ADVERTISEMENT

ಮಂಗಳೂರು | ಯೇಸು ಜನನದ ಸ್ಮರಣೆ: ಎಲ್ಲೆಡೆ ಸಂಭ್ರಮಾಚರಣೆ

ಸಮಾಜದಲ್ಲಿ ಪ್ರೀತಿ ಹಂಚೋಣ: ಬಿಷಪ್ ಪೀಟರ್ ಪಾವ್ಲ್ ಸಲ್ಡಾನ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 6:51 IST
Last Updated 25 ಡಿಸೆಂಬರ್ 2025, 6:51 IST
ಮಂಗಳೂರಿನ ರೊಸಾರಿಯೊ ಕೆಥೆಡ್ರಲ್‌ನಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಬಿಪಷ್ ಪೀಟರ್ ಪಾವ್ಲ್ ಸಲ್ಡಾನ ಅವರು ಕ್ರಿಸ್ಮಸ್ ಹಬ್ಬದ ವಿಶೇಷ ಬಲಿಪೂಜೆಯ ನೆರವೇರಿಸಿ ಸಂದೇಶ ನೀಡಿದರು 
ಮಂಗಳೂರಿನ ರೊಸಾರಿಯೊ ಕೆಥೆಡ್ರಲ್‌ನಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಬಿಪಷ್ ಪೀಟರ್ ಪಾವ್ಲ್ ಸಲ್ಡಾನ ಅವರು ಕ್ರಿಸ್ಮಸ್ ಹಬ್ಬದ ವಿಶೇಷ ಬಲಿಪೂಜೆಯ ನೆರವೇರಿಸಿ ಸಂದೇಶ ನೀಡಿದರು    
ವಿದ್ಯುದ್ದೀಪ, ನಕ್ಷತ್ರ ಗೂಡುದೀಪಗಳಿಂದ ಸಿಂಗಾರಗೊಂಡ ಚರ್ಚ್‌ಗಳು | ಚರ್ಚ್‌ಗಳ ಪ್ರಾಂಗಣದಲ್ಲಿ ನಿರ್ಮಾಣಗೊಂಡ ಚಿತ್ತಾಕರ್ಷಕ ಗೋದಲಿಗಳು | ಕ್ರಿಸ್ಮಸ್‌ ಪ್ರಾರ್ಥನೆಯಲ್ಲಿ ಶ್ರದ್ಧಾಪೂರ್ವಕವಾಗಿ ಭಾಗವಹಿಸಿದ ಕ್ರೈಸ್ತರು

ಮಂಗಳೂರು: ಯೇಸುಕ್ರಿಸ್ತರ ಜನನದ ಸಡಗರವನ್ನು ದಕ್ಷಿಣ ಕನ್ನಡ ಜಿಲ್ಲೆಯ ಚರ್ಚ್‌ಗಳಲ್ಲಿ ಬುಧವಾರ ಇಳಿಸಂಜೆ ವೇಳೆ ಶ್ರದ್ಧೆ ಭಕ್ತಿಯಿಂದ ಆಚರಿಸಲಾಯಿತು. ನಕ್ಷತ್ರ ಗೂಡುದೀಪ ಹಾಗೂ ವಿದ್ಯುದ್ದೀಪಲಂಕಾರಗಳಿಂದ ಕಂಗೊಳಿಸುತ್ತಿದ್ದ ಚರ್ಚ್‌ಗಳಲ್ಲಿ ಕ್ರಿಸ್ಮಸ್  ಪ್ರಯುಕ್ತ  ವಿಶೇಷ ಬಲಿಪೂಜೆಗಳು ನೆರವೇರಿದವು. ಕ್ರಿಸ್ಮಸ್ ಕ್ಯಾರೆಲ್‌ಗಳು, ವಿಶೇಷ ಕಾರ್ಯಕ್ರಮಗಳು ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದವು.

ಚರ್ಚ್‌ಗಳಲ್ಲಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಕ್ರೈಸ್ತರು ಕುಟುಂಬದ ಸದಸ್ಯರ ಸಮೇತ ಭಾಗವಹಿಸಿದರು. ಪರಸ್ಪರ ಕ್ರಿಸ್ಮಸ್‌ ಶುಭಾಶಯ ಕೋರಿದರು. ಸಿಹಿ ತಿನಸುಗಳು (ಕುಸ್ವಾರ್), ಕೇಕ್‌ಗಳನ್ನು ಇತರರಿಗೂ ಹಂಚಿ ಸಂಭ್ರಮಿಸಿದರು. ಯೇಸುಕ್ರಿಸ್ತರ ಜನನ ವೃತ್ತಾಂತ ಸಾರಲು ಚರ್ಚ್‌ಗಳ ಪ್ರಾಂಗಣದಲ್ಲಿ ನಿರ್ಮಿಸಿದ್ದ ಆಕರ್ಷಕ ಗೋದಲಿಗಳನ್ನು, ಕ್ರಿಸ್ಮಸ್ ಟ್ರೀಗಳನ್ನು ವೀಕ್ಷಿಸಿ ಜನ ಖುಷಿಪಟ್ಟರು. ಕ್ರೈಸ್ತರು ತಮ್ಮ ಮನೆಗಳನ್ನು ವಿದ್ಯುದ್ದೀಪಗಳಿಂದ, ನಕ್ಷತ್ರ ಗೂಡುದೀಪಗಳಿಂದ ಅಲಂಕರಿಸಿದ್ದರು. ಕೆಲವರು ಮನೆಯಲ್ಲಿ ನಿರ್ಮಿಸಿದ ಗೋದಲಿಗಳನ್ನು ಪ್ರೀತಿಪಾತ್ರರಿಗೆ ತೋರಿಸಿ ಖುಷಿಪಟ್ಟರು. 

ಪ್ರೀತಿಯ ಸಂದೇಶ ನೀಡಿದ ಬಿಷಪ್: ನಗರದ ರೊಸಾರಿಯೊ ಕೆಥೆಡ್ರಲ್‌ನಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಬುಧವಾರ ನಡೆದ ವಿಶೇಷ ಬಲಿಪೂಜೆಯ ನೇತೃತ್ವ ವಹಿಸಿದ್ದ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ ಪ್ರೀತಿಯ ಸಂದೇಶ ಸಾರಿದರು.  

ADVERTISEMENT

‘ದೇವರು ಪ್ರೀತಿಯ ಭಾಷೆಯಲ್ಲಿ ಮಾತನಾಡುತ್ತಾರೆ. ನಾವೂ ನೆರೆಹೊರೆಯವರಿಗೆ ಪ್ರೀತಿಯನ್ನು ಹಂಚಬೇಕು. ಸಮಾಜದಲ್ಲಿರುವುದು ಒಂದು ಪ್ರೀತಿಯ ಸಂಸ್ಕೃತಿ ಮತ್ತು ಜೀವದ ಸಂಸ್ಕೃತಿ.  ಮನುಷ್ಯ ಜೀವಕ್ಕೆ ಗೌರವ ಕೊಡುವ ಸಂಸ್ಕೃತಿಯನ್ನು ಕ್ರೈಸ್ತರು ಬೆಳೆಸಿಕೊಳ್ಳಬೇಕು. ಈ ಹಬ್ಬದ ಮೂಲಕ ಯೇಸುಕ್ರಿಸ್ತರು ಇದೇ ಸಂದೇಶವನ್ನು ಸಾರಿದ್ದಾರೆ’ ಎಂದರು. 

‘ನಾನು ನಿಮ್ಮನ್ನು ಪ್ರೀತಿಸಿದಂತೆ, ನೀವು ಎಲ್ಲರನ್ನೂ ಪ್ರೀತಿಸಿರಿ’ ಎಂಬ ಯೇಸುವಿನ ಧ್ಯೇಯವಾಕ್ಯವನ್ನು ಅವರ ಶಿಷ್ಯಂದಿರು ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ದೇವರಲ್ಲಿ ಶ್ವಾಸ ಇಟ್ಟವರು ಜಗತ್ತಿನ ಶಾಂತಿ ಮತ್ತು ಪ್ರೀತಿಯ ಪ್ರತಿಪಾದಕರಾಗಿದ್ದಾರೆ. ‘ತಾವಿರುವ ಕಡೆ  ಶಾಂತಿಯ ವಾತಾವರಣ ರೂಪಿಸಿ, ಪ್ರೀತಿಯ ಸಂಸ್ಕೃತಿ ಬೆಳೆಸಲು ಶ್ರಮಿಸುತ್ತಿದ್ದಾರೆ’ ಎಂದು ಅಭಿಪ್ರಾಯಪಟ್ಟರು. 

‘ಕ್ರೈಸ್ತರ ಪವಿತ್ರಗ್ರಂಥಗಳಲ್ಲಿ ಕೋಪ, ದ್ವೇಷದ ಮಾತುಗಳ ಉಲ್ಲೇಖವಿಲ್ಲ. ದೇವರು ಪ್ರೀತಿಯ ಮಾತುಗಳನ್ನೇ ಹೇಳುತ್ತಾ ಸಾಗಿದರು. ಗೋದಲಿಯಲ್ಲಿ ಶ್ರೀಸಾಮಾನ್ಯರಂತೆ ಹುಟ್ಟಿದ ಯೇಸು ಸರಳತೆಯ ಮೂಲಕ ಜಗತ್ತಿನಲ್ಲಿ  ಪ್ರೀತಿ, ಶಾಂತಿ, ಜತೆಗೆ ಕ್ಷಮಿಸುವ ಗುಣವನ್ನು ಮೈಗೂಡಿಸಿಕೊಂಡು  ನೆಮ್ಮದಿಯಿಮದ ಬಾಳಲು ಪ್ರೇರೇಪಿಸಿದರು. ನಾವೆಲ್ಲರೂ ಶಾಂತಿಯ ದೂತರಾಗಿ ಮನುಷ್ಯರ ನಡುವೆ ಸೇತುವೆಯಾಗಿ, ಸತ್ಯದ ಪ್ರತಿಪಾದಕರಾಗಿ  ಹಾಗೂ ಎಲ್ಲರನ್ನೂ ಪ್ರೀತಿಸುವವರಾಗಿ ಬೆಳೆಯಲು ಯೇಸುಸ್ವಾಮಿಯ ಕೃಪಾಶೀರ್ವಾದ ನೆರವಾಗುತ್ತಿದೆ’ ಎಂದರು.

ರೊಸಾರಿಯೋ ಕೆಥೆಡ್ರಲ್‌ನ ಪ್ರಧಾನ ಧರ್ಮಗುರು ಫಾ.ವಲೇರಿಯನ್ ಡಿಸೋಜ, ಸಹಾಯಕ ಧರ್ಮಗುರುಗಳಾದ ಫಾ.ವಲೇರಿಯನ್ ಫರ್ನಾಂಡಿಸ್, ಫಾ.ಜೈಸನ್ ಲೋಬೊ ಭಾಗವಹಿಸಿದ್ದರು. 

ಉರ್ವ ಲೇಡಿಹಿಲ್ ಚರ್ಚ್‌ನಲ್ಲಿ ಫಾ. ಬೆಂಜಮಿನ್ ಪಿಂಟೊ, ಅಶೋಕನಗರದ ಸಂತ ಡೊಮಿನಿಕ್ ಚರ್ಚ್‌ನಲ್ಲಿ ಫಾ.ಡೇನಿಯಲ್ ಸಂಪತ್ ವೇಗಸ್, ಕೂಳೂರು ಚರ್ಚ್‌ನಲ್ಲಿ ಫಾ. ವಿಜಯ ವಿಕ್ಟರ್ ಲೋಬೊ ಅವರು ಕ್ರಿಸ್ಮಸ್ ಬಲಿಪೂಜೆ ನೆರವೇರಿಸಿ ಸಂದೇಶ ನೀಡಿದರು. 

ಕ್ರಿಸ್ಮಸ್‌ ಪ್ರಯುಕ್ತ ಮಂಗಳೂರಿನ ಉರ್ವ ಚರ್ಚ್‌ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನ 

ಮಿಲಾಗ್ರಿಸ್‌ ಚರ್ಚ್‌ನಲ್ಲಿ ಸಡಗರ

ಕರಾವಳಿಯ ಅತ್ಯಂತ ಹಳೆಯ ಚರ್ಚ್‌ಗಳಲ್ಲಿ ಒಂದಾದ ನಗರದ ಮಿಲಾಗ್ರಿಸ್‌ನ ‘ಅವರ್ ಲೇಡಿ ಆಫ್ ಮಿರಾಕಲ್ಸ್’ ಚರ್ಚ್‌ನಲ್ಲಿ ಧರ್ಮಗುರು ಆಲ್ವಿನ್ ಸೆರಾವೊ ಇತರ ಧರ್ಮಗುರು ಗಳೊಂದಿಗೆ ಸೇರಿ ಪವಿತ್ರ ಬಲಿಪೂಜೆ ನೆರವೇರಿಸಿದರು. ಕ್ರಿಸ್ಮಸ್ ಸಂದೇಶ ಸಾರಿದ ಪ್ರದಾನ ಧರ್ಮಗುರು ಬೊನವೆಂಚರ್ ನಜರತ್ ಯೇಸುಕ್ರಿಸ್ತರು ಜನಿಸಿದಾಗ ಇಡಲಾದ ತೊಟ್ಟಿಲು ಮತ್ತು ಅವರಿಗೆ ಇಟ್ಟ ಹೆಸರಿನ ಮಹತ್ವವನ್ನು ವಿವರಿಸಿದರು. ಚರ್ಚ್‌ನ ಉಪಾಧ್ಯಕ್ಷರು ಮತ್ತು ಕಾರ್ಯದರ್ಶಿಯವರು ಕೇಕ್ ಕತ್ತರಿಸಿ ಕ್ರಿಸ್ಮಸ್  ಶುಭಾಶಯ ಹಂಚಿಕೊಂಡರು. ಸಂತಾಕ್ಲಾಸ್ ವೇಷಧಾರಿಗಳು ಮಕ್ಕಳು ಯುವಕರ ಜೊತೆ ನರ್ತಿಸಿ ಖುಷಿಪಡಿಸಿದರು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.