ಕಾಸರಗೋಡು : ತೆಂಗು, ಅಡಿಕೆ ತಳಿ ವಿಜ್ಞಾನದ ಬಗ್ಗೆ ಕ್ರಾಂತಿಕಾರಕ ಸಂಶೋಧನೆಗೆ ನೇತೃತ್ವ ನೀಡಿದ ಕಾಸರಗೋಡು ಕೇಂದ್ರ ತೋಟಗಾರಿಕಾ ಬೆಳೆ ಸಂಶೋಧನಾ ಸಂಸ್ಥೆ(ಸಿಪಿಸಿಆರ್ಐ) ನಿರ್ದೇಶಕ ಡಾ. ಪಿ. ಚೌಡಪ್ಪ ಗುರುವಾರ ಸೇವೆಯಿಂದ ನಿವೃತ್ತರಾದರು. ಇನ್ನೂ ನಾಲ್ಕೂವರೆ ತಿಂಗಳ ಅವಧಿ ಬಾಕಿ ಇರುವಾಗಲೇ ನಿವೃತ್ತಿ ಘೋಷಿಸಿ ತಮ್ಮ ಊರಾದ ದೊಡ್ಡಬಳ್ಳಾಪುರಕ್ಕೆ ತೆರಳಿದ್ದಾರೆ.
ತೆಲುಗು ಮಾತೃಭಾಷೆಯವರಾದ ಪಲ್ಲಂ ಚೌಡಪ್ಪ ಅವರು 1985 ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್
ಹಾರ್ಟಿಕಲ್ಚರ್ ನಲ್ಲಿ ಸಂಶೋಧಕರಾಗಿ ಕರ್ತವ್ಯ ಆರಂಭಿಸಿದ್ದರು. 2014 ಸೆಪ್ಟೆಂಬರ್ ತಿಂಗಳಲ್ಲಿ ಕಾಸರಗೋಡಿನ ಸಿಪಿಸಿಆರ್ ಐ ಯಲ್ಲಿ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ್ದರು.
ಸಿಪಿಸಿಆರ್ಐ ಯಲ್ಲಿ ತೆಂಗು ಮತ್ತು ಕಂಗು ತಳಿ ಸಂಶೋಧನೆಗೆ ನೇತೃತ್ವ ನೀಡಿದ ಅವರು ತೆಂಗಿನ ಜೀನ್ ಬಗ್ಗೆ ನಡೆಸಿದ
ಸಂಶೋಧನೆಯ ತಂತ್ರ ಜ್ಞಾನವನ್ನು ಇತ್ತೀಚೆಗೆ ಹಲವಾರು ಕಂಪನಿಗಳಿಗೆ ಹಸ್ತಾಂತರ ಮಾಡುವ ಒಪ್ಪಂದಗಳ ಮೂಲಕ
ಸರಕಾರಕ್ಕೆ ₹50 ಲಕ್ಷ ಆದಾಯ ಒದಗಿಸಿದ್ದಾರೆ. ಅವರ ನೇತೃತ್ವದಲ್ಲಿ ಸಿಪಿಸಿಆರ್ಐ ಶತಮಾನೋತ್ಸವವನ್ನು ಅದ್ಧೂರಿಯಾಗಿ ನಡೆಸಲಾಗಿತ್ತು.
ಸಾಮಾನ್ಯ ಕೃಷಿಕರನ್ನು ಸಿಪಿಸಿಆರ್ಐಐ ಗೆ ಆಕರ್ಷಿಸುವ , ಹಾಗೂ ಅವರ ಜತೆ ಸಂಸ್ಥೆಗೆ ಸಂಪರ್ಕ ಕಲ್ಪಿಸುವ ಕೊಂಡಿಯಾಗಿ ವರ್ತಿಸಿ ಜನಪ್ರಿಯರಾಗಿದ್ದರು.ತೆಂಗಿನ ನೀರಾ ರಸಕ್ಕೆ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ವಿಶೇಷ ಪ್ರಚಾರ ನಡೆಸಿದ್ದರು. ತೆಂಗು ಮತ್ತು ಕಂಗುಗಳಿಗೆ ಆಕಾಶದಿಂದ ಕೀಟನಾಶಕ ಸಿಂಪಡಿಸುವ ಕಿರು ಯಂತ್ರವೊಂದನ್ನು ಅವರ ಅಧಿಕಾರಾವಧಿಯಲ್ಲಿ ಅಭಿವೃದ್ಧಿಪಡಿಸಲಾಗಿತ್ತು.
ಅವರ ಪತ್ನಿ ಸುಜಾತ., ವಿನಯ ಪ್ರಸಾದ್ ಮತ್ತು ವೆಂಕಟೇಶ್ ಪ್ರಸಾದ್ ಮಕ್ಕಳು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.