ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸಹಕಾರ ಸಂಘಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ಶ್ರೇಯೋಭಿವೃದ್ಧಿಯ ಆರ್ಥಿಕ ಶಕ್ತಿ ಆಗಿರುವ ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘವು ಸದಸ್ಯರ ಸಹಕಾರದಿಂದ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ. ಸಂಘವು 2024-25ನೇ ಸಾಲಿನಲ್ಲಿ ₹95.32 ಲಕ್ಷ ಲಾಭ ಗಳಿಸಿ, ಸದಸ್ಯರಿಗೆ ಶೇ 20 ಡಿವಿಡೆಂಡ್ ನೀಡಿದೆ ಎಂದು ಸಂಘದ ಅಧ್ಯಕ್ಷ ಎಸ್. ಜಗದೀಶ್ಚಂದ್ರ ಅಂಚನ್ ಹೇಳಿದರು.
ಸಂಘದ ಪ್ರಧಾನ ಕಚೇರಿಯಲ್ಲಿ ಶನಿವಾರ ನಡೆದ 94ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘಕ್ಕೆ ನೌಕರ ಸದಸ್ಯರೇ ಜೀವಾಳ. ಸದಸ್ಯರ ಬೆಂಬಲ, ಪ್ರೋತ್ಸಾಹ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರ ಸಂಘಟಿತ ಕಾರ್ಯನಿರ್ವಹಣೆಯಿಂದ ಸಂಘದ ವ್ಯವಹಾರ ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ ಎಂದರು.
₹177.23 ಕೋಟಿ ವ್ಯವಹಾರ: ಸಂಘವು 1,140 ಮಂದಿ ಸದಸ್ಯರನ್ನು ಹೊಂದಿದೆ. ವರದಿ ವರ್ಷದಲ್ಲಿ ಸಂಘವು ₹34.02 ಲಕ್ಷ ಪಾಲು ಬಂಡವಾಳ ಹೊಂದಿದ್ದು, ₹5.54 ಕೋಟಿ ವಿವಿಧ ನಿಧಿಗಳನ್ನು ಹೊಂದಿದೆ. ಠೇವಣಿ ಸಂಗ್ರಹವು ₹94.33 ಕೋಟಿಗೆ ಏರಿಕೆಯಾಗಿದೆ. ಮುಂಗಡವು ₹74.64 ಕೋಟಿಯಿಂದ ₹82.90 ಕೋಟಿಗೆ ಹೆಚ್ಚಳವಾಗಿದೆ. ಸಂಘದ ಒಟ್ಟು ವ್ಯವಹಾರ ₹163.60 ಕೋಟಿಯಿಂದ ₹177.23 ಕೋಟಿಗೆ ಏರಿಕೆಯಾಗಿದೆ ಎಂದು ತಿಳಿಸಿದರು.
ಎಸ್ಸಿಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ಸಂಘದ ನಿರ್ದೇಶಕರಾದ ದಿವಾಕರ ಶೆಟ್ಟಿ ಕೆ., ವಿಶ್ವೇಶ್ವರ ಐತಾಳ್, ಜಯಪ್ರಕಾಶ್ ರೈ ಸಿ., ಗಿರಿಧರ್ ಕೆ, ವಿಶ್ವನಾಥ ಕೆ.ಟಿ, ಶಿವಾನಂದ ಪಿ., ಚಂದ್ರಕಲಾ ಕೆ., ಮೋಹನ್ ಎನ್., ವಿಶ್ವನಾಥ್ ಎನ್. ಅಮೀನ್, ಗೀತಾಕ್ಷಿ, ಕಿರಣ್ ಕುಮಾರ್ ಶೆಟ್ಟಿ, ನಿಶಿತಾ ಜಯರಾಮ್, ಪ್ರೇಮ್ ರಾಜ್ ಭಂಡಾರಿ ಉಪಸ್ಥಿತರಿದ್ದರು. ಸತೀಶ್ ಪೂಜಾರಿ ಸ್ವಾಗತಿಸಿದರು. ರಾಘವ ಆರ್. ಉಚ್ಚಿಲ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.