ADVERTISEMENT

ಬೆಳ್ತಂಗಡಿ: ಹೊಸ ವರ್ಷಾಚರಣೆ ವೇಳೆ ಗಲಾಟೆ- ಗೆಳೆಯನ ಮೂಗು ಕಚ್ಚಿ ತುಂಡರಿಸಿದ ಯುವಕ!

​ಪ್ರಜಾವಾಣಿ ವಾರ್ತೆ
Published 1 ಜನವರಿ 2024, 15:57 IST
Last Updated 1 ಜನವರಿ 2024, 15:57 IST
   

ಬೆಳ್ತಂಗಡಿ: ಬೆಳ್ತಂಗಡಿ ಸಮೀಪದ ಪಿಲ್ಯದಲ್ಲಿ ಭಾನುವಾರ ರಾತ್ರಿ ಹೊಸ ವರ್ಷಾಚರಣೆಯಲ್ಲಿ ನಿರತರಾಗಿದ್ದ ಇಬ್ಬರು ಯುವಕರ ನಡುವೆ ಗಲಾಟೆ ನಡೆದಿದ್ದು, ಯುವಕನೊಬ್ಬನ ಮೂಗನ್ನು ಆತನ ಗೆಳೆಯನೇ ಕಚ್ಚಿ ತುಂಡರಿಸಿದ್ದಾನೆ. ಈ ಘಟನೆ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಪಿಲ್ಯ ಗ್ರಾಮದ ಉಲ್ಪೆ ಬಳಿಯ ನಿವಾಸಿ ದೀಕ್ಷಿತ್ (28) ಮೂಗಿಗೆ ಗಾಯವಾಗಿದೆ. ಆತನ ಗೆಳೆಯ, ಮೂಡಿಗೆರೆ ತಾಲ್ಲೂಕಿನ ರಾಕೇಶ್ ಮೂಗು ಕಚ್ಚಿ ಗಾಯಗೊಳಿಸಿದ ಆರೋಪಿ. ಆರೋಪಿಯು ಪಿಲ್ಯ ಗ್ರಾಮದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಸಂಬಂಧಿಕರ ಮನೆಯಲ್ಲಿ ವಾಸವಿದ್ದಾನೆ’‌ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಕೆಲವು ಯುವಕರು ಸೇರಿ ಅಳದಂಗಡಿಯಲ್ಲಿ ಹೊಸ ವರ್ಷಾಚರಣೆ ನಡೆಸಿದ್ದರು. ಬಳಿಕ ವೈನ್‌ಶಾಪ್‌ ಒಂದರಲ್ಲಿ ಮದ್ಯಪಾನ ಮಾಡಿದ್ದರು. ಅಲ್ಲಿಂದ ಮನೆಗೆ ಮರಳುವಾಗ ದೀಕ್ಷಿತ್ ಮತ್ತು ರಾಕೇಶ್‌ ನಡುವೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದಿತ್ತು. ಇದು ವಿಕೋಪಕ್ಕೆ ತಿರುಗಿ, ರಾಕೇಶ್ ಸಿಟ್ಟಿನಿಂದ ದೀಕ್ಷಿತ್ ಮೂಗನ್ನು ಕಚ್ಚಿ ತುಂಡರಿಸಿದ್ದ. ಗಾಯಗೊಂಡ ದೀಕ್ಷಿತ್ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದ. ಬಳಿಕ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.