ಉಳ್ಳಾಲ: ‘ಮಂಗಳೂರಿನ ಬ್ಲಡ್ ಡೋನರ್ಸ್ ವತಿಯಿಂದ 300ನೇ ರಕ್ತದಾನ ಶಿಬಿರ ಇದೇ 20ರಂದು ಬಾಳೆಪುಣಿ ಗ್ರಾಮದ ಹೂಹಾಕುವ ಕಲ್ಲಿನ ಎಸ್. ಕೆ. ಸಭಾಭವನದಲ್ಲಿ ಆಯೋಜಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಸಿದ್ದಿಕ್ ಮಂಜೇಶ್ವರ ಹೇಳಿದರು.
ಸಂಘಟನೆಯ ಸದಸ್ಯರ ಸಾಂಘಿಕ ಪ್ರಯತ್ನದಿಂದ 299 ರಕ್ತದಾನ ಶಿಬಿರ ಆಯೋಜಿಸಿ, ದಾನಿಗಳಿಂದ 29 ಸಾವಿರ ಯೂನಿಟ್ ರಕ್ತ ಸಂಗ್ರಹಿಸಿ ಅರ್ಹ ಫಲಾನುಭವಿಗಳಿಗೆ ಪೂರೈಸಿದ ಸಂಸ್ಥೆ ನಮ್ಮದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಸಂಸ್ಥೆಯು ಶಿಬಿರವನ್ನು ಕೇವಲ ದಕ್ಷಿಣ ಕನ್ನಡ ಜಿಲ್ಲೆಗೆ ಸೀಮಿತಗೊಳಿಸದೆ ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು ಮಾತ್ರವಲ್ಲದೆ ಕೊಲ್ಲಿ ರಾಷ್ಟ್ರಗಳಾದ ಯುಎಇ, ಸೌದಿ ಅರೇಬಿಯಾ, ಬಹರೈನ್, ಒಮನ್ನಲ್ಲಿಯೂ ಆಯೋಜಿಸಿ, ಸೂಕ್ತ ಸಮಯದಲ್ಲಿ ರೋಗಿಗಳಿಗೆ ರಕ್ತ ಪೂರೈಸಲಾಗುತ್ತಿದೆ’ ಎಂದರು.
‘ಸಂಘಟನೆಯು ರಕ್ತದಾನಕ್ಕೆ ಮಹತ್ವ ಕೊಡುವುದರ ಜೊತೆಗೆ ಜೊತೆಗೆ ‘ಸೂರಿಲ್ಲದವರಿಗೆ ಸೂರು’ ಎಂಬ ಯೋಜನೆಯಡಿಯಲ್ಲಿ ಮುಡಿಪು ಪರಿಸರದ ಒಂದು ಅರ್ಹ ಕುಟುಂಬಕ್ಕೆ ದಾನಿಗಳ ಸಹಕಾರದಿಂದ ಬೈತುನ್ನಾರ್ ಎಂಬ ಶೀರ್ಷಿಕೆಯಡಿಯಲ್ಲಿ ಮನೆಯನ್ನು ನಿರ್ಮಿಸಿಕೊಟ್ಟಿದೆ’ ಎಂದರು.
ಪ್ರಧಾನ ಕಾರ್ಯದರ್ಶಿ ನವಾಝ್ ಕಲ್ಲರಕೋಡಿ, ಕಾರ್ಯದರ್ಶಿ ರಝಾಕ್ ಸಾಲ್ಮರ, ಕಾರ್ಯನಿರ್ವಹಕ ಶಾಹುಲ್ ಹಮೀದ್ ಕಾಶಿಪಟ್ಣ, ಫಾರೂಕು ಆತೂರು, ಸೌದಿ ಘಟಕದ ಇರ್ಷಾದ್ ಉಚ್ಚಿಲ ಹಾಗೂ ದಮಾಮ್ ಘಟಕದ ಪರ್ಝಾನ್ ಸಿದ್ಧಕಟ್ಟೆ ಇದ್ದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.