ಸಾಕ್ಷಿ ದೂರುದಾರ
ಬೆಳ್ತಂಗಡಿ (ದಕ್ಷಿಣ ಕನ್ನಡ ಜಿಲ್ಲೆ): ಧರ್ಮಸ್ಥಳ ಗ್ರಾಮದಲ್ಲಿ ಮೃತದೇಹಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಆರೋಪದ ಸಾಕ್ಷಿ ದೂರುದಾರನಿಗೆ ಜಾಮೀನು ನೀಡುವುದಕ್ಕೆ ಸಂಬಂಧಿಸಿದ ಆದೇಶವನ್ನು ಸೆ. 16ರಂದು ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿದೆ.
ಸಾಕ್ಷಿ ದೂರುದಾರನನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಆ.22ರಂದು ಬಂಧಿಸಿತ್ತು. ಬೆಳ್ತಂಗಡಿ, ಬೆಂಗಳೂರು ಮತ್ತಿತರ ಕಡೆಗಳಲ್ಲಿ ಮಹಜರು ನಡೆದಿತ್ತು. ಸೆ. 6ರಂದು ನ್ಯಾಯಾಂಗ ಬಂಧನ ವಿಧಿಸಿ ಬೆಳ್ತಂಗಡಿಯ ಜೆಎಂಎಫ್ಸಿ ನ್ಯಾಯಾಲಯ ಶಿವಮೊಗ್ಗ ಜೈಲಿಗೆ ಕಳುಹಿಸಿತ್ತು.
ಆತನ ಜಾಮೀನು ಅರ್ಜಿ ಶುಕ್ರವಾರ ವಿಚಾರಣೆಗೆ ಬಂದಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶ ವಿಜಯೇಂದ್ರ ಟಿ. ಎಚ್ ಅವರು ಆದೇಶ ಕಾಯ್ದಿರಿಸಿದರು. ಜಾಮೀನು ನೀಡಬಾರದು ಎಂದು ಎಸ್ಐಟಿ ಪೊಲೀಸರು ವಕೀಲರ ಮೂಲಕ ಕೋರ್ಟ್ಗೆ ಆಕ್ಷೇಪಣೆ ಸಲ್ಲಿಸಿದ್ದಾರೆ. ಸಾಕ್ಷಿ ದೂರುದಾರನ ಪರವಾಗಿ ಕಾನೂನು ಸೇವಗಳ ಪ್ರಾಧಿಕಾರದ ವಕೀಲರು ವಾದ ಮಂಡಿಸಿದ್ದರು.
ವಿಠ್ಠಲ ಗೌಡ ಸಹಾಯಕನ ವಿಚಾರಣೆ
ಸಾಕ್ಷಿ ದೂರುದಾರ ಆರಂಭದಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ತಲೆಬುರುಡೆ
ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಸಂದೇಹದಿಂದ ವಿಚಾರಣೆಗೆ ಒಳಗಾಗಿದ್ದ ವಿಠ್ಠಲ ಗೌಡ ಅವರ ಆಪ್ತ ಎಂದು ಹೇಳಲಾದ ಬಂಟ್ವಾಳ ನಿವಾಸಿ ಪ್ರದೀಪ್ ಎಂಬುವರನ್ನು ಶುಕ್ರವಾರ ಎಸ್ಐಟಿ ವಿಚಾರಣೆಗೆ ಒಳಪಡಿಸಿದೆ.
ಜೆಎಂಎಫ್ಸಿ ನ್ಯಾಯಾಲಯಕ್ಕೆ ಮಧ್ಯಾಹ್ನ 3 ಗಂಟೆಯ ವೇಳೆ ಪ್ರದೀಪ್ ಅವರನ್ನು ಹಾಜರುಪಡಿಸಿದ್ದು ನ್ಯಾಯಾಧೀಶರ ಮುಂದೆ ಸುಮಾರು ಎರಡು ತಾಸು ಹೇಳಿಕೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.