ADVERTISEMENT

30ರಿಂದ ಬೆದ್ರಡ್ಕ ಬಂಡಿ ಉತ್ಸವ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2025, 11:44 IST
Last Updated 20 ಮಾರ್ಚ್ 2025, 11:44 IST

ಕಾಸರಗೋಡು: ಬೆದ್ರಡ್ಕ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ಜಾತ್ರೆ, ಬಂಡಿ ಉತ್ಸವ ಮಾರ್ಚ್‌ 30ರಿಂದ ಏ.4ವರೆಗೆ ನಡೆಯಲಿದೆ.

ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ 31ರಂದು ಸಂಜೆ 6.30ಕ್ಕೆ ಯಕ್ಷಗಾನ, ಏ.1ರಂದು ಸಂಜೆ 7 ಗಂಟೆಗೆ ಸ್ಯಾಕ್ಸೊಫೋನ್ ವಾದನ, ರಾತ್ರಿ 8 ಗಂಟೆಗೆ ಕುಣಿತ ಭಜನೆ, 9 ಗಂಟೆಗೆ ನೃತ್ಯ ವೈವಿಧ್ಯ, ಏ.2ರಂದು ಮಧ್ಯಾಹ್ನ 1 ಗಂಟೆಗೆ ಪೂಮಾಣಿ ದೈವದ ನೇಮ, ಸಂಜೆ 7ರಿಂದ ಫ್ಯೂಷನ್ ತಿರುವಾದಿರ, ರಾತ್ರಿ 9ಕ್ಕೆ ಸಾಹಿತ್ಯ, ಗಾನ ನೃತ್ಯ ವೈಭವ, ಏ.3ರಂದು ಮಧ್ಯಾಹ್ನ 1 ಗಂಟೆಗೆ ಬೀರ್ಣಾಳ್ವ ದೈವದ ನೇಮ, 3.30ಕ್ಕೆ ಧೂಮಾವತಿ ದೈವದ ನೇಮ ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

23ರಿಂದ ನೇಮೋತ್ಸವ

ADVERTISEMENT

ಕಾಸರಗೋಡು: ಮಂಜೇಶ್ವರ ಬಳಿಯ ಉದ್ಯಾವರ ಮಾಡ ಕೊಳಕೆ ನಾಗಬ್ರಹ್ಮ ಉಳ್ಳಾಳ್ತಿ ಕೋಮರಾಯ ಚಾಮುಂಡೇಶ್ವರಿ ದೈವಸ್ಥಾನದ ನೇಮೋತ್ಸವ ಮಾರ್ಚ್‌ 23, 24ರಂದು ನಡೆಯಲಿದೆ. ಪ್ರತಿದಿನ ವಿವಿಧ ದೈವಗಳ ಕೋಲ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಶಿಲಾನ್ಯಾಸ

ಕಾಸರಗೋಡು: ಮವ್ವಾರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ನಿರ್ಮಾಣ ಸಂಬಂಧ ಶಿಲಾನ್ಯಾಸ ನಡೆಯಿತು.

ಎಡನೀರು ಮಠಾಧೀಶ ಸಚ್ಚಿದಾನಂದ ಭಾರತಿ ಸ್ವಾಮೀಜಿ ಶಿಲಾನ್ಯಾಸ ನೆರವೇರಿಸಿದರು. ಶಾಲೆಯ ವ್ಯವಸ್ಥಾಪಕ ಗಣೇಶ್ ಭಟ್, ಕುಂಬಡಾಜೆ ಗ್ರಾಮ ಪಂಚಾಯಿತಿ ಸದಸ್ಯ ಎಂ.ಸಂಜೀವ ಶೆಟ್ಟಿ, ಆನಂದ ಕೆ.ಮವ್ವಾರು, ಶ್ರೀಜಾ, ವಿಶ್ವನಾಥ ಬಳ್ಳಪದವು, ಸುನಿತಾ ರೈ, ರವೀಂದ್ರ ರೈ ಗೋಸಾಡ, ಸುಧಾಮ ಗೋಸಾಡ ಭಾಗವಹಿಸಿದ್ದರು.

22ರಿಂದ ಧರ್ಮಕೋಲ

ಕಾಸರಗೋಡು: ಕಾನತ್ತಿಲದ ಧೂಮಾವತಿ ದೈವದ ಧರ್ಮಕೋಲ ಮಾರ್ಚ್‌ 22, 23ರಂದು ನಡೆಯಲಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

21ರಿಂದ ಕಾಲಾವಧಿ ನೇಮ

ಕಾಸರಗೋಡು: ಕುಂಬಳೆ ಆರಿಕ್ಕಾಡಿ ಧೂಮಾವತಿ ದೈವಸ್ಥಾನದಲ್ಲಿ ಕಾಲಾವಧಿ ನೇಮ ಮಾರ್ಚ್‌ 21, 22ರಂದು ನಡೆಯಲಿದೆ. ಪ್ರತಿದಿನ ವಿವಿಧ ದೈವಗಳ ನೇಮ ಸಹಿತ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

ಮನೆಗೆ ಬೆಂಕಿ

ಕಾಸರಗೋಡು: ನೆಲ್ಲಿಕಟ್ಟೆ ಬಳಿಯ ಪೈಕ ಚಂದ್ರಪಾರೆ ಎಂಬಲ್ಲಿನ ಶಾಫಿ ಎಂಬುವರ ಮನೆಗೆ ಬೆಂಕಿ ತಗುಲಿ ಹಾನಿಯಾಗಿದೆ.

ಅಡುಗೆ ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ವಿದ್ಯುತ್‌ ಉಪಕರಣಗಳೂ ಭಸ್ಮವಾಗಿವೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದಾಗಿ ಅವಘಡ ನಡೆದಿದೆ ಎಂದು ಶಂಕಿಸಲಾಗಿದೆ.

ಎಂಡಿಎಂಎ ಸಹಿತ ಬಂಧನ

ಕಾಸರಗೋಡು: ಉಪ್ಪಳ ರೈಲುನಿಲ್ದಾಣದ ಬಳಿ 7.6 ಗ್ರಾಂ ಎಂಡಿಎಂಎ ಸಹಿತ ಮಣಿಮುಂಡ ನಿವಾಸಿ ಮುಹಮ್ಮದ್ ಫಿರೋಝ್ (25) ಎಂಬಾತನನ್ನು, 4.65 ಗ್ರಾಂ ಎಂಡಿಎಂಎ ಸಹಿತ ಕುಂಜತ್ತೂರು ಪದವು ನಿವಾಸಿ ಆಲಂ ಇಕ್ಬಾಲ್ (25) ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.

ರೈಲುಹಳಿಯಲ್ಲಿ ಶವ ಪತ್ತೆ

ಕಾಸರಗೋಡು: ಕಾಞಂಗಾಡು ರೈಲು ನಿಲ್ದಾಣ ಬಳಿಯ ಹಳಿಯಲ್ಲಿ ಮಾವುಂಗಾಲ್ ಪೇರಡ್ಕ ನಿವಾಸಿ ಜಮೀಶ್ ಫಿಲಿಪ್ (40) ಎಂಬುವರ ಶವ ಗುರುವಾರ ಪತ್ತೆಯಾಗಿದೆ.

ಕೊಲ್ಲಿರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದ ಅವರು ಕಳೆದ ತಿಂಗಳು ಊರಿಗೆ ಬಂದಿದ್ದರು. ಹೊಸದುರ್ಗ ಪೊಲೀಸರು ಮಹಜರು ನಡೆಸಿ ಶವವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.