ADVERTISEMENT

ಕಲಾಪ ಸುಗಮವಾಗಿ ನಡೆಯದಿರಲು ಬಿಜೆಪಿಯ ಸಂವಿಧಾನ ವಿರೋಧಿ ಧೋರಣೆ ಕಾರಣ: ಖಾದರ್

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2022, 3:55 IST
Last Updated 27 ಫೆಬ್ರುವರಿ 2022, 3:55 IST
ಯು.ಟಿ. ಖಾದರ್‌
ಯು.ಟಿ. ಖಾದರ್‌   

ಮಂಗಳೂರು: ವಿಧಾನಸಭಾ ಕಲಾಪ ಸಮರ್ಪಕವಾಗಿ ನಡೆಯದಿರಲು ಬಿಜೆಪಿಯ ಸಂವಿಧಾನ ವಿರೋಧಿ ಧೋರಣೆ ಕಾರಣ ಎಂದು ವಿಧಾನಸಭೆ ಪ್ರತಿಪಕ್ಷದ ಉಪ ನಾಯಕ ಯು.ಟಿ.ಖಾದರ್ ಆರೋಪಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮುಖಂಡರು ರಾಷ್ಟ್ರ ಧ್ವಜಕ್ಕೆ, ದೇಶಕ್ಕೆ ಅವಮಾನ ಮಾಡಿದ್ದು, ಕೇಂದ್ರ ನಾಯಕರು ಈಶ್ವರಪ್ಪನವರನ್ನು ಬೆಂಬಲಿಸುತ್ತಿರುವುದು ವಿಷಾದನೀಯ. ಇದರಿಂದ ಬಿಜೆಪಿಯ ಮುಖವಾಡ ಕಳಚಿದೆ ಎಂದರು.

ಸದನ ನಡೆಸಲು ಕಾಂಗ್ರೆಸ್ ಅಡ್ಡಿಪಡಿಸಿದೆ ಎನ್ನುವ ಬಿಜೆಪಿ ಮುಖಂಡರ ಹೇಳಿಕೆ ಸರಿಯಲ್ಲ. ಈ ಹಿಂದೆ ಬೆಳಗಾವಿ ಅಧಿವೇಶನದಲ್ಲಿ ಸಾಕಷ್ಟು ಸಮಸ್ಯೆಗಳ ಬಗ್ಗೆ ಚರ್ಚೆ ಆಗಿದೆ. ಆದರೆ ಯಾವುದೂ ಅನುಷ್ಠಾನ ಆಗುತ್ತಿಲ್ಲ. ಬಡವರಿಗೆ ಮನೆ, ನಿವೇಶನ, ಪಡಿತರ ಚೀಟಿ ದೊರೆಯುತ್ತಿಲ್ಲ. ಸರ್ಕಾರ ತನ್ನ ಹೊಣೆಗಾರಿಕೆ ನಿರ್ವಹಿಸುತ್ತಿಲ್ಲ ಎಂದು ದೂರಿದರು.

ADVERTISEMENT

ಉಳ್ಳಾಲದ ರಾಣಿ ಅಬ್ಬಕ್ಕನ ಬಗ್ಗೆ ಗೌರವವಿದ್ದರೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಿಡುಗಡೆ ಮಾಡಲಾದ ₹8 ಕೋಟಿ ವೆಚ್ಚದ ಭವನದ ಯೋಜನೆ ಕೈ ಗೆತ್ತಿಕೊಳ್ಳಲಿ. ಲೇಡಿಗೋಶನ್ ಆಸ್ಪತ್ರೆಯ ಹೆಸರು ಬದಲಾಯಿಸುವ ಬದಲು ಅಲ್ಲಿಗೆ ಇನ್ನಷ್ಟು ಅಗತ್ಯ ಸೌಲಭ್ಯಗಳನ್ನು ಒದಗಿಸಲಿ ಎಂದು ಒತ್ತಾಯಿಸಿದರು.

ಬ್ಯಾರಿ ಭವನದ ನಿರ್ಮಾಣದ ವಿಚಾರದಲ್ಲಿ ಬಿಜೆಪಿ ಪ್ರೇರಿತ ಪ್ರತಿಭಟನೆ ನಡೆಯುತ್ತಿದೆ. ಇದರಲ್ಲಿ ಕಾಂಗ್ರೆಸ್ ಪಾತ್ರ ಇಲ್ಲ ಎಂದರು.

ರಷ್ಯಾ- ಉಕ್ರೇನ್‌ನಲ್ಲಿ ಯುದ್ಧದ ವಾತಾವರಣ ಉಂಟಾದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸಕಾಲದಲ್ಲಿ ಎಚ್ಚೆತ್ತುಕೊಳ್ಳದೆ ಇರುವುದರಿಂದ ಅಲ್ಲಿ ಕೆಲವು ಭಾರತೀಯರು ಆತಂಕದಲ್ಲಿ ಇರುವಂತಾಗಿದೆ ಎಂದು ತಿಳಿಸಿದರು.

ಕನ್ಯಾಡಿಯಲ್ಲಿ ಪರಿಶಿಷ್ಟ ಜಾತಿಯ ವ್ಯಕ್ತಿಯನ್ನು ಕೊಲೆ ಮಾಡಿರುವುದು ಖಂಡನೀಯ. ಈ ವಿಷಯದಲ್ಲಿ ಬಿಜೆಪಿ ಮೌನ ವಹಿಸಿರುವುದು ಏಕೆ? ಕೂಡಲೇ ಆ ವ್ಯಕ್ತಿಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಶಾಹುಲ್ ಹಮೀದ್, ಸಂತೋಷ್ ಕುಮಾರ್ ಶೆಟ್ಟಿ, ಜಕ್ರೀಯ, ಮುರಳಿ ನರಿಂಗಾನ, ಪಾಲಿಕೆ ಸದಸ್ಯ ಲತೀಫ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.