
ಕುಂದಾಪುರ: ಆದಿ ಶಂಕರಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಕ್ಷೇತ್ರ ಎನ್ನುವ ಪ್ರಸಿದ್ಧಿ ಹೊಂದಿರುವ ತಾಲ್ಲೂಕಿನ ಮಾರಣಕಟ್ಟೆಯ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಬುಧವಾರ ನಡೆದ ಮಕರ ಸಂಕ್ರಮಣ ಉತ್ಸವ, ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ದೇಶ– ವಿದೇಶದಿಂದ ಬಂದಿದ್ದ ಸಾವಿರಾರು ಭಕ್ತರು ದೇವರ ದರ್ಶನ ಪಡೆದರು.
ಮಕರ ಸಂಕ್ರಮಣದಂದು ನಡೆಯುವ ಕ್ಷೇತ್ರದ ಉತ್ಸವಕ್ಕಾಗಿ ನಾಡಿನ ಹಲವೆಡೆಯಿಂದ ಬರುವ ಸಾವಿರಾರು ಭಕ್ತರು, ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತು ಮಂಗಳಾರತಿ ನೀಡಿ, ಹೂ ಹಣ್ಣು ಕಾಯಿ ನೆರವೇರಿಸಿ, ಹರಕೆ ಸಲ್ಲಿಸುವುದು ವಾಡಿಕೆ. ಮುಂಬೈ, ಬೆಂಗಳೂರು, ಗೋವಾ, ಹುಬ್ಬಳ್ಳಿ, ಬೆಳಗಾವಿ, ಪೂನಾ ಸೇರಿದಂತೆ ದೇಶದ ವಿವಿಧೆಡೆ ಮತ್ತು ವಿದೇಶದಲ್ಲಿ ನೆಲೆಸಿರುವ ಭಕ್ತರು ಜಾತ್ರೆಗೆ ಊರಿಗೆ ಬರುವುದನ್ನು ರೂಢಿಸಿಕೊಂಡಿದ್ದಾರೆ. ತಿಂಗಳ ಕಾಲ ನಡೆಯುವ ‘ಮಾರಣಕಟ್ಟೆ ಹಬ್ಬ’ ಎಂಬ ಪ್ರತೀತಿ ಹೊಂದಿರುವ ಜಾತ್ರೆಯ ಮೊದಲ ಮೂರು ದಿನ ಕಾಲಿಡಲು ಜಾಗವಿರದಂತೆ ಭಕ್ತರು ಸೇರುತ್ತಾರೆ.
ಬುಧವಾರ ಬೆಳಿಗ್ಗೆ ದೇವಸ್ಥಾನದ ಅರ್ಚಕ ಮಹೇಶ್ ಮಂಜರ ನೇತೃತ್ವದಲ್ಲಿ ತುಳಸಿ ಕಟ್ಟೆ ಪೂಜೆ, ಮಂಗಳಾರತಿ, ಇನ್ನಿತರ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಶಾಸಕ ಗುರುರಾಜ್ ಗಂಟಿಹೊಳೆ, ಮುಖಂಡರಾದ ಕೆ. ಗೋಪಾಲ ಪೂಜಾರಿ, ಬಿ.ಎಂ. ಸುಕುಮಾರ ಶೆಟ್ಟಿ, ದೇವಸ್ಥಾನದ ಆಡಳಿತ ಧರ್ಮದರ್ಶಿ ಸದಾಶಿವ ಶೆಟ್ಟಿ, ನಿವೃತ್ತ ಕೃಷಿ ಅಧಿಕಾರಿ ರಘುರಾಮ್ ಶೆಟ್ಟಿ, ದೇವಸ್ಥಾನದ ವ್ಯವಸ್ಥಾಪಕ ನಾರಾಯಣ ಶೆಟ್ಟಿ, ಉದ್ಯಮಿಗಳಾದ ಹೈದರ್ಬಾದ್ನ ಕೃಷ್ಣಮೂರ್ತಿ ಮಂಜರು, ಮುಂಬೈನ ಸತೀಶ್ ಕೊಠಾರಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ವಂಡಬಳ್ಳಿ ಜಯರಾಮ ಶೆಟ್ಟಿ, ಡಾ.ಅತುಲ್ ಕುಮಾರ ಶೆಟ್ಟಿ, ದೈವ ಪಾತ್ರಿಗಳಾದ ಶ್ರೀಧರ ಮರ್ಡಿ, ಗಣಪಯ್ಯ ಶೆಟ್ಟಿ, ಹಿಂದಿನ ಧರ್ಮದರ್ಶಿ ಎನ್. ಶಿವರಾಮ್ ಶೆಟ್ಟಿ, ಚಿತ್ತೂರು ಮಂಜಯ್ಯ ಶೆಟ್ಟಿ ಭಾಗವಹಿಸಿದ್ದರು.
ಎಲ್ಲರೂ ಸ್ವಯಂ ಸೇವಕರು: ಜಾತ್ರೆಗೆ ಬರುವ ಸಾವಿರಾರು ಸಂಖ್ಯೆಯ ಭಕ್ತರನ್ನು ಸುಧಾರಿಸುವುದೇ ದೊಡ್ಡ ಸವಾಲಿನ ಕೆಲಸ. ಪೊಲೀಸ್ ಇಲಾಖೆಯೊಂದಿಗೆ ದೇವಸ್ಥಾನದ ಸಿಬ್ಬಂದಿ, ಭಕ್ತರು ಅಂತಸ್ತು, ಸ್ಥಾನಮಾನ ಮರೆತು ಸ್ವಯಂ ಸೇವಕರಾಗಿ ತೊಡಗಿಸಿಕೊಳ್ಳುತ್ತಾರೆ. ಸರತಿಯಲ್ಲಿ ನಿಲ್ಲಿಸುವುದು, ಅನ್ನ ಸಂತರ್ಪಣೆ, ಪ್ರಸಾದ ವಿತರಣೆ, ಭಕ್ತರ ಬೇಡಿಕೆಗಳನ್ನು ಪೂರೈಸಲು ಸಹಕರಿಸುತ್ತಾರೆ. ಕೊಲ್ಲೂರು ಪೊಲೀಸ್ ಠಾಣೆಯಿಂದ ಬಿಗು ಬಂದೋಬಸ್ತ್ ವ್ಯವಸ್ಥೆ ಏರ್ಪಡಿಸಲಾಗಿತ್ತು.
ಕೆಂಡ ಸೇವೆ: ಜಾತ್ರೆಯ ಮೊದಲ ದಿನ ರಾತ್ರಿ ನಡೆದ ಕೆಂಡ ಸೇವೆಯಲ್ಲಿ ಉಡುಪಿ, ಕುಂದಾಪುರ, ಬೈಂದೂರು, ಕಾರ್ಕಳ, ಬ್ರಹ್ಮಾವರ, ಪಡುಬಿದ್ರಿ, ಮೂಲ್ಕಿಯಿಂದ ಬಂದಿದ್ದ ಭಕ್ತರು ಕೆಂಡದ ರಾಶಿ ತುಳಿದು ಹರಕೆ ತೀರಿಸಿದರು. ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಕೆಂಡ ಸೇವೆಯಲ್ಲಿ ಭಾಗಿಯಾಗುವುದು ಇಲ್ಲಿನ ವಿಶೇಷ. ಜಾತ್ರೆ, ಕೆಂಡ ಮಹೋತ್ಸವದಲ್ಲಿ ನೂಕುನುಗ್ಗಲು ಆಗದಂತೆ ಆಡಳಿತ ಮಂಡಳಿ ಸುಸಜ್ಜಿತ ವ್ಯವಸ್ಥೆ ಕಲ್ಪಿಸಿದೆ.
ಗುರುವಾರ ಹಾಗೂ ಶುಕ್ರವಾರ (ಜ. 15 ಮತ್ತು 16) ಮಂಡಲ ಸೇವೆ, ಯಕ್ಷಗಾನ ಸೇವೆ ನಡೆಯಲಿದೆ. ಜಾತ್ರೆಯ ಮೂರು ದಿನ ವಿಶೇಷ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಮುಂಬೈಯಲ್ಲಿ ಕ್ಯಾಟರಿಂಗ್ ಉದ್ಯಮಿಯಾಗಿರುವ ನಾಯ್ಕನಕಟ್ಟೆಯ ಸತೀಶ್ ಕೊಠಾರಿ ಹಲವು ವರ್ಷಗಳಿಂದ ಅನ್ನ ಸಂತರ್ಪಣೆ ಸೇವೆ ನೀಡುತ್ತಿದ್ದಾರೆ.
ದೇಶ– ವಿದೇಶದಿಂದ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ಸಂಕ್ರಮಣ ಜಾತ್ರೆಗೆ ಬರುವ ಭಕ್ತರು ಗಂಟೆಗಳ ಕಾಲ ತಲೆ ಮೇಲೆ ಸೇವಂತಿಗೆ ಬುಟ್ಟಿ ಹೊತ್ತು ಮಂಗಳಾರತಿಯೊಂದಿಗೆ ದೇವರಿಗೆ ಒಪ್ಪಿಸುತ್ತಾರೆ.ವಂಡಬಳ್ಳಿ ಜಯರಾಮ ಶೆಟ್ಟಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಮಾಜಿ ಟ್ರಸ್ಟಿ
ಕಣ್ಣು ಹಾಯಿಸಿದೆಲ್ಲೆಡೆ ಸೇವಂತಿಗೆ ಮಾರಣಕಟ್ಟೆ ಜಾತ್ರೆಯಲ್ಲಿ ಎಲ್ಲಿ ಕಣ್ಣು ಹಾಯಿಸಿದರೂ ಹಳದಿ ಬಣ್ಣದ ಸೇವಂತಿಗೆಯೇ ಕಾಣುತ್ತದೆ. ಬ್ರಹ್ಮ ಲಿಂಗೇಶ್ವರನಿಗೆ ಪ್ರಿಯವಾದ ಸೇವಂತಿಗೆಯನ್ನು ಅರ್ಪಿಸುವುದು ವಾಡಿಕೆ. ತಲೆ ಮೇಲೆ ಹಣ್ಣು– ಕಾಯಿ ಸೇವಂತಿಗೆ ಹೂವಿನ ಬುಟ್ಟಿ ಹೊತ್ತು ತಂದು ಅರ್ಪಿಸಿ ಅರ್ಚಕರಿಂದ ಪ್ರಸಾದ ಸ್ವೀಕರಿಸುತ್ತಾರೆ. ಹೆಮ್ಮಾಡಿ ಆಸುಪಾಸಿನಲ್ಲಿ ಬೆಳೆಯುವ ಹಳದಿ ಬಣ್ಣದ ಸೇವಂತಿಗೆಗೆ ಹಬ್ಬದ ಸಂದರ್ಭ ಬಹುಬೇಡಿಕೆ. ಮೊದಲ ಹೂವುಗಳನ್ನು ಬ್ರಹ್ಮಲಿಂಗೇಶ್ವರನಿಗೆ ಅರ್ಪಿಸಬೇಕು ಎನ್ನುವ ವಾಡಿಕೆ ಇದ್ದು ಸೇವಂತಿಗೆ ಬೆಳೆದ ಬೆಳೆಗಾರರು ಸೇವಂತಿಗೆ ಮಾಲೆ ಅರ್ಪಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.