ADVERTISEMENT

ಕೃಷ್ಣಾಪುರ | ಜಲೀಲ್ ಕೊಲೆ ಪ್ರಕರಣ ಭೇದಿಸಲು ಕ್ರಮ: ಸಿ.ಎಂ ಭರವಸೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2022, 2:03 IST
Last Updated 26 ಡಿಸೆಂಬರ್ 2022, 2:03 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ   

ಮಂಗಳೂರು: ಶನಿವಾರ ರಾತ್ರಿ ಕೃಷ್ಣಾಪುರದಲ್ಲಿ ನಡೆದ ಅಬ್ದುಲ್ ಜಲೀಲ್ ಹತ್ಯೆ ದುರದೃಷ್ಟಕರ ಘಟನೆ. ಈ ಕೃತ್ಯ ನಡೆಸಿದವರ ಪತ್ತೆಗೆ ಪೊಲೀಸರು ಈಗಾಗಲೇ ಕ್ರಮ ತೆಗೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಬಜಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರು ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದರು.

'ಕೊಲೆಯ ತನಿಖೆ ಪ್ರಗತಿಯಲ್ಲಿದ್ದು ಪೊಲೀಸರು ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುತ್ತದೆ' ಎಂದರು. 'ಯಾವ ಕಾರಣಕ್ಕಾಗಿ, ಕೊಲೆ ನಡೆದಿದೆ. ಹಿನ್ನೆಲೆ ಏನು ಎಂಬ ಸಂಗತಿ ವಿಚಾರಣೆ ವೇಳೆ ಹೊರ ಬರುತ್ತದೆ' ಎಂದರು,

'ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜನರು ಊಹಾಪೋಹಗಳಿಗೆ ಕಿವಿಗೊಡಬಾರದು. ಶಾಂತಿ- ಸುವ್ಯವಸ್ಥೆಗೆ ಧಕ್ಕೆಯಾಗುವಂತೆ ಯಾರು ಕೂಡ ನಡೆದುಕೊಳ್ಳಬಾರದು. ಶಾಂತಿಯುತವಾಗಿ ಪರಸ್ಪರ ವಿಶ್ವಾಸದಿಂದ ಹೋಗುವುದು ಅವಶ್ಯಕ' ಎಂದರು.

ADVERTISEMENT

'ಪೊಲೀಸರು ಯಾವುದೇ ಒತ್ತಾಯ, ಒತ್ತಡವಿಲ್ಲದೇ ಮುಕ್ತವಾಗಿ ತನಿಖೆ ಮಾಡುತ್ತಾರೆ. ಪ್ರಕರಣದಲ್ಲಿ ಯಾರೇ ಇರಲಿ, ಅವರ ಮೇಲೆ ನೂರಕ್ಕೆ ನೂರು ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುತ್ತೇವೆ. ಸಮಾಜದಲ್ಲಿ ಹಿಂಸೆಗೆ ದಾರಿ ಮಾಡಿಕೊಡುವರನ್ನು ಹತ್ತಿಕ್ಕುವ ಅವಶ್ಯಕತೆ ಇದೆ. ಅದು ನಮ್ಮ ಕರ್ತವ್ಯ, ಸಮಾಜದ ಕರ್ತವ್ಯ. ಕ್ರಿಯೆಗೆ ಪ್ರತಿಕ್ರಿಯೆ ಅಂತ ಅಲ್ಲ. ಪೊಲೀಸರು ನಿಷ್ಪಕ್ಷಪಾತವಾಗಿ, ಮುಕ್ತವಾಗಿ ತನಿಖೆ ಮಾಡುತ್ತಾರೆ'ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.