ಉಳ್ಳಾಲ: ಪ್ರತಿಬಾರಿ ಮಳೆಗಾಲದಲ್ಲಿ ಕಡಲ್ಕೊರೆತದಿಂದ ಹಾನಿಗೊಳಗಾಗುವ ಉಚ್ಚಿಲ, ಬಟ್ಟಂಪಾಡಿ, ಸೀಗ್ರೌಂಡ್ ಪ್ರದೇಶಗಳಿಗೆ ವಿಧಾನಸಭೆಯ ಸ್ಪೀಕರ್ ಯು. ಟಿ. ಖಾದರ್ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಈ ಹಿಂದೆ ಉಳ್ಳಾಲದ ಕೋಡಿ, ಕೋಟೆಪುರ, ಮೊಗವೀರಪಟ್ಣ, ಸುಭಾಷ್ ನಗರ, ಹಿಲೇರಿಯ ಮೊದಲಾದ ಭಾಗದಲ್ಲಿ ಶಾಶ್ವತವಾದ ಕೆಲಸ ಮಾಡಿದ ಕಾರಣ ಅಲ್ಲಿ ಕಡಲ್ಕೊರೆತ ರಕ್ಷಣಾ ಕಾರ್ಯ ನಡೆದಿದೆ. ಆ ನಿಟ್ಟಿನಲ್ಲಿ ವಿಪರೀತ ಕಡಲ್ಕೊರೆತ ಆಗುವ ಸೋಮೇಶ್ವರ ಉಚ್ಚಿಲ-ಬಟ್ಟಂಪಾಡಿ ಪ್ರದೇಶದಲ್ಲೂ ಶಾಶ್ವತ ರಕ್ಷಣಾ ಕಾರ್ಯ ಆಗಲೇಬೇಕಿದೆ. ಮೊದಲ ಹಂತದ ಕಾಮಗಾರಿ ನಡೆದಿದ್ದರೂ ರಸ್ತೆ ಕಡಲು ಪಾಲಾಗಿದೆ. ಸಮಸ್ಯೆ ಉಲ್ಬಣಗೊಂಡ ಬಳಿಕ ಕಾಮಗಾರಿ ನಡೆಸುವುದಕ್ಕಿಂತ ಸಮಸ್ಯೆ ಉದ್ಭವಿಸುವ ಮುನ್ನವೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಜತೆಗೆ ಸಮಾಲೋಚಿಸಿದ್ದು, ಸ್ಥಳ ಪರಿಶೀಲನೆ ನಡೆಸಿದ್ದೇವೆ’ ಎಂದರು.
‘ಕಡಲ್ಕೊರೆತಕ್ಕೆ ಸಂಬಂಧಿಸಿ ಎನ್ಐಟಿಕೆ ತಜ್ಞರು ವರದಿ ಕೊಟ್ಟಿದ್ದಾರೆ. ಇಲ್ಲಿ ಶಾಶ್ವತ ಕಾಮಗಾರಿ ಆಗಬೇಕಾದ ಕಾರಣ ಅದಕ್ಕೆ ಸಂಬಂಧಪಟ್ಟ ತಜ್ಞ ಎಂಜಿನಿಯರ್ಗಳನ್ನು ಕರೆಸಿ ಅವರು ಕೊಟ್ಟ ವರದಿಯನ್ನು ಸಂಬಂಧಪಟ್ಟ ಇಲಾಖೆ ಹಾಗೂ ಮುಖ್ಯಮಂತ್ರಿಗೆ ಸಲ್ಲಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.