ADVERTISEMENT

ಕೋವಿಡ್ ಎರಡನೇ ಅಲೆ ತೀರಾ ಕೆಟ್ಟದಾಗಿತ್ತು- ತಜ್ಞ ಡಾ. ಶರತ್‌ ಬಾಬು

​ಪ್ರಜಾವಾಣಿ ವಾರ್ತೆ
Published 7 ಮೇ 2022, 3:27 IST
Last Updated 7 ಮೇ 2022, 3:27 IST
ನಾಟೆಕಲ್ ಕಣಚೂರು ಆಸ್ಪತ್ರೆಯಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಡಾ.ಶರತ್ ಬಾಬು ಮಾತನಾಡಿದರು.
ನಾಟೆಕಲ್ ಕಣಚೂರು ಆಸ್ಪತ್ರೆಯಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಡಾ.ಶರತ್ ಬಾಬು ಮಾತನಾಡಿದರು.   

ಉಳ್ಳಾಲ: ಕೋವಿಡ್ ಎರಡನೇ ಅಲೆಯ ಪರಿಸ್ಥಿತಿ ತೀರಾ ಕೆಟ್ಟದಾಗಿತ್ತು. ಆಸ್ಪತ್ರೆಗಳಲ್ಲಿ ಒತ್ತಡದ ಪರಿಸ್ಥಿತಿ ನಿರ್ಮಾಣವಾಗಿತ್ತು. ಜಿಲ್ಲಾ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಇದ್ದರೂ, ಸಿಬ್ಬಂದಿ ಕೊರತೆ ನೀಗಿಸುವಲ್ಲಿ ಕಣಚೂರು ಸೇರಿದಂತೆ ಖಾಸಗಿ ಆಸ್ಪತ್ರೆಗಳು ಜಿಲ್ಲಾಡಳಿತದ ಜೊತೆಗೆ ಸಹಕರಿಸಿರುವುದು ಶ್ಲಾಘನೀಯ ಎಂದು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಶ್ವಾಸಕೋಶ ತಜ್ಞ ಸಲಹೆಗಾರ ಡಾ.ಶರತ್ ಬಾಬು ಎಸ್. ಹೇಳಿದರು.

ನಾಟೆಕಲ್‌ನ ಕಣಚೂರು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಕಣಚೂರು ಇಸ್ಲಾಮಿಕ್ ಎಜುಕೇಷನ್ ಟ್ರಸ್ಟ್‌ನ ನರ್ಸಿಂಗ್ ಸೈನ್ಸ್‌ನ ವೈದ್ಯಕೀಯ, ಶಸ್ತ್ರಚಿಕಿತ್ಸಾ ಶುಶ್ರೂಷೆ ವಿಭಾಗ ಆಸ್ಪತ್ರೆಯ ಮೂರನೇ ಮಹಡಿಯ ಸಭಾಂಗಣದಲ್ಲಿ ಆಯೋಜಿಸಿದ್ದ ‘ಉಸಿರಾಟದ ಆರೈಕೆ ಹಾಗೂ ವಾಯು ಮಾರ್ಗ ನಿರ್ವಹಣೆಯಲ್ಲಿ ಕೌಶಲಗಳ ಸುಧಾರಣೆ’ ವಿಚಾರದ ಕುರಿತ ನಡೆದ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಉಸಿರಾಟದ ಕಾಯಿಲೆಗಳ ಸಂದರ್ಭ ಆತ್ಮಸ್ಥೈರ್ಯ ತುಂಬುವವರು ದಾದಿಯರು. ಹೆಚ್ಚಾಗಿ ಯಂತ್ರಗಳ ಬಳಕೆಯೇ ಮುಖ್ಯವಾಗಿರುವುದರಿಂದ ನಿರ್ವಹಿಸಬೇಕಾದವರು ಬುದ್ಧಿವಂತ
ರಾಗಿರುತ್ತಾರೆ ಎಂದರು.

ADVERTISEMENT

ಕೋವಿಡ್ ರೋಗಿಗಳಿಗೆ ಟ್ರಾಮಾ ಕೇರ್ ಹೋಂ ಬಂಡಲ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ವಿದೇಶಗಳಲ್ಲಿ ಮಾತ್ರವಿದ್ದ ವ್ಯವಸ್ಥೆ ಇದೀಗ ಭಾರತದಲ್ಲಿಯೂ ಆರಂಭವಾಗಿದೆ. ಉಸಿರಾಟದ ತೊಂದರೆಗೆ ಒಳಗಾದವರಿಗೆ ಸೀಮಿತ ಸಮಯದಲ್ಲಿ ಶೀಘ್ರ ಚಿಕಿತ್ಸೆ ಒದಗಿಸುವುದೇ ಪರಿಹಾರವಾಗಿದೆ. ಇವೆಲ್ಲವನ್ನು ಮುಂದಿಟ್ಟು ಆಗಿರುವ ಸಂಶೋಧನೆಗಳು ಹಾಗೂ ಹೊಸ ವಿಚಾರಗಳ ಪರಿಚಯದ ಸಲುವಾಗಿ ಹಮ್ಮಿಕೊಂಡಿರುವ ಕಾರ್ಯಾಗಾರದ ಪ್ರಯೋಜನ ಪಡೆಯಿರಿ ಎಂದು ಹೇಳಿದರು.

ಉದ್ಘಾಟಿಸಿದ ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಯು.ಕಣಚೂರು ಮೋನು ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಆರೋಗ್ಯದ ಬಗ್ಗೆ ನಿಗಾ ಇಡುವ ಜವಾಬ್ದಾರಿ ಹೊತ್ತಿರುವವರು ಯುವಪೀಳಿಗೆ. ದೇಶ ಅತ್ಯುನ್ನತ ಸ್ಥಾನಕ್ಕೆ ಏರಲು ಅವರೇ ಕಾರಣರಾಗಿರುತ್ತಾರೆ. ದೇಶದಲ್ಲಿ ಪ್ರಜೆಗಳಿಗೆ ಸಾಲುವಷ್ಟು ವೈದ್ಯರು, ನರ್ಸ್‌ಗಳಿಲ್ಲ. ಇವೆಲ್ಲವನ್ನು ಮೂರು ವರ್ಷಗಳಲ್ಲಿ ಪ್ರಪಂಚದಾದ್ಯಂತ ಸಾಕಷ್ಟು ಅಧ್ಯಯನ ನಡೆಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ಶ್ರೀಮಂತ ರಾಷ್ಟ್ರಗಳಲ್ಲಿ ಟೆಕ್ನೀಷಿಯನ್‌ಗಳಿಲ್ಲದೇ, ವ್ಯವಸ್ಥೆಯ ಕೊರತೆಯಿಂದ ಶೇ 40 ರಷ್ಟು ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲೆಯ ಆಸ್ಪತ್ರೆಯಲ್ಲಿ ಸಾಕಷ್ಟು ವೆಂಟಿಲೇಟರ್‌ ಇದ್ದರೂ, ನಿರ್ವಹಿಸಲು ಗೊತ್ತಿರುವ ಸಿಬ್ಬಂದಿಗಳಿಲ್ಲ ಎಂದರು.

ಕಣಚೂರು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ರೋಹನ್ ಮೋನಿಸ್, ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಹರೀಶ್ ಶೆಟ್ಟಿ, ಸಂಪನ್ಮೂಲ ವ್ಯಕ್ತಿ ಜಿನ್ಸೀ ಜೋಸೆಫ್ ಉಪಸ್ಥಿತರಿದ್ದರು. ಕಣಚೂರು ನರ್ಸಿಂಗ್ ಸೈನ್ಸ್ ಪ್ರಾಂಶುಪಾಲೆ ಮೋಲಿ ಸಲ್ಡಾನ ಸ್ವಾಗತಿಸಿದರು. ಆ್ಯನ್ ಭಾನ್ಸ್ ನಿರೂಪಿಸಿದರು. ಪ್ರಿಯಾ ಮೊಂತೇರೊ ವಂದಿಸಿದರು. ರಾಜ್ಯದಾದ್ಯಂತ ವಿವಿಧ ಆಸ್ಪತ್ರೆಗಳಿಂದ 220 ಮಂದಿ ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.