ಪುತ್ತೂರು: ‘ಕೃಷಿ ಮತ್ತು ಋಷಿ ಸಂಸ್ಕೃತಿ ಜತೆಯಾಗಿ ಸಾಗಿದ್ದು, ಇಲ್ಲಿ ಭಾವನಾತ್ಮಕ ಸಂಬಂಧವಿದೆ. ರಾಷ್ಟ್ರದ ಉನ್ನತಿಯು ಕೃಷಿಯಲ್ಲಿ ಅಡಗಿದೆ. ಕೃಷಿಕ ದೇಶಕ್ಕೆ ಅನ್ನ ನೀಡುವ ಕೆಲಸ ಮಾಡುತ್ತಿದ್ದು, ಕೃಷಿಯನ್ನು ಕೇವಲ ವ್ಯಾಪಾರದ ದೃಷ್ಟಿಯಿಂದ ನೋಡುವುದು ಸರಿಯಲ್ಲ. ಕೃಷಿ ಮತ್ತು ವ್ಯಾಪಾರ ಒಟ್ಟಾಗಿ ಸಾಗಬೇಕು’ ಎಂದು ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಇಲ್ಲಿನ ಮಹಾಲಿಂಗೇಶ್ವರ ದೇವಳದ ಸ್ವಯಂಸೇವಕರ ಸಹಯೋಗದಲ್ಲಿ ಹಡಿಲು ಭೂಮಿಯಲ್ಲಿ ಭತ್ತದ ಬೇಸಾಯ ಮಾಡುವ ಕುರಿತು ಶುಕ್ರವಾರ ನಡೆದ ಚಿಂತನಾ ಸಭೆಯಲ್ಲಿ ಅವರು ಮಾತನಾಡಿದರು.
ಶಾಸಕ ಸಂಜೀವ ಮಠಂದೂರು ಮಾತನಾಡಿ, ‘ಮಹಾಲಿಂಗೇಶ್ವರ ದೇವಳದ ಎದುರಿನ ದೇವರ ಮಾರುಗದ್ದೆ ಸೇರಿದಂತೆ ವಿವಿಧ ದೇವಳದ ವ್ಯಾಪ್ತಿಗೆ ಸೇರಿದ ಪ್ರದೇಶಗಳಲ್ಲಿ ಸ್ಥಳೀಯರು ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಹಕಾರದಲ್ಲಿ ಹಡಿಲು ಗದ್ದೆಗಳನ್ನು ಗುರುತಿಸಿ ಅಲ್ಲಿ ಭತ್ತದ ಬೆಳೆ ಬೆಳೆಸುವ ಬಗ್ಗೆ ಚಿಂತನೆ ನಡೆಸುವುದು ಉತ್ತಮ ವಿಚಾರ. ಇದರಿಂದ ಪರಿಸರ ಹಾಗೂ ಪರಂಪರೆಯನ್ನು ಎತ್ತಿ ಹಿಡಿಯುವ ಕೆಲಸ ಆಗುತ್ತದೆ. ಭತ್ತ ಬೆಳೆಯೋಣ ಬದುಕು ಕಟ್ಟೋಣ ಎಂಬ ಸಂದೇಶ ರವಾನೆಯಾಗುತ್ತದೆ’ ಎಂದರು.
ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಮಾತನಾಡಿ, ‘ದೇವಳದ ವತಿಯಿಂದ ಮಾರುಗದ್ದೆಯಲ್ಲಿ ಭತ್ತದ ಬೇಸಾಯ ಮಾಡಲಾಗುವುದು. ವಿವಿಧ ಪ್ರದೇಶಗಳಲ್ಲಿ ಬೇಸಾಯ ಮಾಡಲು ಆಸಕ್ತರಿಗೆ ಬಿತ್ತನೆ ಬೀಜಗಳನ್ನು ಒದಗಿಸುವ ಜತೆಗೆ ಅಗತ್ಯ ಸಹಕಾರ ನೀಡಲಾಗುವುದು’ ಎಂದರು.
ವಿವಿಧ ದೇವಾಲಯದ ವ್ಯಾಪ್ತಿಯಲ್ಲಿ ಚಿಂತನಾ ಸಭೆ ನಡೆಸಲು ತೀರ್ಮಾನಿಸಿ, ದಿನಾಂಕ ನಿಗದಿಗೊಳಿಸಲಾಯಿತು.
ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ನವೀನ್ಕುಮಾರ್ ಭಂಡಾರಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾರಾಯಣ ಶೆಟ್ಟಿ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ರೇಖಾ ಮೊದಲಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.