ಉಜಿರೆ: ‘ಧರ್ಮಜಾಗೃತಿ ಮತ್ತು ಆಧ್ಯಾತ್ಮಿಕ ಹಾಗೂ ನೈತಿಕ ಮೌಲ್ಯಗಳ ಉದ್ದೀಪನಕ್ಕಾಗಿ ಜುಲೈ 10 ರಿಂದ ಆಗಸ್ಟ್ 20ರವರೆಗೆ ಉತ್ತರಕನ್ನಡ ಜಿಲ್ಲೆಯ ಕುಮಟಾದ ಕೋನಳ್ಳಿ ವನದುರ್ಗಾ ದೇವಾಲಯದಲ್ಲಿ ಚಾತುರ್ಮಾಸ್ಯ ವ್ರತಾಚರಣೆ ಕೈಗೊಳ್ಳಲಾಗುವುದು’ ಎಂದು ರಾಮಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
ಧರ್ಮಸ್ಥಳದ ಕನ್ಯಾಡಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿತ್ಯವೂ ಜಪ, ತಪ, ಧ್ಯಾನ, ಭಜನೆ, ದೇವರ ಆರಾಧನೆ, ಧಾರ್ಮಿಕ ಪ್ರವಚನ, ಸತ್ಸಂಗ ಅಲ್ಲದೆ ಯಕ್ಷಗಾನ, ಭರತನಾಟ್ಯ, ನಾಟಕ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜನಮಾನಸದಲ್ಲಿ ಧರ್ಮೋಪ್ರಭಾವನೆ ಮಾಡಲಾಗುವುದು. ಪ್ರತಿ ಹುಣ್ಣಿಮೆ, ಅಮಾವಾಸ್ಯೆ ಮತ್ತು ಏಕಾದಶಿ ದಿನ ಇಡೀ ದಿನ ತಾವು ಮೌನವ್ರತಾಚರಣೆ ಮಾಡಲಾಗುವುದು ಎಂದು ತಿಳಿಸಿದರು.
ಮುಂದಿನ ವರ್ಷಗಳಲ್ಲಿ ಭಕ್ತರ ಕೋರಿಕೆಯಂತೆ ಅಯೋಧ್ಯೆ, ಹರಿದ್ವಾರ, ವಾರಣಾಸಿ ಮೊದಲಾದ ತೀರ್ಥಕ್ಷೇತ್ರಗಳಲ್ಲಿ ತಾವು ಚಾತುರ್ಮಾಸ್ಯ ವ್ರತಾಚರಣೆ ಮಾಡಲಾಗುವುದು ಎಂದು ಸ್ವಾಮೀಜಿ ಪ್ರಕಟಿಸಿದರು.
ದೇವರಗುಡ್ಡ ದೇವಸ್ಥಾನದ ಭಕ್ತಮಂಡಳಿ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ, ಸಂಚಾಲಕ ನವೀನ್ ಪ್ರಕಾಶ್, ಕಾರ್ಯದರ್ಶಿ ಸುನಿಲ್ ಕನ್ಯಾಡಿ ಮತ್ತು ಉಪಾಧ್ಯಕ್ಷ ರವೀಂದ್ರ ಪೂಜಾರಿ ಆರ್ಲ ಉಪಸ್ಥಿತರಿದ್ದರು.
ಧಮಸ್ಥಳ–ಮಂಗಳೂರು ರಾಜಹಂಸ ಬಸ್ ಸೇವೆ ಆರಂಭ
ಉಜಿರೆ: ಜುಲೈ 3 ರಿಂದ ಪ್ರತಿ ದಿನ ಧರ್ಮಸ್ಥಳದಿಂದ ಮಂಗಳೂರಿಗೆ ಕೆಎಸ್ಆರ್ಟಿಸಿ ವತಿಯಿಂದ ರಾಜಹಂಸ ಬಸ್ ಸೇವೆಯನ್ನು ಆರಂಭಿಸಲಾಗಿದೆ.
ಧರ್ಮಸ್ಥಳದಿಂದ ಮಂಗಳೂರಿಗೆ ಬೆಳಿಗ್ಗೆ 6.30, 7, 9, 9.15, 11.30, 12, 2.45, 3.30, 4.30 ಮತ್ತು 5.30 ಕ್ಕೆ ಬಸ್ ಹೊರಡಲಿದೆ.
ಮಂಗಳೂರಿನಿಂದ ಧರ್ಮಸ್ಥಳಕ್ಕೆ ಬೆಳಿಗ್ಗೆ 6.30, 7, 8.30, 9, 11.15, 12.15, 2.30, 3.30, 5.30 ಮತ್ತು 6.30ಕ್ಕೆ ಹೊರಡಲಿದೆ. ಪ್ರಯಾಣದರ ₹110 ನಿಗದಿಪಡಿಸಲಾಗಿದೆ ಎಂದು ಕೆಎಸ್ಆರ್ಟಿಸಿ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.