ADVERTISEMENT

ಅಧಿಸೂಚನೆ ಪ‍್ರತಿ ಸುಟ್ಟ ಪ್ರತಿಭಟನಾಕಾರರು

ನೂತನ ಕಾರ್ಮಿಕ ಸಂಹಿತೆಗೆ ಸಿಪಿಎಂ ವಿರೋಧ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 5:44 IST
Last Updated 23 ನವೆಂಬರ್ 2025, 5:44 IST
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕಾರ್ಮಿಕ ಸಂಹಿತೆ  ಅಧಿಸೂಚನೆಯ ಪ್ರತಿಗಳನ್ನು ಮಂಗಳೂರಿನ ಗಡಿಯಾರ ಗೋಪುದ ಬಳಿ ಶನಿವಾರ ಸುಟ್ಟು ಹಾಕುವ ಮೂಲಕ ಸಿಪಿಎಂ ಕಾರ್ಯಕರ್ತರು ಪ್ರತಿಭಟನೆ ವ್ಯಕ್ತಪಡಿಸಿದರು
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕಾರ್ಮಿಕ ಸಂಹಿತೆ  ಅಧಿಸೂಚನೆಯ ಪ್ರತಿಗಳನ್ನು ಮಂಗಳೂರಿನ ಗಡಿಯಾರ ಗೋಪುದ ಬಳಿ ಶನಿವಾರ ಸುಟ್ಟು ಹಾಕುವ ಮೂಲಕ ಸಿಪಿಎಂ ಕಾರ್ಯಕರ್ತರು ಪ್ರತಿಭಟನೆ ವ್ಯಕ್ತಪಡಿಸಿದರು   

ಮಂಗಳೂರು: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ಕಾರ್ಮಿಕ ಸಂಹಿತೆಗೆ ಸಿಪಿಎಂ ವಿರೋಧ ವ್ಯಕ್ತಪಡಿಸಿದೆ. ಕಾರ್ಮಿಕ ಸಂಹಿತೆಯ ಅಧಿಸೂಚನೆಯ ಪ್ರತಿಯನ್ನು ಸುಡುವ ಮೂಲಕ ಸಿಪಿಎಂ ಕಾರ್ಯಕರ್ತರು ಇಲ್ಲಿ ಶನಿವಾರ ಪ್ರತಿಭಟಿಸಿದರು. ಈ ಸಂಹಿತೆಯನ್ನು ಹಿಂಪಡೆಯಬೇಕು. ಈ ಸಂಹಿತೆಗಳಿಗೆ ಅನುಗುಣವಾಗಿ ರಾಜ್ಯ ಸರ್ಕಾರ ನಿಯಮಾವಳಿ ರೂಪಿಸಬಾರದು ಎಂದು ಒತ್ತಾಯಿಸಿದರು.

‘ಕಾರ್ಪೊರೇಟ್ ಸಂಸ್ಥೆಗಳ ಹಿತ ಕಾಪಾಡುತ್ತಿರುವ ಕೇಂದ್ರ ಸರ್ಕಾರ ಕಾರ್ಮಿಕ ಬಗ್ಗೆ ಕಾಳಜಿ ಹೊಂದಿಲ್ಲ’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸಿಐಟಿಯು  ಮುಖಂಡ ಕೆ.ಪ್ರಕಾಶ್, ‘ದೇಶದ ಕಾರ್ಮಿಕರ ಹೋರಾಟ ಫಲವಾಗಿ ರೂಪುಗೊಂಡ  ಕಾರ್ಮಿಕ ಕಾನೂನುಗಳಲ್ಲಿ 29 ಪ್ರಮುಖ ಕಾನೂನುಗಳನ್ನು ಕೇಂದ್ರವು ಸಂಹಿತೆಯಡಿ ತಂದಿದೆ. ಈ ಸಂಹಿತೆಯು ಅತ್ಯಂತ ಅಪಾಯಕಾರಿ, ಇದು ಕಾರ್ಮಿಕರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಮತ್ತು ಮೌಲ್ಯಗಳನ್ನು ನಾಶಗೊಳಿಸಲಿದೆ. ಕಾರ್ಮಿಕ ವರ್ಗವನ್ನು ಮತ್ತೆ ಗುಲಾಮಗಿರಿಗೆ ನೂಕುವ ಹುನ್ನಾರ ಇದರ ಹಿಂದಿದೆ’ ಎಂದು ಟೀಕಿಸಿದರು.

ADVERTISEMENT

ಸಿಐಟಿಯು ಜಿಲ್ಲಾ ಘಕದ ಅಧ್ಯಕ್ಷ ಬಿ.ಎಂ.ಭಟ್, ‘ನರೇಂದ್ರ ಮೋದಿ ನೃತೃತ್ವದ ಸರ್ಕಾರ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ, ಫ್ಯಾಸಿಸ್ಟ್ ಬುದ್ಧಿ ತೋರಿಸುತ್ತಿದೆ. ಎರಡು ವರ್ಷಗಳಿಗೊಮ್ಮೆ ನಡೆಯುತ್ತಿದ್ದ ಭಾರತೀಯ ಕಾರ್ಮಿಕ ಸಮ್ಮೇಳನವನ್ನು (ಐಎಲ್‌ಒ) ಪ್ರಜ್ಞಾಪೂರ್ವಕವಾಗಿ 2015ರಿಂದ ಸ್ಥಗಿತಗೊಳಿಸಲಾಗಿದೆ’ ಎಂದರು.

ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ‘2019ರಲ್ಲಿ ವೇತನ ಸಂಹಿತೆ ಹಾಗೂ 2020ರಲ್ಲಿ ಕೈಗಾರಿಕಾ ಸಂಬಂಧಗಳ ಸಂಹಿತೆ, ಸಾಮಾಜಿಕ ಭದ್ರತಾ ಸಂಹಿತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆಗಳನ್ನು ಕೇಂದ್ರವು ಜಾರಿಗೆ ತಂದಿತ್ತು. ಕಾರ್ಮಿಕರ  ಹೋರಾಟಕ್ಕೆ ಮಣಿದು ಅವುಗಳಿಂದ ಹಿಂದೆ ಸರಿದಿತ್ತು’  ಎಂದು ನೆನಪಿಸಿದರು. 

ಪ್ರಮುಖರಾದ ಯೋಗೀಶ್ ಜಪ್ಪಿನಮೊಗರು, ಜೆ.ಬಾಲಕೃಷ್ಣ ಶೆಟ್ಟಿ, ಸುಕುಮಾರ್ ತೊಕ್ಕೊಟ್ಟು, ಯಾದವ ಶೆಟ್ಟಿ, ರವಿಚಂದ್ರ ಕೊಂಚಾಡಿ,  ಬಿ.ಕೆ.ಇಮ್ತಿಯಾಜ್, ಸಂತೋಷ್ ಬಜಾಲ್, ಜಯಂತಿ ಶೆಟ್ಟಿ, ವಿಲಾಸಿನಿ, ಸಂತೋಷ್, ಖಾದರ್,  ಪ್ರಮೀಳಾ ಶಕ್ತಿನಗರ, ಅಸುಂತ ಡಿಸೋಜ, ಮಾಧುರಿ ಬೋಳಾರ, ಯೋಗಿತಾ ಉಳ್ಳಾಲ, ರಘುವೀರ್, ಕರಿಯ ಕೆ.ಶೇಖರ್ ವಾಮಂಜೂರು, ಪುರುಷೋತ್ತಮ ಪೂಜಾರಿ, ಗಣೇಶ್ ಅಡ್ಯಂತಾಯ ಮೊದಲಾದವರು ಭಾಗವಹಿಸಿದ್ದರು.

‘ಸಂಸತ್ತನ್ನೂ ವಿಶ್ವಾಸಕ್ಕೆ ಪಡೆದಿಲ್ಲ’ 

  ‘ಕೇಂದ್ರ ಸರ್ಕಾರ ಪ್ರಜಾಸತ್ತಾತ್ಮಕ ಚರ್ಚೆ ನಡೆಸದೇ ಏಕಪಕ್ಷೀಯವಾಗಿ ಕಾರ್ಮಿಕ ಸಂಹಿತೆಯನ್ನು ಜಾರಿಗೊಳಿಸಿದೆ. ಈ ಸಂಹಿತೆ ವಿಚಾರದಲ್ಲಿ ಸಂಸತ್ತನ್ನು ಹಾಗೂ  ಕಾರ್ಮಿಕ ಸಂಘಟನೆಗಳನ್ನು ವಿಶ್ವಾಸಕ್ಕೆ ಪಡೆದೇ ಇಲ್ಲ’ ಎಂದು ಸುನಿಲ್ ಕುಮಾರ್ ಬಜಾಲ್ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.