲ್ಕಿಯ ಬಪ್ಪನಾಡು ದುರ್ಗಾಪರಮೇಶ್ವರಿ ದೇವಳಕ್ಕೆ ಭವ್ಯ ಶೋಭಾಯಾತ್ರೆಯ ಮೂಲಕ ಸ್ವರ್ಣಪಲ್ಲಕಿಯನ್ನು ಮಂಗಳವಾರ ಸಮರ್ಪಿಸಲಾಯಿತು   

ಮೂಲ್ಕಿ: ‘ಭಗವಂತ ಮತ್ತು ನಮ್ಮ ನಡುವಿನ ಸಂಬಂಧವು ಬಿಂಬ ಮತ್ತು ಪ್ರತಿಬಿಂಬದಂತಿದ್ದು ಬಿಂಬವು ಅಲಂಕಾರಗೊಂಡಾಗ ಯಾವ ರೀತಿ ಪ್ರತಿಬಿಂಬದಲ್ಲಿ ಕಂಗೊಳಿಸುತ್ತದೆಯೋ ಅದೇ ರೀತಿಯಲ್ಲಿ ಭಗವಂತನಿಗೆ ಸಮರ್ಪಿಸುವ ಸೇವೆಯು ನಮಗೆ ಪ್ರತಿಫಲ ರೂಪದಲ್ಲಿ ಮನೋಬಲ ಹೆಚ್ಚಿಸುತ್ತದೆ’ ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಮೂಲ್ಕಿಯ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಮತ್ತು ಅಭಿವೃದ್ಧಿಸಮಿತಿಯ ನೇತೃತ್ವದಲ್ಲಿ ₹ 5ಕೋಟಿ ವೆಚ್ಚದ 11 ಕೆ.ಜಿ. ಚಿನ್ನದಲ್ಲಿ ದೇವಿಗೆ ತಯಾರಾದ ಸ್ವರ್ಣ ಪಲ್ಲಕಿಯ ಶೋಭಾ ಯಾತ್ರೆಗೆ ಮೂಲ್ಕಿಯ ವೆಂಕಟರಮಣ ದೇವಸ್ಥಾನದಲ್ಲಿ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

ಬಪ್ಪನಾಡು ಕ್ಷೇತ್ರದ ಆಡಳಿತ ಮೊಕ್ತೇಸರ ಎನ್. ಎಸ್. ಮನೋಹರ ಶೆಟ್ಟಿ, ಾನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು, ಅರ್ಚಕರಾದ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್. ದೇವಳದ ಬ್ರಹ್ಮಕಲಶೋತ್ಸವ ಮತ್ತು ಅಭಿವೃದ್ದಿ ಸಮಿತಿಯ ಅಧ್ಯಕ್ಷ ಎಂ ನಾರಾಯಣ ಶೆಟ್ಟಿ, ಮಾಜಿ ಸಚಿವ ಕೆ ಅಭಯಚಂದ್ರ ಜ್ಯೆನ್, ಕಿಲ್ಪಾಡಿ ಭಂಡಸಾಲೆ ಶೇಖರ ಶೆಟ್ಟಿ. ಕರುಣಾಕರ ಶೆಟ್ಟಿ, ಎಚ್. ವಿ. ಕೋಟ್ಯಾನ್, ಸುನೀಲ್ ಆಳ್ವ, ಕಟೀಲಿನ ಅರ್ಚಕ ಕೆ. ಲಕ್ಷ್ಮೀ ನಾರಾಯಣ ಆಸ್ರಣ್ಣ, ನಾಗೇಶ್ ಬಪ್ಪನಾಡು, ಚಂದ್ರಶೇಖರ ಸುವರ್ಣ, ವೆಂಕಟರಮಣ ದೇವಳದ ಅತುಲ್ ಕುಡ್ವ, ಅರ್ಚಕರು, ಆಡಳಿತ ಮಂಡಳಿಯ ಟ್ರಸ್ಟಿಗಳು, ದೇವಳದ ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು ಇದ್ದರು.

ಶೋಭಾ ಯಾತ್ರೆಯ ಮೆರವಣಿಗೆಯು ಮೂಲ್ಕಿಯ ಶ್ರೀ ವೆಂಕಟರಮಣ ದೇವಳದಿಂದ ಹೊರಟು ಗೇರುಕಟ್ಟೆ, ಕಾರ್ನಾಡು, ಗಾಂಧಿ ಮ್ಯೆದಾನ, ಬಿಲ್ಲವ ಸಂಘ, ಮೂಲ್ಕಿ ಬಸ್‌ ನಿಲ್ದಾಣ ಮೂಲಕ ಶ್ರೀಕ್ಷೇತ್ರ ಬಪ್ಪನಾಡಿಗೆ ತಲುಪಿ ದೇವಳಕ್ಕೆ ಸ್ವರ್ಣ ಪಲ್ಲಕಿಯನ್ನು ಸಮರ್ಪಿಸಲಾಯಿತು. ಪ್ರತೀ 50. ಮೀ. ಅಂತರದಲ್ಲಿ ಜಾತಿ ಮತ ಭೇದವಿಲ್ಲದೇ 12 ಮಂದಿ ತಂಡವಾಗಿ ಪಲ್ಲಕಿಯನ್ನು ಹೊರಲು ಅವಕಾಶ ಮಾಡಿಕೊಡಲಾಗಿತ್ತು. 50ಕ್ಕೂ ಹೆಚ್ಚು ತಂಡವು ಭಾಗವಹಿಸಿದ್ದವು. ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT