
ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ಮಂಗಳೂರು ತಾಲ್ಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನವು ಜ.4ರಂದು ತಾಲ್ಲೂಕಿನ ಗುರುಪುರ ಕೈಕಂಬದ ಮೇಘಾ ಪ್ಲಾಝಾ ಸಭಾಂಗಣದಲ್ಲಿ ನಡೆಯಲಿದೆ.
ಬೆಳಿಗ್ಗೆ 9.30ಕ್ಕೆ ಗುರುಪುರ ಕೈಕಂಬದ ಸಬೀಲುಲ್ ಹುದಾ ಅಲ್ಬಿರ್ರ್ ಶಾಲಾ ಆವರಣದಿಂದ ಪ್ರಾರಂಭವಾಗುವ ಮೆರವಣಿಗೆಯನ್ನು ಸಮ್ಮೇಳನ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಎಂ.ಎಚ್. ಮೊಹಿದೀನ್ ಅಡ್ಡೂರು ಉದ್ಘಾಟಿಸುವರು.
ಬೆಳಿಗ್ಗೆ 10.15ಕ್ಕೆ ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್ ಸಮ್ಮೇಳನ ಉದ್ಘಾಟಿಸುವರು. ಸಾಹಿತಿ ಅಬ್ದುಲ್ ರಹಿಮಾನ್ ಕುತ್ತೆತ್ತೂರು ಸಮ್ಮೇಳನದ ಅಧ್ಯಕ್ಷತೆ ವಹಿಸುವರು. ವಿವಿಧ ಅಕಾಡೆಮಿಗಳ ಅಧ್ಯಕ್ಷರು ಭಾಗವಹಿಸುವರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್. ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಶಮೀಮಾ ಕುತ್ತಾರ್ ಅವರ ‘ಪಡಿಞ್ಞಾರ್ರೊ ಪೂ’ (ಕಥಾ ಸಂಕಲನ), ಹಸೀನ ಮಲ್ನಾಡ್ ಅವರ ‘ಮಿನ್ನಾಂಪುಲು’ (ಹನಿಗವನ ಸಂಕಲನ), ಎನ್.ಎಂ. ಹನೀಫ್ ನಂದರಬೆಟ್ಟು ಅವರ ‘ಸಂಪುಕಾತ್’ (ಕವನ ಸಂಕಲನ), ಬಶೀರ್ ಅಹ್ಮದ್ ಬೆಳ್ಳಾಯಿರು ಅವರ ‘ಬೆಲ್ಚ’ (ಕವನ ಸಂಕಲನ) ಮತ್ತು ಹೈದರಲಿ ಕಾಟಿಪಳ್ಳ ಅವರ ‘ನಸೀಅತ್’ (ಕವನ ಸಂಕಲನ) ಬ್ಯಾರಿ ಕೃತಿಗಳು ಬಿಡುಗಡೆಗೊಳ್ಳಲಿವೆ ಎಂದು ಉಮರ್ ಯು.ಎಚ್, ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಧ್ಯಾಹ್ನ 12ಕ್ಕೆ ಸಮ್ಮೇಳನಾಧ್ಯಕ್ಷರ ಭಾಷಣದ ಮೇಲೆ ಚರ್ಚಾಗೋಷ್ಠಿ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಸಾಹಿತಿ ಮುಹಮ್ಮದ್ ಬಡ್ಡೂರು ಅಧ್ಯಕ್ಷತೆಯಲ್ಲಿ ಬ್ಯಾರಿ ಕವಿಗೋಷ್ಠಿ, ಮೂಡುಬಿದಿರೆ ಆಳ್ವಾಸ್ ಕಾಲೇಜಿನ ದಫ್ ತಂಡದಿಂದ ದಫ್ ಹಾಡು ಮತ್ತು ಬ್ಯಾರಿ ಹಾಡುಗಾರರ ತಂಡದಿಂದ ಹಾಡುಗಳ ಪ್ರಸ್ತುತಿ, ಸಂಜೆ 4ಕ್ಕೆ ಸಾಧಕರಿಗೆ ಸನ್ಮಾನ, ನಂತರ ಸಮಾರೋಪ ಸಮಾರಂಭ ನಡೆಯಲಿದೆ. ಬ್ಯಾರಿ ಇನ್ಫೋ.ಕಾಂನ ಮುಖ್ಯಸ್ಥ ಬಿ.ಎ. ಮುಹಮ್ಮದ್ ಅಲಿ ಸಮಾರೋಪ ಭಾಷಣ ಮಾಡುವರು. ಸಂಜೆ 6ರಿಂದ ಬ್ಯಾರಿ ನಾಟಕ ಮತ್ತು ತಾಲೀಮು ಪ್ರದರ್ಶನ ಇರಲಿದೆ ಎಂದರು.
ಜಿಲ್ಲಾ ಸಮ್ಮೇಳನವನ್ನು ಚಿಕ್ಕಮಗಳೂರಿನಲ್ಲಿ, ವಿಶ್ವ ಸಮ್ಮೇಳನವನ್ನು ವಿದೇಶದಲ್ಲಿ ಆಯೋಜಿಸಲು ಯೋಚಿಸಲಾಗಿದೆ. ಹೆಚ್ಚು ಕಾರ್ಯಕ್ರಮ ಸಂಘಟಿಸುವ ಉದ್ದೇಶದಿಂದ ಅಕಾಡೆಮಿಗೆ ಬಜೆಟ್ನಲ್ಲಿ ಹೆಚ್ಚಿನ ಅನುದಾನ ನೀಡುವಂತೆ ವಿನಂತಿಸಿ, ₹1.5 ಕೋಟಿ ಯೋಜನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಪ್ರಮುಖರಾದ ಇ.ಕೆ.ಎ. ಸಿದ್ದೀಕ್ ಅಡ್ಡೂರು, ತಾಜುದ್ದೀನ್ ಅಮ್ಮುಂಜೆ, ಯು.ಎಚ್. ಖಾಲಿದ್ ಉಜಿರೆ, ಅನ್ಸಾರ್ ಕಾಟಿಪಳ್ಳ, ಎಂ.ಜಿ. ಶಾಹುಲ್ ಹಮೀದ್ ಗುರುಪುರ, ಸಲೀಂ ಹಂಡೇಲ್, ಅಬ್ದುಲ್ ಜಲೀಲ್ ಅರಳ, ಎಂ.ಡಿ. ನವಾಝ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.