ADVERTISEMENT

ಅಣೆಕಟ್ಟೆಗೆ ಗೇಟ್‌: ಉದ್ಭವಲಿಂಗ ಮುಳುಗಡೆ; ಭಕ್ತರಿಗೆ ನಿರಾಸೆ, ರೈತರಲ್ಲಿ ಸಂತಸ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 4:51 IST
Last Updated 9 ಡಿಸೆಂಬರ್ 2025, 4:51 IST
ಉಪ್ಪಿನಂಗಡಿ ಸಮೀಪದ ಅಣೆಕಟ್ಟೆಗೆ ಗೇಟು ಅಳವಡಿಸಿರುವುದರಿಂದ ನೇತ್ರಾವತಿ ನದಿಯಲ್ಲಿ ಹಿನ್ನೀರು ಸಂಗ್ರಹಗೊಂಡು ಉದ್ಘವಲಿಂಗ ಮುಳುಗಡೆ ಆಗಿದೆ
ಉಪ್ಪಿನಂಗಡಿ ಸಮೀಪದ ಅಣೆಕಟ್ಟೆಗೆ ಗೇಟು ಅಳವಡಿಸಿರುವುದರಿಂದ ನೇತ್ರಾವತಿ ನದಿಯಲ್ಲಿ ಹಿನ್ನೀರು ಸಂಗ್ರಹಗೊಂಡು ಉದ್ಘವಲಿಂಗ ಮುಳುಗಡೆ ಆಗಿದೆ   

ಉಪ್ಪಿನಂಗಡಿ: ನೇತ್ರಾವತಿ ನದಿಗೆ ಬಿಳಿಯೂರಿನಲ್ಲಿ ನಿರ್ಮಿಸಿರುವ ಅಣೆಕಟ್ಟೆಯ 2 ಗೇಟು ಕಡಿಮೆ ಮಾಡಿ ನೀರು ಶೇಖರಣೆಯ ಪ್ರಮಾಣವನ್ನು ಇಲ್ಲಿನ ಸಹಸ್ರಲಿಂಗೇಶ್ವರ ದೇವಸ್ಥಾನದ ಮಖೆ ಜಾತ್ರೆವರೆಗೆ ತಗ್ಗಿಸಬೇಕೆಂಬ ಬೇಡಿಕೆಯ ಹೊರತಾಗಿಯೂ ಅಣೆಕಟ್ಟೆಯ ಗೇಟು ಅಳವಡಿಸಿರುವುದರಿಂದ ಉಪ್ಪಿನಂಗಡಿ ಕುಮಾರಧಾರಾ-ನೇತ್ರಾವತಿ ಸಂಗಮದಲ್ಲಿರುವ ಉದ್ಭವಲಿಂಗ ಜಲಾವೃತವಾಗಿದೆ. ಇದರಿಂದ ಕೃಷಿಕರು ಸಂತಸಗೊಂಡಿದ್ದು, ಭಕ್ತರು ನಿರಾಸೆಗೊಂಡಿದ್ದಾರೆ.

ಬಿಳಿಯೂರು ಅಣೆಕಟ್ಟೆಯಲ್ಲಿ ಸಂಪರ್ಕ ಸೇತುವೆ ಸಹಿತ ಅಣೆಕಟ್ಟೆ ನಿರ್ಮಿಸಿ 4 ಮೀಟರ್ ಎತ್ತರದ ಗೇಟು ಅಳವಡಿಸಿದಾಗ ಅಣೆಕಟ್ಟೆಯ ಹಿನ್ನೀರು ಉಪ್ಪಿನಂಗಡಿ ಗ್ರಾಮದ ಉದ್ದಕ್ಕೂ ನದಿಯಲ್ಲಿ ಸಂಗ್ರಹಗೊಂಡಿತ್ತು. ಅಣೆಕಟ್ಟೆ ನಿರ್ಮಿಸಿದಾಗ ಅದರ ಹಿನ್ನೀರು ನೆಕ್ಕಿಲಾಡಿವರೆಗೆ ಮಾತ್ರ ಸಂಗ್ರಹವಾಗಲಿದೆ ಎಂದು ತಿಳಿಸಲಾಗಿತ್ತು. ಯೋಜನೆ ಕಾರ್ಯರೂಪಕ್ಕೆ ಬಂದ ಬಳಿಕ ಅದು ಉಪ್ಪಿನಂಗಡಿ ಗ್ರಾಮ ವ್ಯಾಪ್ತಿಯ ನದಿ ಒಡಲನ್ನು ವ್ಯಾಪಿಸಿತ್ತು.

ಉದ್ಭವಲಿಂಗ ಮುಳುಗಡೆ: ನದಿಯಲ್ಲಿ ನೀರು ಸಂಗ್ರಹಗೊಂಡಾಗ, ಪಾರಂಪರಿಕವಾಗಿ ನಡೆಯುತ್ತಿದ್ದ ಶಿವರಾತ್ರಿ ಮಖೆ ಜಾತ್ರೆ ಸಹಿತ ಮೂರು ಮಖೆ ಜಾತ್ರೆಗಳಲ್ಲಿನ ಪೂಜೆ ಪುರಸ್ಕಾರಗಳಿಂದ ಉದ್ಭವಲಿಂಗ ವಿಮುಖವಾದಂತಾಯಿತು. ಆದರೆ, ನದಿಯಲ್ಲಿ ಸಮುದ್ರಮಟ್ಟಕ್ಕಿಂತ 26.4 ಮೀಟರ್ ಎತ್ತರದಲ್ಲಿ ನೀರು ಸಂಗ್ರಹಗೊಂಡು ಪರಿಸರದ ಕೃಷಿಕರಿಗೆ ಸಂತಸವಾಗಿತ್ತು. ಪರಿಸರದ ಹಲವೆಡೆ ಬತ್ತಿಹೋಗಿದ್ದ ಕೊಳವೆ
ಬಾವಿಗಳಲ್ಲಿಯೂ ಅಂತರ್ಜಲ ವೃದ್ಧಿಯಾಗಿ ಜಲ ಸಂಪತ್ತು ಕಾಣಿಸಲಾರಂಭಿಸಿದೆ.

ADVERTISEMENT

ಭರವಸೆ ಹುಸಿ, ಭಕ್ತರಿಗೆ ನಿರಾಸೆ: ಉಪ್ಪಿನಂಗಡಿ ಪರಿಸರದ ಜನತೆ ಸಂಕಷ್ಟಕ್ಕೆ ಸಿಲುಕತೊಡಗಿದಾಗ ಮತ್ತು ಪ್ರಶ್ನಾ ಚಿಂತನೆಯಲ್ಲಿಯೂ ಉದ್ಭವಲಿಂಗಕ್ಕೆ ಪೂಜೆ ಸಲ್ಲಿಸದ ಸ್ಥಿತಿಯು ದೋಷಕರವೆಂದು ಗೋಚರಿಸಿತ್ತು. ಉಪ್ಪಿನಂಗಡಿಯ ಟೀಂ ಅಘೋರ ತಂಡ ಭಕ್ತರ ಪರವಾಗಿ ಅಣೆಕಟ್ಟೆಯ ಗೇಟನ್ನು ಮಖೆ ಜಾತ್ರೆವರೆಗೆ 2 ಮೀಟರ್‌ಗೆ ತಗ್ಗಿಸಿ ಜಾತ್ರೆ ಬಳಿಕ ಅದನ್ನು 4 ಮೀಟರ್‌ಗೆ ಏರಿಸಬೇಕು. ಮಖೆ ಜಾತ್ರೆಯಲ್ಲಿ ಉದ್ಭವಲಿಂಗಕ್ಕೆ ಪಾರಂಪರಿಕ ಪೂಜೆ ಸಲ್ಲಿಸುವಂತೆ ಮಾಡಬೇಕು ಎಂದು ಪುತ್ತೂರು ಶಾಸಕರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಸಕಾರಾತ್ಮಕ ಸ್ಪಂದನದ ಭರವಸೆ ಲಭಿಸಿತ್ತಾದರೂ, ಡಿ.6ರಂದು ಅಣೆಕಟ್ಟೆಯ ಗೇಟ್‌ ಅಳವಡಿಸಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.