ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಎದುರಿನಲ್ಲಿ ಬಸ್ಗೆ ಕಲ್ಲು ತೂರಾಟ ನಡೆಸಿ, ಟೈರ್ಗೆ ಬೆಂಕಿ ಹಚ್ಚಿರುವ ಕಾಂಗ್ರೆಸ್ ಕಾರ್ಯಕರ್ತರ ಕೃತ್ಯವು ಇಡೀ ರಾಜ್ಯದಲ್ಲಿ ಗಲಭೆಯ ವಾತಾವರಣ ಸೃಷ್ಟಿಸುವ ಷಡ್ಯಂತ್ರವಾಗಿದೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಆರೋಪಿಸಿದರು.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರತಿಭಟನೆಯ ವೇಳೆ ಮಾತನಾಡಿದ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಬಾಂಗ್ಲಾ ದೇಶದಲ್ಲಿ ನಡೆದಂತೆ ಇಲ್ಲೂ ನಡೆಯಬಹುದು ಎಂದು ಹೇಳಿದ್ದಾರೆ. ಬಾಂಗ್ಲಾದಲ್ಲಿ ಹಿಂದೂಗಳು, ಕ್ರೈಸ್ತರ ಮಾರಣಹೋಮ ನಡೆದಿದೆ. ಯಾವ ಅರ್ಥದಲ್ಲಿ ಐವನ್ ಈ ರೀತಿ ಹೇಳಿಕೆ ನೀಡಿದರು ಎಂದು ಸ್ಪಷ್ಟಪಡಿಸಲಿ’ ಎಂದರು.
‘ಕಾಂಕ್ರೀಟ್ ರಸ್ತೆಯಲ್ಲಿ ಪ್ರತಿಭಟನೆ ನಡೆಸುವಾಗ ಬಸ್ಗೆ ಎಸೆಯಲು ಅಷ್ಟು ದೊಡ್ಡ ಕಲ್ಲು ಎಲ್ಲಿ ಸಿಕ್ಕಿತು? ಇದು ಪೂರ್ವಯೋಜಿತ ಕೃತ್ಯ ಆಗಿರುವ ಸಾಧ್ಯತೆ ಇದೆ. ಪೊಲೀಸರು ಈ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕು. ಬಸ್ಗೆ ಕಲ್ಲು ತೂರಿದ ಪ್ರಕರಣದಲ್ಲಿ ಒಬ್ಬರು ಮಹಾನಗರ ಪಾಲಿಕೆ ನಾಮನಿರ್ದೇಶಿತ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ಸೇರಿದ್ದಾರೆ. ಅವರು ಪೊಲೀಸ್ ಠಾಣೆಯಲ್ಲಿ, ‘ನಾವೇ ಕಲ್ಲು ಎಸೆದಿದ್ದು ನೀವೇನು ಮಾಡುತ್ತೀರಿ’ ಎಂದು ಬೆದರಿಕೆ ಹಾಕಿದ್ದರೂ ಪೊಲೀಸರು ಸುಮ್ಮನಿದ್ದಿದ್ದು ಯಾಕೆ? ಈ ಬಗ್ಗೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಲ್ಲಿ, ಇಂತಹ ಘಟನೆಗಳು ಪುನರಾವರ್ತನೆ ಆಗಬಹುದು’ ಎಂದು ಎಚ್ಚರಿಸಿದರು.
ಬಿಜೆಪಿ ಪ್ರಮುಖರಾದ ಭರತ್ ರಾಜ್ ಕೃಷ್ಣಾಪುರ, ಸಂದೀಪ್ ಪಚ್ಚನಾಡಿ, ರಣ್ದೀಪ್ ಕಾಂಚನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.