ADVERTISEMENT

ದಸರಾ: ‘ಮಂಗಳೂರು ದರ್ಶನ’ ಪ್ರವಾಸ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2022, 3:54 IST
Last Updated 22 ಸೆಪ್ಟೆಂಬರ್ 2022, 3:54 IST
   

ಮಂಗಳೂರು: ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ನವರಾತ್ರಿ ವೇಳೆ ‘ಮಂಗಳೂರು ದಸರಾ ದರ್ಶನ’ ಪ್ಯಾಕೇಜ್ ಪ್ರವಾಸವನ್ನು ಕೆಎಸ್‌ಆರ್‌ಟಿಸಿ ಸೆ.26ರಿಂದ ಅಕ್ಟೋಬರ್ 5ರವರೆಗೆ ಹಮ್ಮಿಕೊಂಡಿದೆ.

ಬೆಳಿಗ್ಗೆ ಪ್ರವಾಸ ಹೊರಟರೆ ಮಂಗಳೂರು ಸುತ್ತಮುತ್ತಲಿನ ಒಂಬತ್ತು ವಿವಿಧ ದೇವಿ ದೇವಸ್ಥಾನಗಳಿಗೆ ಭೇಟಿ ನೀಡಿ, ಸಂಜೆ ವಾಪಸ್ ಬರಬಹುದು. ಹಸಿರು ಬಣ್ಣದ ನರ್ಮ್ ಬಸ್ ಅನ್ನು ಪ್ರಾಯೋಗಿಕವಾಗಿ ಪ್ರವಾಸಕ್ಕೆ ಬಳಸಲಾಗುತ್ತಿದೆ. ಒಂದು ಬಸ್‌ನಲ್ಲಿ 40 ಜನರಿಗೆ ಸ್ಥಳಾವಕಾಶ ಇರಲಿದೆ. ಬೆಳಿಗ್ಗೆ 8 ಗಂಟೆಗೆ ಬಿಜೈ ಬಸ್‌ ನಿಲ್ದಾಣದಿಂದ ಹೊರಡುವ ಬಸ್, ಬೆಳಿಗ್ಗೆ 8ರಿಂದ 9ರವರೆಗೆ ಮಂಗಳಾದೇವಿ ದೇವಸ್ಥಾನ, ಅಲ್ಲಿಂದ ಪೊಳಲಿ ರಾಜರಾಜೇಶ್ವರಿ ದೇವಸ್ಥಾನ, ಸುಂಕದಕಟ್ಟೆ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನ, ಕೈಕಂಬ– ಸುಂಕದಕಟ್ಟೆ ಮಾರ್ಗವಾಗಿ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ, ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ, ಅಲ್ಲಿಂದ ಮುಂದೆ ಸಸಿಹಿತ್ಲು ಭಗವತಿ ದೇವಸ್ಥಾನ, ಚಿತ್ರಾಪುರ ದುರ್ಗಾಪರಮೇಶ್ವರಿ ದೇವಸ್ಥಾನ, ಉರ್ವ ಮಾರಿಯಮ್ಮ ದೇವಸ್ಥಾನದಿಂದ ಕುದ್ರೋಳಿ ಗೋಕರ್ಣನಾಥ
ದೇವಸ್ಥಾನಕ್ಕೆ 6.30ಕ್ಕೆ ತಲುಪಿ ನಂತರ 8.30ಕ್ಕೆ ಮರಳಿ ಮಂಗಳೂರು ಬಸ್ ನಿಲ್ದಾಣಕ್ಕೆ ಬಸ್ ಬರುತ್ತದೆ.

ಈಗಾಗಲೇ ಆನ್‌ಲೈನ್ ಟಿಕೆಟ್ ಬುಕಿಂಗ್ (9663211553) ಆರಂಭವಾಗಿದೆ. ಸ್ಥಳದಲ್ಲೇ ಟಿಕೆಟ್ ನೀಡುವ ಸೌಲಭ್ಯವೂ ಇದೆ. ಊಟ, ಉಪಹಾರ ಹೊರತುಪಡಿಸಿ, ವಯಸ್ಕರಿಗೆ ₹ 300, ಆರು ವರ್ಷದ ಮೇಲಿನ ಮಕ್ಕಳಿಗೆ ₹ 250 ದರ ನಿಗದಿಪಡಿಸಲಾಗಿದೆ.

ADVERTISEMENT

‘ಮೈಸೂರು ನಗರ ದರ್ಶನದ ಮಾದರಿಯಲ್ಲಿ ಮಂಗಳೂರಿನಲ್ಲೂ ದಸರಾ ವೇಳೆ ಪ್ಯಾಕೇಜ್ ಟೂರ್ ಪರಿಚಯಿಸಲಾಗುತ್ತಿದೆ. ಸದ್ಯ ಒಂದು ಬಸ್ ನಿಗದಿಪಡಿಸಲಾಗಿದ್ದು, ಬೇಡಿಕೆ ಹೆಚ್ಚಿದಲ್ಲಿ ಹೆಚ್ಚುವರಿ ಬಸ್ ಓಡಿಸಲಾಗುವುದು. ಹೊರ ಊರುಗಳಿಂದ ಬರುವವರಿಗೆ ಈ ಪ್ರವಾಸ ಅನುಕೂಲವಾಗಲಿದೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.