ಮಂಗಳೂರಿನ ಮೋಸಿಸ್ ಒಡೆತನದ ಡುಕಾಟಿ ಬೈಕ್ನಲ್ಲಿ ಶಾಸಕ ವೇದವ್ಯಾಸ ಕಾಮತ್ ಮತ್ತು ಎಂ.ವಿ ಆಗಸ್ತಾದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕುಳಿತು ಸಂಭ್ರಮಿಸಿದರು
:ಪ್ರಜಾವಾಣಿ ಚಿತ್ರ
ಮಂಗಳೂರು: ಜಿಲ್ಲೆಯ ವಾರ್ಷಿಕ ಕಾರ್ಯಕ್ರಮಗಳಲ್ಲಿ ಕಾರು ಮತ್ತು ಬೈಕ್ ರ್ಯಾಲಿಯನ್ನು ಕೂಡ ಸೇರ್ಪಡೆಗೊಳಿಸಲಾಗುವುದು, ಇದಕ್ಕಾಗಿ ನಗರದ ಹೊರವಲಯದಲ್ಲಿ ರೇಸಿಂಗ್ ಟ್ರ್ಯಾಕ್ ನಿರ್ಮಿಸಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.
ಕರಾವಳಿ ಉತ್ಸವದ ಅಂಗವಾಗಿ ಆಯೋಜಿಸಿರುವ ಯುವಮನದ ಉದ್ಘಾಟನಾ ಸಮಾರಂಭದ ಭಾಗವಾಗಿ ಕದ್ರಿ ಪಾರ್ಕ್ನಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ವೈವಿಧ್ಯಮಯ ಕಾರು ಮತ್ತು ಬೈಕ್ ಪ್ರದರ್ಶನವನ್ನು ವೀಕ್ಷಿಸಿದ ನಂತರ ಮಾತನಾಡಿದ ಅವರು ನಗರದಲ್ಲಿ ಸಾಕಷ್ಟು ರೇಸಿಂಗ್ ಚಾಂಪಿಯನ್ನರು ಇದ್ದಾರೆ. ರೇಸ್ ಆಯೋಜಕರೂ ಇದ್ದಾರೆ. ಅವರು ಸ್ಪರ್ಧೆ ನಡೆಸಲು ಹೊರರಾಜ್ಯಗಳಿಗೆ ಹೋಗುತ್ತಾರೆ. ಹೀಗಾಗಿ ಇಲ್ಲಿಯೇ ಸೌಲಭ್ಯವನ್ನು ಒದಗಿಸುವ ಯೋಜನೆ ಇದೆ ಎಂದರು.
ಶಾಸಕರಾದ ವೇದವ್ಯಾಸ ಕಾಮತ್, ಮಂಜುನಾಥ ಭಂಡಾರಿ, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ಷಿಪ್ನ ಪ್ರತಿನಿಧಿ ಮೂಸ ಮತ್ತಿತರರು ಪಾಲ್ಗೊಂಡಿದ್ದರು.
ಅಗಸ್ತಾ, ಡುಕಾಟಿ, ವೆಂಟ್ಲಿ ಆಕರ್ಷಣೆ
ಯಂಗ್ ಇಂಡಿಯಾ, ಬೈಕಿಂಗ್ ಚಾಂಪಿಯನ್ಸ್ ಮತ್ತು ರೌಂಡ್ ಟೇಬಲ್ ಆಯೋಜಿಸಿದ್ದ ಪ್ರದರ್ಶನದಲ್ಲಿದ್ದ ದುಬಾರಿ ಬೆಲೆಯ, ಅಪರೂಪದ ಬೈಕ್ ಮತ್ತು ಕಾರುಗಳು ಯುವ ಮನಸ್ಸುಗಳಿಗೆ ಮುದ ನೀಡಿದವು. ಕದ್ರಿ ಪಾರ್ಕ್ನಲ್ಲಿ ಸುತ್ತಾಡಲು ಬಂದ ಎಲ್ಲರೂ ಪ್ರದರ್ಶನದತ್ತ ಮುಗಿಬಿದ್ದರು.
ಎಂ.ವಿ ಆಗಸ್ತಾ, ಬೆನೆಲಿ ಪಿಆರ್ಕೆ–500 ಮತ್ತು ಡುಕಾಟಿ ಬೈಕ್ಗಳನ್ನು ನೋಡಲು ಜನರು ಕಿಕ್ಕಿರಿದು ತುಂಬಿದ್ದರು. ಆಗಸ್ತಾ ಜಗತ್ತಿನಲ್ಲಿ ಒಟ್ಟು 200 ಮಾತ್ರ ಇದ್ದು ಭಾರತದಲ್ಲಿರುವ ಏಕೈಕ ಬೈಕ್ ಮಂಗಳೂರಿನಲ್ಲಿದೆ ಎಂದು ಅದರ ಮಾಲೀಕ ಮೋಸಿಸ್ ತಿಳಿಸಿದರು. ‘ಡುಕಾಟಿ ಕೂಡ ಇದೆ. ಅದನ್ನೇ ಹೆಚ್ಚಾಗಿ ಚಲಾಯಿಸುತ್ತೇನೆ. ಆಗಸ್ತಾವನ್ನು ಹೊರಗೆ ತೆಗೆಯುವುದಿಲ್ಲ’ ಎಂದು ಅವರು ‘ಪ್ರಜಾವಾಣಿ’ ತಿಳಿಸಿದರು.
ಬಿಎಂಡಬ್ಲ್ಯು ಕಂಪನಿಯ ವಿವಿಧ ವೇರಿಯಂಟ್ಗಳು, ಹಾರ್ಲಿ ಡೇವಿಡ್ಸನ್ ಕಂಪನಿಯ ಫ್ಯಾಟ್ ಬಾಬ್, ಸುಜುಕಿ ವಿ–ಸ್ಟಾರ್ಮ್, ಕವಾಸಾಕಿ ನಿಂಜಾ ಮುಂತಾದ ಬೈಕ್ಗಳು ಇದ್ದವು. ಮಹಾರಾಷ್ಟ್ರದಿಂದ ಖರೀದಿಸಿದ ಲ್ಯಾಂಬೋರ್ಗಿನಿ, ಪುದುಚೇರಿಯಿಂದ ತಂದಿರುವ ಆ್ಯಷ್ಟನ್ ಮಾರ್ಟಿನ್, ದುಬಾರಿ ಬೆಂಟ್ಲಿ, ಮಸ್ಟ್ಯಾಂಗ್ ಜಿಟಿ, ಭಾರತದಲ್ಲಿ ಎರಡೇ ಇದೆ ಎನ್ನಲಾಗುವ ಪೊರ್ಷೆ ಮುಂತಾದ ಕಾರುಗಳು ಕೂಡ ಗಮನ ಸೆಳೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.