ಮಂಗಳೂರು: ನಗರದ ಫಳ್ನೀರ್ನ ವಸತಿ ಗೃಹವೊಂದರಲ್ಲಿ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬುಧವಾರ ಪತ್ತೆಯಾಗಿದ್ದು, ಈ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರನ್ನು ಕೇರಳದ ಕಣ್ಣೂರು ಪ್ರದೇಶದ ಪೆರಿಂಗೋಮ್ನ ವಯಕ್ಕರ ಗ್ರಾಮ ಪಂಚಾಯಿತಿಯ ನಿವಾಸಿಗಳಾದ ರವೀಂದ್ರ (55) ಮತ್ತು ಸುಧಾ (50) ಎಂದು ಗುರುತಿಸಲಾಗಿದೆ.
ದಂಪತಿ ಆತ್ಮಹತ್ಯೆ ಮಾಡಿಕೊಂಡ ಲಾಡ್ಜ್ಗೆ ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.
‘ದಂಪತಿ ಫೆ. 6ರಂದು ಬೆಳಿಗ್ಗೆ 11ಕ್ಕೆ ಲಾಡ್ಜ್ಗೆ ಬಂದಿದ್ದರು. ಆಧಾರ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿಯ ದಾಖಲೆಗಳನ್ನು ಒಪ್ಪಿಸಿ ಕೊಠಡಿಯನ್ನು ಬಾಡಿಗೆ ಪಡೆದಿದ್ದರು. ಲಾಡ್ಜ್ನ ಸಿಬ್ಬಂದಿ ಅವರನ್ನು ಕೊನೆಯದಾಗಿ ನೋಡಿದ್ದು ಫೆ 6ರಂದು. ಆ ಬಳಿಕ ಕೊಠಡಿಯಿಂದ ಹೊರಗೆ ಬಂದಿಲ್ಲ. ಬುಧವಾರ ಬೆಳಿಗ್ಗೆ ಸಿಬ್ಬಂದಿಯು ಅವರನ್ನು ಮಾತನಾಡಿಸಲು ಯತ್ನಿಸಿದ್ದಾರೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಂಚರ ಸಮಕ್ಷಮ ಬಾಗಿಲು ಒಡೆಸಿದಾಗ ನೇಣುಬಿಗಿದ ಸ್ಥಿತಿಯಲ್ಲಿ ಶವಗಳು ಕಂಡುಬಂದಿವೆ’ ಎಂದು ಶಶಿಕುಮಾರ್ ಮಾಹಿತಿ ನೀಡಿದರು.
‘ಮೃತರ ಕುಟುಂಬದವರಿಗೆ ಮಾಹಿತಿ ನೀಡಿದ್ದೇವೆ. ಅವರು ಬಟ್ಟೆ ವ್ಯಾಪಾರ ಮಾಡುತ್ತಿದ್ದರು ಎಂದು ಗೊತ್ತಾಗಿದೆ. ಕುಟುಂಬದ ಸದಸ್ಯರು ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.