ಮಂಗಳೂರು: ‘ಬುಧವಾರ ಬೆಳಿಗ್ಗೆ ನಗರದ ಮೀನು ಮಾರುಕಟ್ಟೆಗೆ ಭೇಟಿ ನೀಡಿದಾಗ ಅರ್ಧ ಗಂಟೆಯಲ್ಲಿ 8 ಮಂದಿ ಬಾಲ ಕಾರ್ಮಿಕರನ್ನು ಪತ್ತೆ ಮಾಡಿದ್ದೇವೆ. 2 ವರ್ಷಗಳಲ್ಲಿ ಕೇವಲ ಇಬ್ಬರು ಬಾಲ ಕಾರ್ಮಿಕರನ್ನು ಪತ್ತೆ ಮಾಡಿರುವುದು ಅನುಮಾನ ಮೂಡಿಸುತ್ತದೆ. ಇಬ್ಬರನ್ನು ಪತ್ತೆ ಹಚ್ಚಲು ಕಾರ್ಮಿಕ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ವರ್ಷವಿಡೀ ಸರ್ಕಾರಿ ವೇತನ ಕೊಡಬೇಕೇ’ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷ ಅಂತೋನಿ ಸೆಬಾಸ್ಟಿಯನ್ ಖಾರವಾಗಿ ಪ್ರಶ್ನಿಸಿದರು.
ನಗರದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ’ನಿಮ್ಮನ್ನು ಬೇರೆ ಇಲಾಖೆಗೆ ಏಕೆ ವರ್ಗಾಯಿಸಬಾರದು’ ಎಂದು ಕೇಳಿದರು.
ಪತ್ತೆಯಾಗದ 55 ಮಕ್ಕಳು:
‘ಜಿಲ್ಲೆಯಲ್ಲಿ 2017 ರಿಂದ 2020 ರವರೆಗೆ 177 ಮಕ್ಕಳು ನಾಪತ್ತೆಯಾಗಿದ್ದಾರೆ. ಅವರಲ್ಲಿ 122 ಮಂದಿ ಮಕ್ಕಳನ್ನು ಪತ್ತೆ ಹಚ್ಚಲಾಗಿದೆ. ಉಳಿದ 55 ಮಕ್ಕಳ ಪತ್ತೆ ಇನ್ನೂ ಆಗಿಲ್ಲ’ ಎಂದು ಅಧಿಕಾರಿಗಳು ತಿಳಿಸಿದರು.
‘ಆ ಮಕ್ಕಳು ಮಾನವ ಕಳ್ಳಸಾಗಣೆ, ಕೊಲೆ ಇತ್ಯಾದಿಗಳಿಗೆ ಒಳಗಾಗಿರುವ ಸಾಧ್ಯತೆ ಇದೆ. ಈ ಪ್ರಕರಣಗಳ ತನಿಖೆ ಯಾವ ಹಂತದಲ್ಲಿದೆ? ಆ ಮಕ್ಕಳ ತಂದೆ- ತಾಯಿಗೆ ಏನು ಉತ್ತರ ಕೊಡ್ತೀರಾ’ ಎಂದು ಅಂತೋನಿ ಸೆಬಾಸ್ಟಿಯನ್, ಸದಸ್ಯ ಪರಶುರಾಮ್ ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.