ಉಜಿರೆ: ಧರ್ಮಸ್ಥಳ ಗ್ರಾಮದ ಕನ್ಯಾಡಿ ರಾಮಕ್ಷೇತ್ರದಲ್ಲಿ ಮಹಾಮಂಡಲೇಶ್ವರ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ 17ನೇ ವರ್ಷದ ಪಟ್ಟಾಭಿಷೇಕ ವರ್ಧಂತ್ಯುತ್ಸವ ಬುಧವಾರ ಪಾದಪೂಜೆ, ಕಿರೀಟಧಾರಣೆ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆಯಿತು.
ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದ ಬಂದರು ಮತ್ತು ಮೀನುಗಾರಿಕಾ ಸಚಿವ ಮಾಂಕಾಳ್ ಎಸ್.ವೈದ್ಯ, ಕತ್ತಲೆಯಿಂದ ಬೆಳಕಿನ ಕಡೆಗೆ, ಅಜ್ಞಾನದಿಂದ ಸುಜ್ಞಾನದ ಕಡೆಗೆ ಸಾಗುವಂತೆ ಸಾರ್ಥಕ ಬದುಕಿಗೆ ಮಾರ್ಗದರ್ಶನ ಮಾಡುವವರೇ ಗುರುಗಳು. ಶ್ರದ್ಧಾ-ಭಕ್ತಿಯಿಂದ ಮಾಡುವ ಗುರುಗಳ ಸೇವೆಯಿಂದ ಭಕ್ತರ ಕಲ್ಯಾಣವಾಗುತ್ತದೆ. ಸುಖ-ಶಾಂತಿ, ನೆಮ್ಮದಿಯ ಜೀವನ ಸಾಧ್ಯವಾಗುತ್ತದೆ ಎಂದು ಹೇಳಿದರು.
ಭಕ್ತರ ಕಲ್ಯಾಣಕ್ಕಾಗಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಗುರುಗಳು ನಿರಂತರ ಮಾಡುವ ಮಾರ್ಗದರ್ಶನ, ಸೇವೆ ಮತ್ತು ತ್ಯಾಗ ಶ್ಲಾಘನೀಯ. ಪೂಜ್ಯರು ಶಾಖಾ ಮಠಗಳನ್ನು ತೆರೆದು ಆಧ್ಯಾತ್ಮಿಕ ಉನ್ನತಿಗೆ ಪ್ರೇರಣೆ ನೀಡುತ್ತಿದ್ದಾರೆ. ಅವರ ಶಾಖಾ ಮಠಗಳು ಭಕ್ತರಿಗೆ ಮನೆ ಇದ್ದಂತೆ. ಸುಖ-ಶಾಂತಿ, ನೆಮ್ಮದಿಯ ತಾಣವಾಗಿದೆ ಎಂದರು.
ಇಂದ್ರಿಯ ನಿಗ್ರಹದಿಂದ ಆಧ್ಯಾತ್ಮಿಕ ಉನ್ನತಿ: ಏಕಾಂತದೊಂದಿಗೆ ಪ್ರಕೃತಿಯ ಮಡಿಲಲ್ಲಿ ಪ್ರಶಾಂತ ಪರಿಸರದಲ್ಲಿ ವಿವೇಕ, ವೈರಾಗ್ಯ ಮತ್ತು ಇಂದ್ರಿಯಗಳ ನಿಗ್ರಹದಿಂದ ಜಪ, ತಪ, ಧ್ಯಾನದಿಂದ ನಿರಂತರ ಆಧ್ಯಾತ್ಮಿಕ ಚಿಂತನ-ಮಂಥನ ಮಾಡಿದಾಗ ಶಾಶ್ವತ ಸುಖ-ಶಾಂತಿ, ನೆಮ್ಮದಿ ಪಡೆಯಬಹುದು ಎಂದು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಸತ್ಯ, ಧರ್ಮ, ನ್ಯಾಯ, ನೀತಿಯ ಮಾರ್ಗದಲ್ಲಿ ನಡೆದಾಗ ಎಲ್ಲರಿಗೂ ಸುಖ-ಶಾಂತಿ, ನೆಮ್ಮದಿ ದೊರಕಿ ಲೋಕ ಕಲ್ಯಾಣವಾಗುತ್ತದೆ. ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಾವು ಎಲ್ಲರನ್ನೂ ಪ್ರೀತಿ-ವಿಶ್ವಾಸದಿಂದ ಕಂಡು ವಿಶ್ವಮಾನವರಾಗಬೇಕು. ಪುಸ್ತಕದಲ್ಲಿರುವ ಜ್ಞಾನ ಮಸ್ತಕಕ್ಕೆ ಬರಬೇಕು. ಎಲ್ಲರೂ ಮಾನಸಿಕ ಮಾಲಿನ್ಯವನ್ನು ದೂರ ಮಾಡಿ ದೇವರ ಭಕ್ತಿ, ಧ್ಯಾನ, ಉಪಾಸನೆ ಮಾಡಬೇಕು. ಶಿಕ್ಷಕರು ಮತ್ತು ರಕ್ಷಕರು ಮಕ್ಕಳಿಗೆ ಪುರಾಣ ಕಥೆಗಳನ್ನು ಹೇಳಿ ಉತ್ತಮ ಸಂಸ್ಕಾರ ಮೂಡಿಸಬೇಕು ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹನಾಯಕ್, ಉಡುಪಿ ಶಾಸಕ ಯಶಪಾಲ್ ಸುವರ್ಣ, ಮಾಜಿ ಶಾಸಕ ರಘುಪತಿ ಭಟ್, ಹರಿಕೃಷ್ಣ ಬಂಟ್ವಾಳ, ಜೆಡಿಎಸ್ ನಾಯಕ ಸೂರಜ್ ಸೋನಿ ಮಾತನಾಡಿದರು.
ತುಕಾರಾಮ ಪೂಜಾರಿ ಸ್ವಾಗತಿಸಿದರು. ಪ್ರೊ.ಕೇಶವ ಬಂಗೇರ ಕಾರ್ಯಕ್ರಮ ನಿರ್ವಹಿಸಿದರು.
ನಾವು ಎಷ್ಟು ಗಳಿಸಿದ್ದೇವೆ ಅನ್ನುವುದಕ್ಕಿಂತ ಗಳಿಸಿದ್ದನ್ನು ಹೇಗೆ ಇತರರ ಕಲ್ಯಾಣಕ್ಕಾಗಿ ಬಳಸುತ್ತೇವೆ ಎಂಬುದು ಮುಖ್ಯ.ನಾವು ಎಷ್ಟು ಗಳಿಸಿದ್ದೇವೆ ಅನ್ನುವುದಕ್ಕಿಂತ ಗಳಿಸಿದ್ದನ್ನು ಹೇಗೆ ಇತರರ ಕಲ್ಯಾಣಕ್ಕಾಗಿ ಬಳಸುತ್ತೇವೆ ಎಂಬುದು ಮುಖ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.