ADVERTISEMENT

ಚಾಲಕನಿಲ್ಲದೇ ಚಲಿಸಿದ ಕಂಟೈನರ್ ಲಾರಿ, ಪವಾಡಸದೃಶವಾಗಿ ಪಾರಾದ ಜನ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2022, 8:27 IST
Last Updated 20 ಏಪ್ರಿಲ್ 2022, 8:27 IST
ಚಾಲಕನಿಲ್ಲದೇ ಹಿಂಬದಿಗೆ ಚಲಿಸಿದ ಕಂಟೈನರ್ ಲಾರಿ
ಚಾಲಕನಿಲ್ಲದೇ ಹಿಂಬದಿಗೆ ಚಲಿಸಿದ ಕಂಟೈನರ್ ಲಾರಿ   

ಉಳ್ಳಾಲ: ಹ್ಯಾಂಡ್ ಬ್ರೇಕ್ ಕೈಕೊಟ್ಟ ಪರಿಣಾಮ ಚಾಲಕನಿಲ್ಲದೇ ಒಂದು ಕಿ.ಮೀ ವರೆಗೂ ಹಿಂಬದಿ ಚಲಿಸಿದ ಕಂಟೈನರ್ ಲಾರಿ, ಟೋಲ್ ಗೇಟ್‌ಗಳಿಗೆ ಗುದ್ದಿ ಹಾನಿಗೊಳಿಸಿದೆ. ಸೆಕ್ಯುರಿಟಿ ಗಾರ್ಡ್ ಸಹಿತ, ದಂಪತಿ ಪವಾಡಸದೃಶವಾಗಿ ಪಾರಾಗಿದ್ದಾರೆ.

ಈ ಘಟನೆ ತಲಪಾಡಿ ಟೋಲ್‌ಗೇಟ್‌ನಲ್ಲಿ ಮಂಗಳವಾರ‌ ತಡರಾತ್ರಿ ನಡೆದಿದೆ.

ದೆಹಲಿಯಿಂದ ಕೊಚ್ಚಿಗೆ ಫ್ರಿಡ್ಜ್‌ ಸಾಗಣೆ ಮಾಡುತ್ತಿದ್ದ ಗಣಪತಿ ಲಾಜಿಸ್ಟಿಕ್ಸ್ ಸಂಸ್ಥೆಗೆ ಸೇರಿದ ಲಾರಿ ಚಾಲಕ ಜೈವೀರ್ ಸಿಂಗ್ ತಲಪಾಡಿ ಟೋಲ್ ದಾಟಿ ಚಹಾ ಕುಡಿಯಲು ಕಂಟೈನರ್ ಲಾರಿಯನ್ನು ಹೆದ್ದಾರಿ ಬಳಿ ನಿಲ್ಲಿಸಿದ್ದರು. ಚಹಾ ಕುಡಿಯುತ್ತಿದ್ದಂತೆ ತನ್ನಿಂದ ತಾನೇ ಲಾರಿ ಹಿಂಬದಿ ಚಲಿಸಿದ್ದು, ರಿಕ್ಷಾ ಹಾಗೂ ಬೈಕ್ ವೊಂದಕ್ಕೆ ಡಿಕ್ಕಿ ಹೊಡೆದಿದೆ. ಹಿಂಬದಿ ಚಲಿಸಿ ಟೋಲ್‌ಗೇಟ್‌ನಲ್ಲಿರುವ ಸೆನ್ಸರ್ ಕಂಬ, ಸೆಕ್ಯುರಿಟಿ ಚೇರ್, ತಡೆಗಲ್ಲಿಗೆ ಗುದ್ದಿ ನಿಂತಿದೆ. ಈ ನಡುವೆ ಟೋಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸೆಕ್ಯುರಿಟಿ ಸತೀಶ್ ನಾರ್ಲಪಡೀಲು, ಅಶೋಕ್ ಹಾಗೂ ಕೇರಳ ಕಡೆಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ದಂಪತಿ ಪವಾಡಸದೃಶವಾಗಿ ಪಾರಾಗಿದ್ದಾರೆ. ಹ್ಯಾಂಡ್ ಬ್ರೇಕ್ ಕೈಕೊಟ್ಟ ಪರಿಣಾಮ ಲಾರಿ ಹಿಂಬದಿ ಚಲಿಸಿರುವುದಾಗಿ ಚಾಲಕ ತಿಳಿಸಿದ್ದಾರೆ. ಘಟನೆಯಿಂದ ₹1 ಲಕ್ಷದಷ್ಟು ನಷ್ಟ ಉಂಟಾಗಿದೆ.

ADVERTISEMENT

ತಪ್ಪಿದ ಅನಾಹುತ: ರಾತ್ರಿ 9.30 ರ ಸುಮಾರಿಗೆ ಘಟನೆ ನಡೆದಿದ್ದು, ರಂಜಾನ್ ಮಾಸವಾಗಿದ್ದ ಹಿನ್ನೆಲೆಯಲ್ಲಿ ಕೇರಳ ಕಡೆಯಿಂದ ಬರುವ ಹಾಗೂ ಹೋಗುವ ವಾಹನಗಳು ಅಷ್ಟಾಗಿ ಟೋಲ್‌ನಲ್ಲಿ ಇರಲಿಲ್ಲ. ಅಲ್ಲದೇ ಜನಸಂಚಾರವೂ ವಿರಳವಾಗಿತ್ತು. ಇದರಿಂದಾಗಿ ಭಾರಿ ಅನಾಹುತ ತಪ್ಪಿದೆ ಎಂದು ಟೋಲ್ ಪಿ.ಆರ್.ಒ ಭಾಸ್ಕರ್ ತಲಪಾಡಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.