ಬೆಳ್ತಂಗಡಿ: ‘ತಾಲ್ಲೂಕಿನ ಪ್ರತಿಗ್ರಾಮದ ಜನತೆಯ ಆರೋಗ್ಯದ ದೃಷ್ಟಿಯಿಂದ ಪ್ರತಿಯೊಬ್ಬ ನಾಗರಿಕರು ಕೋವಿಡ್-19 ಸೋಂಕಿನ ತಪಾಸಣೆಗೆ ಒಳಪಡಿಸಲು ಅನುಕೂಲವಾಗುವಂತೆ ವೈದ್ಯರ ನಡೆ ಹಳ್ಳಿಯ ಕಡೆ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕೋವಿಡ್ ಮುಕ್ತ ತಾಲ್ಲೂಕಾಗಿ ಪರಿವರ್ತಿಸಲು ಸಾರ್ವಜನಿಕರು ಈ ಅಭಿಯಾನಕ್ಕೆ ಸಹಕರಿಸಬೇಕು’ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.
ಬೆಳ್ತಂಗಡಿ ಮಿನಿವಿಧಾನಸೌಧ ಆವರಣದಲ್ಲಿ ತಾಲ್ಲೂಕು ಆಡಳಿತ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಡೆಯುವ ವೈದ್ಯರ ನಡೆ-ಹಳ್ಳಿಯ ಕಡೆ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಫಾದರ್ ಮುಲ್ಲರ್ಸ್ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಯನ್ನು ಒಳಗೊಂಡ ತಂಡ ಕೆಲಸ ಮಾಡಲು ತಯಾರಾಗಿದೆ. ತಾಲ್ಲೂಕಿನ 13 ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ಸಿಬ್ಬಂದಿಯನ್ನು ಸೇರಿಸಿಕೊಂಡು ಎಲ್ಲಾ ಗ್ರಾಮ ಪಂಚಾಯಿತಿಗಳು ಹಾಗೂ ತಾಲ್ಲೂಕಿನ ಎಲ್ಲಾ ಅಧಿಕಾರಿಗಳ ಸಹಕಾರದಲ್ಲಿ ಅಭಿಯಾನ ನಡೆಯುತ್ತದೆ’ ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೊರಗಪ್ಪ ನಾಯ್ಕ್, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಕೋವಿಡ್ -19 ನೋಡಲ್ ಅಧಿಕಾರಿ ವೆಂಕಟೇಶ್, ತಹಶೀಲ್ದಾರ್ ಮಹೇಶ್ ಜೆ., ತಾಲ್ಲೂಕು ಪಂಚಾಯಿತಿ ಇಒ ಕುಸುಮಾಧರ್, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಎಚ್.ಎಸ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುಧಾಕರ್ ಎಂ.ಎಚ್, ತಾಲ್ಲೂಕು ವೈದ್ಯಾ ಧಿಕಾರಿ ಡಾ.ಕಲಾಮಧು, ವೈದ್ಯರಾದ ಚೈತ್ರಾ, ಡಾ.ಕಾವ್ಯಾ, ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಎ, ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಸಂಪರ್ಕಾಧಿಕಾರಿ ಒಲಿವರ್ ಡಿಸೋಜ, ಲ್ಯಾಬ್ ಟೆಕ್ನಿಶನ್ ಮೇಲ್ವಿಚಾರಕ ಪುರುಷೋತ್ತಮ, ನರ್ಸಿಂಗ್ ಮೇಲ್ವಿಚಾರಕಿ ಟ್ಯಾನಿಯಾ ಮಸ್ಕರೇನಸ್ ಇದ್ದರು.
ಫಾದರ್ ಮುಲ್ಲರ್ಸ್ ಆಸ್ಪತ್ರೆಯಿಂದ 65 ಮಂದಿ ಬಂದಿದ್ದು, ಮಾಸ್ಕ್, ಸ್ಯಾನಿಟೈಸರ್, ಫೇಸ್ ಶೀಲ್ಡ್, ಇನ್ನಿತರ ಮೆಡಿಕಲ್ ಕಿಟ್ ನೀಡಲಾಯಿತು.
ತಂಡದಲ್ಲಿ ಯಾರಿದ್ದಾರೆ?: ವೈದ್ಯರನಡೆ ಹಳ್ಳಿ ಕಡೆ ಅಭಿಯಾನದತಂಡದಲ್ಲಿ ಒಬ್ಬ ವೈದ್ಯ, ಒಬ್ಬ ಸ್ವಾಫ್ ನರ್ಸ್, ಒಬ್ಬ ಲ್ಯಾಬ್ ಟೆಕ್ನಿಷಿಯನ್, ಸ್ಥಳೀಯ ಪಿಡಿಒ, ಕಾರ್ಯದರ್ಶಿಗಳು, ಗ್ರಾಮಕರಣಿಕರು, ಗ್ರಾಮ ಸಹಾಯಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಕಿರಿಯ ಆರೋಗ್ಯ ದಾದಿಯರು ಇರುತ್ತಾರೆ. ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಟಾಸ್ಕ್ ಪೋರ್ಸ್ ಸಮಿತಿ ಸದಸ್ಯರು ಸಹಕರಿಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.