ಮುಖ್ಯಮಂತ್ರಿ ಸಿದ್ದರಾಮಯ್ಯ
ಮಂಗಳೂರು: 'ಬಿಜೆಪಿಯವರು ಬಜೆಟ್ ಓದುವುದಿಲ್ಲ. ಅವರಿಗೆ ಅರ್ಥಶಾಸ್ತ್ರ ಗೊತ್ತಾಗುವುದಿಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಲ್ಲಿನ ಬಜಪೆ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, 'ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ... ಅಭಿವೃದ್ಧಿ ಶೂನ್ಯ.. ಎಂದು ಬಿಜೆಪಿಯವರು ಹೇಳುತ್ತಾರೆ. ಬಡವರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದು ಅಭಿವೃದ್ಧಿ ಅಲ್ಲವೇ. ನಮ್ಮ ಸರ್ಕಾರ ಬಂದು ಒಂದು ವರ್ಷವಾಗಿದೆ. ನಾವು ಏನೇನು ಕೆಲಸ ಕಾರ್ಯ ಮಾಡಿದ್ದೇವೆ ಎಂದು ಜನರಿಗೆ ತಿಳಿಸಿದ್ದೇವೆ. ಬಿಜೆಪಿಯವರು ಸುಳ್ಳು ಹೇಳುತ್ತಾರೆ. ನೀವು ಸುಳ್ಳು ಹೇಳುತ್ತೀರಾ' ಎಂದು ಪ್ರಶ್ನಿಸಿದರು.
'ನೀರಾವರಿಗೆ ಕಳೆದ ಸಾಲಿನಲ್ಲಿ ₹16 ಸಾವಿರ ಕೋಟಿ ಒದಗಿಸಲಾಗಿತ್ತು. ಈ ವರ್ಷ ₹18 ಸಾವಿರ ಕೋಟಿ ಮೀಸಲಿಟ್ಟಿದ್ದೇವೆ. ಗ್ಯಾರಂಟಿ ಯೋಜನೆಗಳನ್ನೂ ಜಾರಿಗೊಳಿಸಿದ್ದೇವೆ. ಇಷ್ಟಾಗಿಯೂ ಏನೂ ಮಾಡಿಲ್ಲ ಎಂದರೆ ಏನು ಹೇಳಲು ಸಾಧ್ಯ' ಎಂದರು.
'ದೇಶಕ್ಕೆ ರಾಜಕೀಯ ಸ್ವಾತಂತ್ರ್ಯ ಬಂದರೆ ಸಾಲದು. ಜನರಿಗೆ ಆರ್ಥಿಕ ಮತ್ತು ಸಾಮಾಜಿಕ ಶಕ್ತಿ ಬಂದಾಗ ಮಾತ್ರ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ. ಅಂಬೇಡ್ಕರ್ ಅವರೂ ಇದೇ ಮಾತನ್ನು ಹೇಳಿದ್ದರು' ಎಂದರು.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಲು ಬಯಸದ ಮುಖ್ಯಮಂತ್ರಿಯವರು ಬೆಳ್ತಂಗಡಿಯ ಮಾಜಿ ಶಾಸಕ ದಿ.ವಸಂತ ಬಂಗೇರ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.