
ಬೆಳ್ತಂಗಡಿ: ‘ಗುರು ಶಿಷ್ಯರು, ತಂದೆ ತಾಯಿಯ ಸಂಬಂಧ ನಶಿಸಿಹೋಗಿರುವ ಸಮಾಜದಲ್ಲಿ ವೈದ್ಯರು, ದಾದಿಯರು ತಾಯಿ ಹೃದಯದ ಮೂಲಕ ಸೇವೆ ಸಲ್ಲಿಸಿ ಮತ್ತೆ ಈ ಸಂಬಂಧಗಳನ್ನು ಬೆಸೆದು ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಅಣಿಯಾಗಬೇಕಾದ ಅಗತ್ಯ ಇದೆ’ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಹೇಳಿದರು.
ಲಾಯಿಲ ಕಾಶಿಬೆಟ್ಟುವಿನಲ್ಲಿರುವ ಪ್ರಸನ್ನ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಪ್ರಸನ್ನ ನರ್ಸಿಂಗ್ ಕಾಲೇಜಿನ ಪ್ರಸ್ತುತ ಸಾಲಿನ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಶಿಕ್ಷಣ ಮತ್ತು ಆರೋಗ್ಯ ಉಳ್ಳವರ ಪಾಲಾಗಿದೆ. ಸಂವಿಧಾನದ ಆಶಯದಂತೆ ಪ್ರತಿಯೊಬ್ಬರೂ ಶಿಕ್ಷಣ ಪಡೆದು ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತಾಗಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಸನ್ನ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಗಂಗಾಧರ ಗೌಡ ಮಾತನಾಡಿ, ‘ಗ್ರಾಮೀಣ ಪ್ರದೇಶದಲ್ಲಿ ಆಯುರ್ವೇದ ಮತ್ತು ನರ್ಸಿಂಗ್ ಕಾಲೇಜು ಆರಂಭಿಸಲು ನಾವು ಹಲವು ಸವಾಲು ಎದುರಿಸಿದ್ದೆವು. ಇಂದು ಎಲ್ಲ ಮೂಲಸೌಲಭ್ಯಗಳೊಂದಿಗೆ ನಾವು ಈ ಮಟ್ಟಕ್ಕೆ ಬೆಳೆದಿದ್ದೇವೆ. ಯಶಸ್ಸು ಸಾಧಿಸಲು ಎಲ್ಲರೂ ಸೇರಿ ಯುದ್ದ ಗೆಲ್ಲಬೇಕಿದೆ’ ಎಂದರು.
ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಲೀಲಾಧರ ಡಿ.ವಿ., ಆಳ್ವಾಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಯತಿಕುಮಾರಸ್ವಾಮಿ ಗೌಡ, ಚಿಕ್ಕಮಗಳೂರಿನ ದಂತ ವೈದ್ಯ ಡಾ.ಸುಂದರ ಗೌಡ, ಪ್ರಸನ್ನ ಆಯರ್ವೇದ ಕಾಲೇಜಿನ ನಿವೃತ್ತ ವಿಭಾಗ ಮುಖ್ಯಸ್ಥ ಡಾ.ಶ್ರೀಕುಮಾರ್ ಮಾತನಾಡಿದರು.
ಪ್ರಾಂಶುಪಾಲರಾದ ಡಾ.ಫ್ಲೇವಿಯಾ ಕ್ಯಾಸ್ಟಲಿನೊ, ಡಾ.ಯತೀಶ್ ಭಾಗವಹಿಸಿದ್ದರು.
ಪ್ರಾಂಶುಪಾಲ ಡಾ.ಪ್ರಶಾಂತ ಬಿ.ಕೆ. ಸ್ವಾಗತಿಸಿ, ಪ್ರಸನ್ನ ಆಯುರ್ವೇದ ಆಸ್ಪತ್ರೆಯ ನಿವೃತ್ತ ವಿಭಾಗ ಮುಖ್ಯಸ್ಥ ಡಾ.ಶ್ರೀಕುಮಾರ್ ಮತ್ತು ಡಾ. ಸುಂದರ ಗೌಡ ಅವರನ್ನು ಗೌರವಿಸಲಾಯಿತು.
ಅಂಕಿತಾ ಪ್ರಾರ್ಥಿಸಿದರು. ಡಾ.ಈಶ್ವರಚಂದ್ರ ಪ್ರಮಾಣವಚನ ಬೋಧಿಸಿದರು. ಗುರುನಾಥ ಪಾಟೀಲ್ ವಂದಿಸಿದರು. ಡಾ.ಮಹೇಶ್ ಪ್ರಸನ್ನ, ಡಾ. ವೃಂದಾ ಬೆಡೇಕರ್ ಮತ್ತು ಡಾ.ಶೃತಿ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.