ADVERTISEMENT

ಕಾಸರಗೋಡಿನ ಕತೆಗಾರರ ಕೊಡುಗೆ ಗಮನಾರ್ಹ: ಸುಭಾಷ್ ಪಟ್ಟಾಜೆ

ಕಸಾಪ ಗಡಿನಾಡ ಘಟಕದಿಂದ ಬದಿಯಡ್ಕದಲ್ಲಿ ದತ್ತಿ ಉಪನ್ಯಾಸ, ಕವಿ ಕಾವ್ಯ ಸಂವಾದ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2025, 4:14 IST
Last Updated 4 ಮಾರ್ಚ್ 2025, 4:14 IST
ಸುಭಾಷ್ ಪಟ್ಟಾಜೆ ಉಪನ್ಯಾಸ ನೀಡಿದರು. ವಿಶಾಲಾಕ್ಷ ಪುತ್ರಕಳ, ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಆಯೆಷಾ ಪೆರ್ಲ ಮತ್ತು ನಯನಾ ಗಿರೀಶ್ ಪಾಲ್ಗೊಂಡಿದ್ದರು
ಸುಭಾಷ್ ಪಟ್ಟಾಜೆ ಉಪನ್ಯಾಸ ನೀಡಿದರು. ವಿಶಾಲಾಕ್ಷ ಪುತ್ರಕಳ, ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಆಯೆಷಾ ಪೆರ್ಲ ಮತ್ತು ನಯನಾ ಗಿರೀಶ್ ಪಾಲ್ಗೊಂಡಿದ್ದರು   

ಕಾಸರಗೋಡು: ಕನ್ನಡ ಸಾಹಿತ್ಯಕ್ಕೆ ಕಾಸರಗೋಡಿನ ಕಥೆಗಾರರ ಕೊಡುಗೆ ಗಮನಾರ್ಹ. ಅವರ ಕೃತಿಗಳಿಗೆ ಸಾಹಿತ್ಯ ಚರಿತ್ರೆಯಲ್ಲಿ ವಿಶೇಷ ಸ್ಥಾನ ದೊರೆಯಬೇಕು ಎಂದು ಲೇಖಕ ಸುಭಾಷ್ ಪಟ್ಟಾಜೆ ಅಭಿಪ್ರಾಯಪಟ್ಟರು. 

ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಬದಿಯಡ್ಕದಲ್ಲಿ ಈಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ‘ಶ್ರೀಮತಿ ಕಮಲಮ್ಮ ದತ್ತಿ ಉಪನ್ಯಾಸ’ ನೀಡಿದರು.

ಕನ್ನಡದ ಸಾಹಿತ್ಯದ ವಿವಿಧ ಘಟ್ಟಗಳಲ್ಲಿ ಕತೆಗಳನ್ನು ರಚಿಸಿದ ಬೇಕಲ ರಾಮನಾಯಕ, ಎಂ.ವ್ಯಾಸ, ಕೆ.ವಿ ತಿರುಮಲೇಶ್, ಜನಾರ್ದನ ಎರ್ಪಕಟ್ಟೆ ಮೊದಲಾದವರು ಕನ್ನಡದ ಕತೆಗಳಿಗೆ ಹೊಸ ಶಕ್ತಿ ತುಂಬಿದ್ದರು. ಶೈಲಿ, ವಸ್ತು ಮತ್ತು ತಂತ್ರಗಳಲ್ಲಿ ಕನ್ನಡ ನಾಡಿನ ಇತರ ಕತೆಗಾರರಿಗಿಂತ ಭಿನ್ನತೆ ಪ್ರಕಟಿಸಿದವರು ಎಂದು ಅವರು ಹೇಳಿದರು.

ADVERTISEMENT

ಎಂ.ಕೆ. ಜಿನಚಂದ್ರನ್ ದತ್ತಿ ಉಪನ್ಯಾಸದಲ್ಲಿ ‘ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ’ ಎಂಬ ವಿಷಯದ ಕುರಿತು ಮಾತನಾಡಿದ ಆಯಿಶಾ ಪೆರ್ಲ, ಹತ್ತನೇ ಶತಮಾನದ ಜೈನ ಕವಿಗಳು ಗ್ರಂಥಗಳಲ್ಲಿ ಒಂದನ್ನು ಧರ್ಮಕ್ಕೂ ಇನ್ನೊಂದನ್ನು ಲೌಕಿಕಕ್ಕೂ ಮೀಸಲಿರಿಸಿದ್ದರು. ಲೌಕಿಕ ಕಾವ್ಯಗಳಲ್ಲಿ ಪಂಪ, ರನ್ನ, ಪೊನ್ನ ತಮ್ಮ ಆಶ್ರಯದಾತ ಅರಸರನ್ನು ಪುರಾಣ ಪುರುಷರನ್ನಾಗಿ ಕಲ್ಪಿಸಿಕೊಂಡು ಕಾವ್ಯನಾಯಕರನ್ನಾಗಿಸಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡಪರ ಹೋರಾಟಗಾರ್ತಿ ನಯನಾ ಗಿರೀಶ್ ಅಡೂರು ಅವರನ್ನು ಅಭಿನಂದಿಸಲಾಯಿತು.

ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರ ಅಧ್ಯಕ್ಷತೆಯಲ್ಲಿ ಕವಿತಾ ಕೌತುಕ ಸರಣಿ 2ರ ‘ಕವಿ ಕಾವ್ಯ ಸಂವಾದ’ ನಡೆಯಿತು. ಥಾಮಸ್ ಡಿ'ಸೋಜ, ವೆಂಕಟ ಭಟ್ ಎಡನೀರು, ಎಸ್.ಎನ್ ಭಟ್ ಸೈಪಂಗಲ್ಲು, ಜ್ಯೋತ್ಸ್ನಾ ಕಡಂದೇಲು, ನರಸಿಂಹ ಭಟ್ ಏತಡ್ಕ, ರಾಜಾರಾಮ ವರ್ಮ ವಿಟ್ಲ, ಸುಭಾಷ್ ಪೆರ್ಲ, ವನಜಾಕ್ಷಿ ಚೆಂಬ್ರಕಾನ, ಧನ್ಯಶ್ರೀ ಸರಳಿ, ಮಂಜುಶ್ರೀ ನಲ್ಕ, ರಂಜಿತಾ ಪಟ್ಟಾಜೆ, ಸುಶೀಲ ಪದ್ಯಾಣ, ಶಶಿಕಲಾ ಕುಂಬಳೆ ಕವನ ವಾಚಿಸಿದರು. ಕಸಾಪ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಮತ್ತು ಕವಯತ್ರಿ ದಿವ್ಯಾ ಗಟ್ಟಿ ಪರಕ್ಕಿಲ ನಿರೂಪಿಸಿದರು. ಕಸಾಪ ಗಡಿನಾಡು ಘಟಕದ ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ಸ್ವಾಗತಿಸಿದರು. ಸುಂದರ ಬಾರಡ್ಕ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.