ಮಂಗಳೂರು: ಕಾಂಗ್ರೆಸ್ಸಿಗರು ಸೇನೆಯನ್ನು ಟೀಕೆ ಮಾಡುವ ಕೆಲಸ ಮಾಡುತ್ತಿಲ್ಲ. ಬದಲಾಗಿ ಬಿಜೆಪಿಯ ಸಚಿವರೊಬ್ಬರು ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನ್ಯಾಯಾಲಯ ಮಧ್ಯ ಪ್ರವೇಶ ಮಾಡಿ ಎಫ್ಐಆರ್ ಹಾಕಬೇಕಾದ ಪರಿಸ್ಥಿತಿ ಇದೆ ಎಂದಾದರೆ ಬಿಜೆಪಿಯ ಮುಖಂಡರು, ಕಾರ್ಯಕರ್ತರ ಬಗ್ಗೆ ನಾವು ಏನು ಹೇಳಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಶುಕ್ರವಾರ ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,
ಪೆಹಲ್ಗಾಮ್ ಘಟನೆ ಹಾಗೂ ಭಾರತ- ಪಾಕ್ ನಡುವಿನ ಕದನ ವಿರಾಮ ಸೇರಿದಂತೆ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಸರ್ವ ಪಕ್ಷಗಳ ಸಭೆ ಕರೆಯಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವಿದ್ದೇವೆ. ನಾವು ಕೇಳುವ ಪ್ರಶ್ನೆ, ಅನುಮಾನಗಳಿಗೆ ಅವರು ಉತ್ತರ ನೀಡಬೇಕು. ಅದಕ್ಕಾಗಿ ಸರ್ವ ಪಕ್ಷ ಕರೆಯಲು ವಿಪಕ್ಷ ನಾಯಕರು ಒತ್ತಾಯಿಸಿದ್ದಾರೆ ಎಂದರು.
ಪೆಹಲ್ಗಾಮ್ ಘಟನೆಗೆ ಯಾರು ಕಾರಣ ಎಂದು ತಿಳಿಸಬೇಕು. ಆ ಘಟನೆಗೆ ಕಾರಣರಾದವರನ್ನು ಎಲ್ಲಿದ್ದರೂ ಹುಡುಕಿ ಮಣ್ಣು ಪಾಲು ಮಾಡುತ್ತೇವೆ ಎಂದು ಪ್ರಧಾನಿ ಹೇಳಿದ್ದರು. ಅವರ ದಿಟ್ಟ ನಿಲುವಿಗೆ ನಾವು ಬೆಂಬಲ ನೀಡಿದ್ದೇವೆ. ಸೇನೆಯ ಬಗ್ಗೆ ನಾವೂ ತಿರಂಗ ಯಾತ್ರೆ ಮಾಡಿದ್ದೇವೆ. ಈ ನಡುವೆ ಭಾರತ ಪಾಕ್ ನಡುವೆ ಕದನ ವಿರಾಮ ಘೋಷಿಸಲಾಯಿತು. ಈ ವಿಷಯಗಳನ್ನು ರಾಜಕಾರಣಕ್ಕೆ ಬಳಸದೆ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಅವರು ಹೇಳಿದರು.
ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು ಮಾಧ್ಯಮ ಎದುರು ಬಂದು ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಹಿಂದೆ ಮನಮೋಹನ್ ಸಿಂಗ್ ಅವರೂ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಆದರೆ, ನಮ್ಮ ಪ್ರಧಾನಿಗೆ ಯಾರೂ ಪ್ರಶ್ನೆ ಕೇಳುವ ಹಾಗಿಲ್ಲ. ಬಿಹಾರದಲ್ಲಿ ನಿಂತು ಭಾಷಣ ಮಾಡುವುದು, ಮನ್ ಕಿ ಬಾತ್ ಹೇಳಿಕೆ ಕೊಟ್ಟು ಹೋಗುವುದು ನಮಗೆ ಬೇಕಾಗಿಲ್ಲ. ನಾವೆಲ್ಲ ಒಂದಾಗಿದ್ದು, ಪಾರದರ್ಶಕತೆ, ಸ್ಪಷ್ಟಯ ಮೂಲಕ ನಮಗೆ ವಿಶ್ವಾಸ ಭರಿಸುವ ಕಾರ್ಯವನ್ನು ಪ್ರಧಾನ ಮಂತ್ರಿ ಮಾಡಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.