ADVERTISEMENT

ದಕ್ಷಿಣ ಕನ್ನಡ | 163 ಮಂದಿಗೆ ಕೋವಿಡ್‌–19 ದೃಢ

ದಕ್ಷಿಣ ಕನ್ನಡ: ಒಂದೇ ದಿನ ಎರಡಂಕಿಗೆ ಏರಿದ ಸಾವಿನ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 5:59 IST
Last Updated 3 ಆಗಸ್ಟ್ 2020, 5:59 IST

ಮಂಗಳೂರು: ಜಿಲ್ಲೆಯಲ್ಲಿ ಕೋವಿಡ್–19 ಸೋಂಕಿನಿಂದ ಬಲಿಯಾದವರ ಸಂಖ್ಯೆ ಭಾನುವಾರ ಎರಡಂಕಿಗೆ ಏರಿದ್ದು, ಮೊದಲ ಬಾರಿಗೆ ಒಂದೇ ದಿನ 10 ಮಂದಿಯ ಮರಣ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಭಾನುವಾರ 163 ಮಂದಿಗೆ ಕೋವಿಡ್–19 ದೃಢವಾಗಿದ್ದು, 45 ಮಂದಿ ಗುಣಮುಖರಾಗಿದ್ದಾರೆ.

ಸಾವಿನ ಸಂಖ್ಯೆ ಇನ್ನೂರರ ಗಡಿಯತ್ತ ಸಾಗಿದ್ದು, ಒಂದಕಿಯಲ್ಲಿದ್ದ ಸಾವಿನ ಸಂಖ್ಯೆ ಈಗ ದಿಢೀರನೆ ಎರಡಂಕಿಗೆ ಏರಿದೆ. ಜಿಲ್ಲೆಯಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ 169ಕ್ಕೆ ಏರಿಕೆಯಾಗಿದೆ.

163 ಮಂದಿಗೆ ಕೋವಿಡ್‌: ಭಾನುವಾರ ಮತ್ತೆ 163 ಮಂದಿಯಲ್ಲಿ ಕೋವಿಡ್ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 6,015ಕ್ಕೆ ಏರಿದೆ.

ADVERTISEMENT

ಮಂಗಳೂರು ತಾಲ್ಲೂಕಿನಲ್ಲೇ ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದಾರೆ. ಮಂಗಳೂರು ತಾಲ್ಲೂಕಿನಲ್ಲಿ 107, ಬಂಟ್ವಾಳದಲ್ಲಿ 13, ಬೆಳ್ತಂಗಡಿಯಲ್ಲಿ 19, ಪುತ್ತೂರು 11, ಸುಳ್ಯ ತಾಲ್ಲೂಕಿನ 1 ಒಬ್ಬರಿಗೆ ಸೋಂಕು ತಗುಲಿದೆ. ಹೊರಜಿಲ್ಲೆಯ ಒಂಬತ್ತು, ಹೊರರಾಜ್ಯದ ಮೂವರಲ್ಲಿ ಕೋವಿಡ್‌–19 ಪತ್ತೆಯಾಗಿದೆ. ಸೋಂಕಿತರನ್ನು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

45 ಮಂದಿ ಗುಣಮುಖ: ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 45 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ 2,730 ಮಂದಿ ಗುಣಮುಖರಾಗಿದ್ದಾರೆ. 3,116 ಸಕ್ರಿಯ ಪ್ರಕರಣಗಳಿವೆ

ಗೌರವದ ಅಂತ್ಯಕ್ರಿಯೆ: ಬರ್ಕೆಯ ಮಹಿಳೆಯೊಬ್ಬರು ಖಾಸಗಿ ಆಸ್ಪತ್ರೆಯಲ್ಲಿದ್ದ ಮೃತಪಟ್ಟಿದ್ದು, ಅವರಿಗೆ ಕೋವಿಡ್ ಇರುವುದು ಖಚಿತವಾಗಿತ್ತು. ಆ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಸಂಶುದ್ದೀನ್ ನೇತೃತ್ವದಲ್ಲಿ ಕೋವಿಡ್ ಸಹಾಯವಾಣಿ ತಂಡದ ಸದಸ್ಯರು ಆಸ್ಪತ್ರೆಗೆ ತೆರಳಿ ಮೃತ ಶರೀರವನ್ನು ಬೋಳೂರು ಹಿಂದೂ ರುದ್ರಭೂಮಿಗೆ ಸಾಗಿಸುವಲ್ಲಿ ಸಹಕರಿಸಿದರು.

ಕುಟಂಬದವರಿಗೆ ಅವರ ಕೋರಿಕೆಯಂತೆ ವೃದ್ಧೆಯ ಅಂತಿಮ ಯಾತ್ರೆಯ ವೇಳೆ ಮುಖದರ್ಶನಕ್ಕೆ ಅವಕಾಶ ನೀಡಿ, ಗೌರವಯುತ ಅಂತ್ಯಸಂಸ್ಕಾರಕ್ಕೆ ಮಾಡಲಾಗಿದೆ.

‘ಮನೆಯವರಿಗೆ ಮೃತರ ಮುಖದ ದರ್ಶನಕ್ಕೆ ಅವಕಾಶ ನೀಡಿ, ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ಕುಟುಂಬದ ಕೆಲ ಸದಸ್ಯರ ಉಪಸ್ಥಿತಿಯಲ್ಲಿ ಮೃತರ ಗೌರವಯುತ ಅಂತಿಮ ಸಂಸ್ಕಾರಕ್ಕೆ ನನ್ನ ಜತೆ ನಮ್ಮ ಸಹಾಯವಾಣಿ ತಂಡದ ಸದಸ್ಯರು ಸಹಕರಿಸಿದರು’ ಎಂದು ಸಂಶುದ್ದೀನ್‌ ತಿಳಿಸಿದ್ದಾರೆ.

ಕಾಸರಗೋಡು: 70 ಜನರಿಗೆ ಕೋವಿಡ್‌

ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ 70 ಮಂದಿಗೆ ಕೋವಿಡ್‌–19 ದೃಢವಾಗಿದೆ. 31 ಜನರು ಗುಣಮುಖರಾಗಿದ್ದಾರೆ.

ಪರಿಯಾರಂ ವೈದ್ಯಕೀಯ ಕಾಲೇಜಿನಿಂದ ಒಬ್ಬರು, ಪರವನಡ್ಕದಲ್ಲಿ ನಾಲ್ವರು, ಉದಯಗಿರಿ ಸಿಎಫ್ಎಲ್‌ಟಿಸಿಯಿಂದ ಏಳು, ವಿದ್ಯಾನಗರ ಸಿಎಫ್ಎಲ್‌ಟಿಸಿಯಿಂದ 14, ಮಂಜೇಶ್ವರಂ ಗೋವಿಂದಪೈ ಸಿಎಫ್ಎಲ್‌ಟಿಸಿಯಿಂದ 14 ಜನರು ಸೇರಿದಂತೆ 31 ಮಂದಿ ಬಿಡುಗಡೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.