ADVERTISEMENT

ಬಿಜೆಪಿ ಮುಖಂಡನ ಕಾರು ವಶ: ಚಾಲಕ ಬಂಧನ

ಕಡಬ: ಮಹಿಳೆಗೆ ಡಿಕ್ಕಿ ಹೊಡೆದು ಕಾರು ಪರಾರಿ ಪ್ರಕರಣ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 17:48 IST
Last Updated 14 ಫೆಬ್ರುವರಿ 2020, 17:48 IST

ಕಡಬ (ಉಪ್ಪಿನಂಗಡಿ): ಆರು ತಿಂಗಳ ಹಿಂದೆ ಕಡಬ ಸಮೀಪದ ನೆಟ್ಟಣ ಎಂಬಲ್ಲಿ ಡಿಕ್ಕಿ ಹೊಡೆದು ಮಹಿಳೆಯ ಸಾವಿಗೆ ಕಾರಣವಾಗಿದ್ದ ಕಾರು ಪರಾರಿ ಆದ ಪ್ರಕರಣದ ಆರೋಪಿ ಚಾಲಕನನ್ನು ಬಂಧಿಸಿದ ಕಡಬ ಪೊಲೀಸರು ಕಾರನ್ನು ವಶಪಡಿಸಿದ್ದಾರೆ. ಪರಾರಿ ಆಗಿರುವ ಕಾರು ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರಿಗೆ ಸೇರಿದ್ದಾಗಿದೆ.

‘2019 ಸೆಪ್ಟೆಂಬರ್ 9ರಂದು ಬಿಳಿನೆಲೆ ಗ್ರಾಮದ ನೆಟ್ಟಣ ಎಂಬಲ್ಲಿ ಸುಮತಿ (48) ಎಂಬುವರಿಗೆ ಕಾರು ಡಿಕ್ಕಿ ಹೊಡೆದು ಪರಾರಿ ಆಗಿತ್ತು. ಮಹಿಳೆ ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತಪಟ್ಟಿದ್ದರು. ಆದರೆ ಡಿಕ್ಕಿ ಹೊಡೆದ ಕಾರು ನಿಲ್ಲಿಸದೆ ಪರಾರಿ ಆಗಿತ್ತು. ಇದೀಗ ಪರಾರಿ ಆಗಿರುವ ಕಾರನ್ನು ಪತ್ತೆ ಹಚ್ಚಿದ್ದು, ಪ್ರಕರಣ ದಾಖಲಿಸಲಾಗಿದೆ’ ಎಂದು ಕಡಬ ಪೊಲೀಸರು ತಿಳಿಸಿದ್ದಾರೆ.

‘ಮಹಿಳೆಗೆ ಡಿಕ್ಕಿ ಹೊಡೆದು ಪರಾರಿ ಆಗಿರುವ ಕಾರಿನ ಬಗ್ಗೆ ಸಿಸಿಟಿವಿ ಕ್ಯಾಮೆರಾ ದೃಶ್ಯ ಆಧರಿಸಿ ತನಿಖೆ ನಡೆಸಿ, ಪ್ರಕರಣವನ್ನು ಭೇದಿಸಲಾಗಿದೆ. ಚಾಲಕ ಪ್ರಶಾಂತ್ ನನ್ನು ಬಂಧಿಸಲಾಗಿದೆ’ ಎಂದು ಗ್ರಾಮಾಂತರ ಪೊಲೀಸ್ ಇನ್‌ಸ್ಪೆಕ್ಟರ್ ನಾಗೇಶ್ ಕದ್ರಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.