ಉಳ್ಳಾಲ: ಬಸ್ಸಿಂದ ಬಿದ್ದು ವಾರದಿಂದ ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಪಿಯುಸಿ ವಿದ್ಯಾರ್ಥಿಯ ಮೆದುಳು ನಿಷ್ಕ್ರಿಯಗೊಂಡಿದ್ದು, ಹೆತ್ತವರು ಶೋಕದ ನಡುವೆಯೂ ಆತನ ಅಂಗಾಂಗ ದಾನ ನಡೆಸುವ ತೀರ್ಮಾನ ಮಾಡಿದ್ದಾರೆ.
ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ತ್ಯಾಗರಾಜ್ - ಮಮತಾ ಕರ್ಕೇರ ದಂಪತಿ ಪುತ್ರ ಯಶರಾಜ್ (16) ಅಪಘಾತದಿಂದ ಗಾಯಗೊಂಡ ವಿದ್ಯಾರ್ಥಿ.
ಯಶರಾಜ್ ನಗರದ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿದ್ದರು. ಸೆ.7 ರ ಬುಧವಾರ ಬೆಳಿಗ್ಗೆ ಯಶರಾಜ್ ಉಳ್ಳಾಲ , ಮಾಸ್ತಿಕಟ್ಟೆಯಿಂದ ಸಿಟಿ ಬಸ್ಸಲ್ಲಿ ಕಾಲೇಜಿಗೆ ಪ್ರಯಾಣಿಸುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಆ್ಯಡಂ ಕುದ್ರುವಿನಲ್ಲಿ ಬಸ್ಸಿನಿಂದ ಹೊರಗೆ ಎಸೆಯಲ್ಪಟ್ಟಿದ್ದ. ತಲೆಗೆ ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ಮಂಗಳೂರಿನ ಇಂಡಿಯಾನ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ವಾರದಿಂದ ನಿರಂತರ ಚಿಕಿತ್ಸೆ ನೀಡುತ್ತಿದ್ದರೂ ಯಶರಾಜ್ ಆರೋಗ್ಯದಲ್ಲಿ ಚೇತರಿಕೆ ಕಂಡಿರಲಿಲ್ಲ. ಮಂಗಳವಾರ ಮಧ್ಯಾಹ್ನ ಮೆದುಳು ಕೂಡ ನಿಷ್ಕ್ರಿಯಗೊಂಡಿತ್ತು.
ಮಗನ ಅಂಗಾಂಗ ದಾನಕ್ಕೆ ಪೋಷಕರು ಮಧ್ಯಾಹ್ನವೇ ಒಪ್ಪಿಗೆ ನೀಡಿದ್ದಾರೆ. ದಾನ ಪ್ರಕ್ರಿಯೆಗಳು ಆರಂಭವಾಗಬೇಕಾದರೆ ಸಮಯ ತಗಲುವುದು. ಆಸ್ಪತ್ರೆಯಿಂದ ಯಾವುದೇ ದೃಢೀಕರಣ ನೀಡಲಾಗಿಲ್ಲ ಎಂದು ಇಂಡಿಯಾನ ಆಸ್ಪತ್ರೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.