ವಿಟ್ಲ: ಕೊಳ್ನಾಡು ಗ್ರಾಮದ ಮಂಕುಡೆ ಎಂಬಲ್ಲಿ ಮಳೆಯಿಂದ ಗುಡ್ಡವೊಂದು ಕುಸಿದು ಬಿದ್ದ ಪರಿಣಾಮ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ನಾಲ್ವರು ಅಪಾಯದಿಂದ ಪಾರಾಗಿದ್ದಾರೆ. ಕಾಲು ದಾರಿಯೊಂದರ ಸಂಪರ್ಕ ಕಡಿತಗೊಂಡಿದೆ.
ಕೊಳ್ನಾಡು ಗ್ರಾಮದ ಮಂಕುಡೆ ನೆಡ್ಯಾಲ ನಿವಾಸಿ ಮುಂಡಪ್ಪ ಪೂಜಾರಿ ಅವರ ಮನೆಯ ಹಿಂಬದಿಯ ಸುಮಾರು 40 ಅಡಿ ಎತ್ತರದ ಗುಡ್ಡ ಕುಸಿದು ಮನೆಯ ಹಿಂಬದಿ ಭಾಗಕ್ಕೆ ಬಿದ್ದಿದೆ. ಭಾರಿ ಪ್ರಮಾಣದ ಮಣ್ಣು ಬಿದ್ದಿದ್ದರಿಂದ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಬಾಗಿಲು, ಕಿಟಕಿ ಹಾನಿಗೊಂಡಿವೆ. ಮನೆಯೊಳಗೆ ಮಣ್ಣು ತುಂಬಿದೆ. ನಾಲ್ವರು ಹೊರಗಡೆ ಓಡಿ ಬಂದ ಕಾರಣ ಪಾರಾಗಿದ್ದಾರೆ.
ಗುಡ್ಡ ಕುಸಿದ ಕಾರಣ ಹಲವು ದಶಕಗಳಿಂದ ಸಾವಿರಾರು ಜನರಿಗೆ ಉಪಯೋಗವಾಗಿದ್ದ ಮಂಕುಡೆ-ಕೊಡಂಗೆ-ಕುಳಾಲು ಸಂಪರ್ಕ ದಾರಿ ಸಂಪೂರ್ಣ ನೆಲಕಚ್ಚಿದೆ. ನೂರಾರು ಮಂದಿ ತೊಂದರೆ ಅನುಭವಿಸುವಂತಾಗಿದೆ. ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಸದಸ್ಯ ಪವಿತ್ರ ಪೂಂಜ, ಹರೀಶ್ ಮಂಕುಡೆ ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ತೆರವು ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಇನ್ನೊಂದು ಪ್ರಕರಣ: ವಿಟ್ಲ ಕಸಬಾ ಗ್ರಾಮದ ಸೇರಾಜೆ ಲೂಯಿಸ್ ಡಯಾಸ್ ಅವರ ದನದ ಕೊಟ್ಟಿಗೆ ಮೇಲೆ ಪಕ್ಕದ ಮನೆ ನಿವಾಸಿ ಎಲಿಜಬೆತ್ ರವರ ಹಳೆಯ ಮನೆ ಕುಸಿದು ಬಿದ್ದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.