ಮಂಗಳೂರು: ಮಂಗಳೂರಿನ ಟೀಂ- ಬಿ ಹ್ಯೂಮನ್ ಹಾಗೂ ಟೀಂ ಐವೈಸಿ ಯೂತ್ ತಂಡಗಳು ಒಂದೇ ದಿನ ಮೃತರಾದ ನಾಲ್ವರ ಅಂತ್ಯಕ್ರಿಯೆಯನ್ನು ಹಿಂದೂ ಸಂಪ್ರದಾಯದಂತೆ ನೆರವೇರಿಸಿ, ಮಾನವೀಯತೆ ಮೆರೆದಿವೆ.
ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಶನಿವಾರ ಕೋವಿಡ್ನಿಂದ ಮೃತಪಟ್ಟವರ ದೇಹವನ್ನು ಸಂಬಂಧಿಕರೇ ಮುಟ್ಟಲು ಭಯಪಟ್ಟಾಗ, ಅಲ್ಲಿಗೆ ಬಂದ, ಟೀಂ - ಬಿ ಹ್ಯೂಮನ್ ನ ಆಸಿಫ್ ಡೀಲ್ಸ್ ಮತ್ತು ಅವರ ಸಹೋದರ ಐವೈಸಿ ಯೂತ್ ತಂಡದ ಸುಹೈಲ್ ಕಂದಕ್, ನಾಲ್ಕು ಮೃತದೇಹದ ಅಂತ್ಯಕ್ರಿಯೆಯನ್ನು ಬೊಲೂರು, ಕದ್ರಿ, ನಂದಿಗುಡ್ಡೆಯ ಸ್ಮಶಾನದಲ್ಲಿ ನೆರವೇರಿಸಿದರು.
ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಟೀಂ ಬಿ ಹ್ಯೂಮನ್ ತಂಡವು ರೋಗಿಗಳೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು, ಅವರಿಗೆ ಅಗತ್ಯ ನೆರವು ನೀಡುತ್ತಿದೆ.
‘ಮೃತಪಟ್ಟ ವ್ಯಕ್ತಿಗಳ ಶವವನ್ನು ಅವರ ಸಂಬಂಧಿಕರು ಮುಟ್ಟಲು ಭಯಪಡುವಂತಹ ಕರುಣಾಜನಕ ಸ್ಥಿತಿ ನಿರ್ಮಾಣವಾ ಗಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ತಮ್ಮ ಬದುಕನ್ನು ಸುರಕ್ಷಿತಗೊ ಳಿಸಿಕೊಳ್ಳಬೇಕಾದ ಅಗತ್ಯವಿದೆ’ ಎಂದು ಆಸಿಫ್ ಡೀಲ್ಸ್ ತಿಳಿಸಿದ್ದಾರೆ
ಬೆಂಗಳೂರು, ಬೆಳ್ತಂಗಡಿ, ಮಂಗಳಾದೇವಿ, ಕಂದಾವರ ಗುರುಪುರದ ನಾಲ್ಕು ವ್ಯಕ್ತಿಗಳ ಅಂತಿಮ ಸಂಸ್ಕಾರ ಮಾಡಿರುವ ಟೀಂ - ಹ್ಯೂಮನ್ ತಂಡದಲ್ಲಿ ಆಸಿಫ್ ಡೀಲ್ಸ್, ಅಶ್ರಫ್ ಕಂದಕ್, ಇಮ್ರಾನ್, ಅಹ್ನಾಫ್ ಡೀಲ್ಸ್, ವಾಹಿದ್ ಹಾಗೂ ಐವೈಸಿ ಯೂತ್ ತಂಡದಲ್ಲಿ ಸುಹೈಲ್ ಕಂದಕ್, ಲುಕ್ಮಾನ್, ಹಸನ್ ಡೀಲ್ಸ್, ದೀಕ್ಷಿತ್, ಅಪ್ಪಿ, ಬಾಚಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.