ಮಂಗಳೂರು: ಬಿಎಸ್ಎನ್ಡಿಪಿ ಸಂಘಟನೆ ವತಿಯಿಂದ ನಾರಾಯಣ ಗುರುಗಳ 166 ನೇ ಜಯಂತ್ಯುತ್ಸವದ ಪ್ರಯುಕ್ತ ವಿವಿಧ ಕ್ಷೇತ್ರದಲ್ಲಿ ಮಾಡಿದ ಶ್ರೇಷ್ಠ ಸಾಧನೆಗಾಗಿ ಕೊಡ ಮಾಡುವ ರಾಜ್ಯಮಟ್ಟದ ‘ಪರಿವರ್ತನಾಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ನಡೆಯಿತು.
ಉದ್ಘಾಟಿಸಿ ಮಾತನಾಡಿದ ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ‘ಬ್ರಹ್ಮಶ್ರೀ ನಾರಾಯಣ ಗುರುಗಳು ವಿಶ್ವಮಾನ್ಯರು. ಅವರು ಜಾತಿ ಪದ್ಧತಿಯನ್ನು ವಿರೋಧಿಸಿದವರು. ಸಂಘಟನೆ ಮೂಲಕ ಶಕ್ತಿ ಪಡೆದುಕೊಳ್ಳಿ ಎಂದು ಹೇಳಿ, ಹಿಂದುಳಿದವರನ್ನು ಮೇಲೆತ್ತಲು ಶ್ರಮಿಸಿದವರು. ಅವರನ್ನು ಸಂಕುಚಿತ ಮನೋಭಾವದಿಂದ ನೋಡುವುದನ್ನು ಬಿಡಬೇಕಿದೆ’ ಎಂದರು.
ಬಿರುವೆರ್ ಕುಡ್ಲದ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಅವರಲ್ಲಿ ಸಂಘಟನೆ ಮಾಡುವ ಶಕ್ತಿಯಿದೆ. ದೇಶದ ಒಳಿತಿಗಾಗಿ ಬಿರುವೆರ್ ಕುಡ್ಲ ನಿರಂತರವಾಗಿ ಸೇವೆ ಮಾಡುವಂತಾಗಲಿ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬ್ರಹ್ಮಶ್ರೀನಾರಾಯಣ ಗುರು ಧರ್ಮ ಪರಿಪಾಲನಾ ಮಂದಿರದ ಸೈದಪ್ಪ ಗುತ್ತೆದಾರ್, ಬಿರುವೆರ್ ಕುಡ್ಲ ಕರಾವಳಿಯಲ್ಲಿ ಸಮಾಜ ಸೇವೆಗಾಗಿ ಮನೆ ಮಾತಾಗಿದೆ. ಅಶಕ್ತರಿಗೆ ಸಹಾಯ ಮಾಡುತ್ತಿರುವ ಬಿರುವೆರ್ ಕುಡ್ಲ ಬೃಹತ್ ಶಕ್ತಿಯಾಗಿ ಬೆಳೆದು ನಿಂತಿದೆ ಎಂದು ಹೇಳಿದರು.
ಸಬಿನಾ ತಸ್ಲಮಾ ಅವರು ಬ್ರಹ್ಮಶ್ರೀ ನಾರಾಯಣಗುರುಗಳ ಬಗ್ಗೆ ಸಂಶೋಧನೆ ಮಾಡುವ ಮೂಲಕ ಕೊಡುಗೆ ನೀಡಿದ್ದಾರೆ. ಅರ್ಹವಾಗಿ ಸಮಿತಿಯು ಅವರನ್ನು ‘ಪರಿವರ್ತನಾಶ್ರೀ’ ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದರು.
ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯಪೂಜಾರಿ ಮತ್ತು ಪ್ರೊ.ಸಬಿನ ತಸ್ಲಿಮಾ ಅವರು ‘ಪರಿವರ್ತನಾಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸುದರ್ಶನ್ ಮಾತನಾಡಿದರು. ಪುರುಷೋತ್ತಮ್ ಚಿತ್ರಾಪುರ, ಜಿಲ್ಲಾ ಪಂಚಾಯಿತಿ ಸದಸ್ಯೆ,ಬಿಎಸ್ಎನ್ಡಿಪಿ ಮಹಿಳಾ ವಿಭಾಗದ ರಾಜ್ಯ ಘಟಕದ ಅಧ್ಯಕ್ಷೆ ಗೀತಾಂಜಲಿ ಸುವರ್ಣ, ಡಾ.ಮಧುಬಾಲಾ, ಉದಯ ಪೂಜಾರಿ, ಶರತ್ಚಂದ್ರ, ಜಿಲ್ಲಾ ಘಟಕದ ಅಧ್ಯಕ್ಷ ಹೇಮಂತ್ ಪೂಜಾರಿ, ಚಿತ್ತರಂಜನ್ ಬೋಳಾರ್, ಪದ್ಮರಾಜ್, ಕಾವೂರು ಚಂದ್ರಶೇಖರ್, ಶರತ್ ಚಂದ್ರ, ಪ್ರಕಾಶ್ ಕೋಟ್ಯಾನ್, ಶ್ರುತಿ ಸಾಲ್ಯಾನ್ ಉಪಸ್ಥಿತರಿದ್ದರು. ಪ್ರಜ್ಞಾ ವಡೀಳ್ನಾಳ್ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.