ಮಂಗಳೂರು: ಸಿಸಿಬಿ ಇನ್ಸ್ಪೆಕ್ಟರ್ ಶಿವಪ್ರಕಾಶ್ ನಾಯ್ಕ್ ಅವರ ವರ್ಗಾವಣೆಯನ್ನು ಪೊಲೀಸ್ ಇಲಾಖೆ ತಡೆ ಹಿಡಿದಿದೆ.
ಈ ಬಗ್ಗೆ ಶನಿವಾರ ನಗರದಲ್ಲಿ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಕಮಿಷನರ್ ವಿಕಾಸ್ಕುಮಾರ್ ವಿಕಾಸ್, ‘ಇನ್ಸ್ಪೆಕ್ಟರ್ ವರ್ಗಾವಣೆ ಹಿಂದೆ ಇರುವ ಕಾರಣವೇ ಬೇರೆ. ವರ್ಗಾವಣೆ ಕುರಿತಂತೆ ಈಗ ಪ್ರಚಾರವಾಗುತ್ತಿರುವ ವಿಷಯ ಸತ್ಯಕ್ಕೆ ದೂರವಾಗಿದೆ. ಬಹಳಷ್ಟು ವಿಚಾರ ನಮಗೇ ಗೊತ್ತಾಗುವುದಿಲ್ಲ. ಮಾಧ್ಯಮಗಳಲ್ಲಿ ಬಂದ ವಿಚಾರವನ್ನು ನಾವೇ ತನಿಖೆ ಮಾಡಬೇಕಾಗುತ್ತದೆ. ಯಾವ ಅಧಿಕಾರಿಗಳ ಮೇಲೂ ಒತ್ತಡ ಹೇರಲಾಗಿಲ್ಲ’ ಎಂದು ತಿಳಿಸಿದರು.
‘ಪ್ರಕರಣದಲ್ಲಿ ಚೈನ್ ಲಿಂಕ್ ದೊಡ್ಡದಿದೆ. ಈ ಚೈನ್ ಲಿಂಕ್ ಎಲ್ಲಿ ಕೊನೆಯಾಗುತ್ತೋ, ಅಲ್ಲಿ ತನಕ ವಿಚಾರಣೆ ಮಾಡುತ್ತೇವೆ. ಡ್ರಗ್ಸ್ ಪ್ರಕರಣದಲ್ಲಿ ಒಟ್ಟು 6 ಮಂದಿ ಆರೋಪಿಗಳ ಬಂಧನವಾಗಿದೆ. ನಿತ್ಯ ತನಿಖೆ ಮಾಡಲಾಗುತ್ತಿದ್ದು, ಮಾಹಿತಿ ಬೇಕಾದಲ್ಲಿ ಸಂಬಂಧಿಸಿದವರಿಗೆ ನೋಟಿಸ್ ಕೊಟ್ಟು ವಿಚಾರಣೆ ಮಾಡುತ್ತೇವೆ’ ಎಂದು ಹೇಳಿದರು.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕಿ, ನಟಿ ಅನುಶ್ರೀ ಅವರನ್ನು ವಿಚಾರಣೆ ನಡೆಸಿದ್ದ ಇನ್ಸ್ಪೆಕ್ಟರ್ ಶಿವಪ್ರಕಾಶ್ ನಾಯ್ಕ್ ಅವರನ್ನು ದಿಢೀರ್ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆ ಕುರಿತು ಆಕ್ಷೇಪಗಳು ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತ ಇಲಾಖೆ, ಶಿವಪ್ರಕಾಶ್ ನಾಯ್ಕ್ ಅವರ ವರ್ಗಾವಣೆಯನ್ನು ತಡೆ ಹಿಡಿದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.