ADVERTISEMENT

ಸಿದ್ದರಾಮಣ್ಣನ ಗೂಡೆಲ್ಲಿದೆ? ‘ವರುಣ’ದಿಂದ ಆಗಲೇ ಹೊರಗಟ್ಟಿ ಆಗಿದೆ: ನಳಿನ್ ಕುಮಾರ್

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2020, 8:01 IST
Last Updated 11 ನವೆಂಬರ್ 2020, 8:01 IST
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್   

ಮಂಗಳೂರು: ‘ಸಿದ್ದರಾಮಯ್ಯ ಅವರು ‘ಮೋದಿ ಅಲೆ ಎಲ್ಲಿದೆ’ ಎಂದು ಕೇಳುತ್ತಿದ್ದರು. ಈಗ ಜನರು ಪ್ರಶ್ನಿಸುತ್ತಿದ್ದಾರೆ ‘ಸಿದ್ದರಾಮಣ್ಣನ ಗೂಡೆಲ್ಲಿದೆ? ‘ವರುಣ’ದಿಂದ ಆಗಲೇ ಹೊರಗಟ್ಟಿ ಆಗಿದೆ. ಆರ್.ಆರ್.ನಗರ, ಶಿರಾದಿಂದಲೂ ಹೊರಗೆ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಬಾದಾಮಿಯಿಂದಲೂ ಜನರು ನಿಮ್ಮನ್ನು ಹೊರಗಿಡುತ್ತಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ತಿರುಗೇಟು ನೀಡಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಂದೆ ಮುಖ್ಯಮಂತ್ರಿಯಾಗುವ ಹಗಲುಗನಸನ್ನು ಬಿಟ್ಟುಬಿಡಿ. ಸ್ವಯಂಘೋಷಿತ ನಾಯಕತ್ವದಿಂದ ಕೆಳಗಿಳಿಯಿರಿ. ವಿರೋಧ ಪಕ್ಷದ ಜವಾಬ್ದಾರಿಯನ್ನು ನಿರ್ವಹಿಸಿ ಎಂದು ಜನರು ಕಾಂಗ್ರೆಸ್‌ಗೆ ಆಶೀರ್ವದಿಸಿದ್ದಾರೆ. ಇನ್ನು 10 ವರ್ಷ ನಾವು ಕಾಂಗ್ರೆಸ್‌ಗೆ ಅಧಿಕಾರ ಕೊಡುವುದಿಲ್ಲ. ಮುಂದಿನ ಚುನಾವಣೆಯಲ್ಲೂ ಬಿಜೆಪಿ ಅಧಿಕಾರ ಹಿಡಿಯುತ್ತದೆ’ ಎಂದರು.

‘ಬಾಯಿಗೆ ಬಂದ ಹಾಗೆ ಮಾತನಾಡುವುದು ಕಾಂಗ್ರೆಸ್‌ಗೆ ಹಿತವಲ್ಲ. ಉಪಚುನಾವಣೆ ಫಲಿತಾಂಶದ ಮೂಲಕ ಜನರು, ಕಾಂಗ್ರೆಸ್‌ಗೆ ಮೌನವಾಗಿರುವಂತೆ ಸಂದೇಶ ನೀಡಿದ್ದಾರೆ. ಕಾಂಗ್ರೆಸ್‌ನ ಎಲ್ಲ ಟೀಕೆಗಳು ಸುಳ್ಳೆಂದು ಉಪಚುನಾವಣೆ ಫಲಿತಾಂಶದಿಂದ ಸಾಬೀತಾಗಿದೆ. ರಾಜ್ಯದಲ್ಲಿ ಮುಂದಿನ ಎರಡೂವರೆ ವರ್ಷ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲೇ ಬಿಜೆಪಿ ಆಡಳಿತ ನಡೆಸುತ್ತದೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.