ಬಂಧನ
(ಸಾಂದರ್ಭಿಕ ಚಿತ್ರ)
ಮೂಡುಬಿದಿರೆ (ದಕ್ಷಿಣ ಕನ್ನಡ): ಬಸ್ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಮೂಡುಬಿದಿರೆ ಸಮೀಪದ ನೀರುಡೆಯಲ್ಲಿ ಮಹಿಳೆಯೊಬ್ಬರ ಕಪಾಳಕ್ಕೆ ಹೊಡೆದ ಆರೋಪದ ಮೇರೆಗೆ ಬಸ್ ನಿರ್ವಾಹಕನನ್ನು ಪೊಲೀಸರು ಬಂಧಿಸಿದ್ದಾರೆ.
ಶಾಲೋಮ್ ಬಸ್ ನ ನಿರ್ವಾಹಕ ಪ್ರಶಾಂತ್ ಪೂಜಾರಿ ಬಂಧಿತ ಆರೋಪಿ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮುಚ್ಚೂರಿನಿಂದ ಸುಮಾರು 15 ಮಂದಿ ಮಹಿಳೆಯರು ಪುತ್ತಿಗೆಯಲ್ಲಿರುವ ಆಳ್ವಾಸ್ ಹಾಸ್ಟೆಲ್ ಗೆ ಶಾಲೊಮ್ ಬಸ್ ನಲ್ಲಿ ನಿತ್ಯ ಕೆಲಸಕ್ಕೆ ಬರುತ್ತಿದ್ದರು. ಕೆಲವೊಮ್ಮೆ ಕೆಲಸ ಬೇಗ ಮುಗಿದರೆ ಬೇರೆ ಬಸ್ಸಿನಲ್ಲಿ ಊರಿಗೆ ವಾಪಾಸಾಗುತ್ತಿದ್ದರು. ಪ್ರತಿ ದಿನ ಇದೇ ಬಸ್ಸಿನಲ್ಲಿ ಬರದಿದ್ದರೆ ರಿಯಾಯಿತಿ ದರದಲ್ಲಿ ಟಿಕೆಟ್ ನೀಡಲು ಆಗದು ಎಂದು ನಿರ್ವಾಹಕ ನಿರಾಕರಿಸಿದ್ದು, ಅದಕ್ಜೆ ಮಹಿಳಾ ಪ್ರಯಾಣಿರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೇ ವಿಷಯಕ್ಕೆ ಮಹಿಳೆ ಜತೆ ವಾಗ್ವಾದ ನಡೆಸಿದ್ದ ನಿರ್ವಾಹಕ ಆಕೆಗೆ ಕಪಾಳಕ್ಕೆ ಹೊಡೆದಿದ್ದಾನೆ ಎಂದು ಆರೋಪಿಸಿ ದೂರು ನೀಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ಬುಧವಾರ ಬಂಧಿಸಲಾಗಿದೆ. ಆತನ ವಿರುದ್ದ ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.