ADVERTISEMENT

Dharmasthala Case: ಮೃತದೇಹದ ಅವಶೇಷ ಶೋಧ: 13ನೇ ಜಾಗದಲ್ಲೂ ಸಿಗಲಿಲ್ಲ ಕುರುಹು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 23:54 IST
Last Updated 12 ಆಗಸ್ಟ್ 2025, 23:54 IST
<div class="paragraphs"><p>ಧರ್ಮಸ್ಥಳ ಸ್ನಾನಘಟ್ಟದ ಸಮೀಪ ಸಾಕ್ಷಿ ದೂರುದಾರ ತೋರಿಸಿದ್ದ 13ನೇ ಜಾಗದಲ್ಲಿ ಜಿಪಿಆರ್ ಬಳಸಿ ಶೋಧ ಕಾರ್ಯ ನಡೆಸುವುದನ್ನು&nbsp; ಎಸ್‌ಐಟಿಯ ಡಿಜಿಪಿ ಪ್ರಣವ್‌ ಮೊಹಾಂತಿ ವೀಕ್ಷಿಸಿದರು</p></div>

ಧರ್ಮಸ್ಥಳ ಸ್ನಾನಘಟ್ಟದ ಸಮೀಪ ಸಾಕ್ಷಿ ದೂರುದಾರ ತೋರಿಸಿದ್ದ 13ನೇ ಜಾಗದಲ್ಲಿ ಜಿಪಿಆರ್ ಬಳಸಿ ಶೋಧ ಕಾರ್ಯ ನಡೆಸುವುದನ್ನು  ಎಸ್‌ಐಟಿಯ ಡಿಜಿಪಿ ಪ್ರಣವ್‌ ಮೊಹಾಂತಿ ವೀಕ್ಷಿಸಿದರು

   

  ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್.

ಮಂಗಳೂರು: ಧರ್ಮಸ್ಥಳ ಬೆಳವಣಿಗೆಗೆ ಸಂಬಂಧಿಸಿದಂತೆ ಸಾಕ್ಷಿ ದೂರುದಾರ ತೋರಿಸಿದ್ದ 13ನೇ ಜಾಗದಲ್ಲಿ ಮಂಗಳವಾರ ಶೋಧ ನಡೆದಿದ್ದು, ಶವದ ಅವಶೇಷದ ಕುರುಹು ಸಿಗಲಿಲ್ಲ‌.

ADVERTISEMENT

ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪದ ಅಣೆಕಟ್ಟೆಯ ಪಕ್ಕದ ಬಯಲಿನ ಈ ಜಾಗದಲ್ಲಿ ‘ಅನೇಕ ಮೃತದೇಹಗಳನ್ನು ಹೂತಿದ್ದೆ’ ಎಂದು ಪ್ರಕರಣದ ಸಾಕ್ಷಿ ದೂರುದಾರ ತಿಳಿಸಿದ್ದ. ಹಾಗಾಗಿ ಇಲ್ಲಿನ ಶೋಧ ಕಾರ್ಯ ತೀವ್ರ ಕುತೂಹಲ ಕೆರಳಿಸಿತ್ತು.

ಇಲ್ಲಿ ಅಣೆಕಟ್ಟೆ ಹಾಗೂ ರಸ್ತೆ ನಿರ್ಮಿಸುವಾಗ 10 ಅಡಿಗಳಷ್ಟು ಮಣ್ಣು ಹಾಕಿ ನೆಲವನ್ನು ಎತ್ತರಿಸಲಾಗಿತ್ತು. ಹಾಗಾಗಿ ನೆಲ ಅಗೆಯಲು ಸಣ್ಣ, ದೊಡ್ಡ ಯಂತ್ರ ಬಳಸಿ 15ರಿಂದ 20 ಅಡಿ ಆಳದವರೆಗೆ ಗುಂಡಿ ತೋಡಲಾಯಿತು. ಯಾವುದೇ ಕುರುಹೂ ಸಿಗಲಿಲ್ಲ. ಸಾಕ್ಷಿ ದೂರುದಾರ ಸ್ಥಳದಲ್ಲಿಯೇ ಇದ್ದು ಎಲ್ಲಿ ಅಗೆದರೆ ಮೃತದೇಹದ ಕುರುಹು ಸಿಗಬಹುದು ಎಂದು ತೋರಿಸಿದ.

ಸ್ಥಳಕ್ಕೆ ಭೇಟಿ ನೀಡಿದ್ದ ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಶೋಧ ಕಾರ್ಯಾಚರಣೆಗೆ ಮಾರ್ಗದರ್ಶನ ಮಾಡಿದರು. ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ಎಸ್ಐಟಿ ಎಸ್.ಪಿಗಳಾದ ಜಿತೇಂದ್ರ ಕುಮಾರ್ ದಯಾಮ, ಸಿ.ಎ.ಸೈಮನ್‌ ಅವರು  ಸ್ಥಳದಲ್ಲಿದ್ದರು. 

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳೂ ಶೋಧ ಕಾರ್ಯ ನಡೆದ ಜಾಗಕ್ಕೆ ಭೇಟಿ ನೀಡಿದರು.

ಇದುವರೆಗೆ, ಶೋಧ ಕಾರ್ಯಾಚರಣೆಯನ್ನು ಮಾಧ್ಯಮದವರು ಚಿತ್ರೀಕರಿಸುವುದನ್ನು ತಡೆಯಲು ಆ ಜಾಗದ ಸುತ್ತ ಹಸಿರು ಬಣ್ಣದ ಪರದೆ ಕಟ್ಟಲಾಗುತ್ತಿತ್ತು. ಆದರೆ 13ನೇ ಜಾಗದಲ್ಲಿ ಶೋಧ ಕಾರ್ಯವನ್ನು ದೂರದಿಂದ ಚಿತ್ರೀಕರಿಸಲು ಅವಕಾಶ ಕಲ್ಪಿಸಲಾಯಿತು.

ಸಾಕ್ಷಿ ದೂರುದಾರ ಮೃತದೇಹಗಳನ್ನು ಹೂತಿರುವುದಾಗಿ ಹೇಳಿ, ಇದುವರೆಗೆ 17 ಜಾಗಗಳನ್ನು ತೋರಿಸಿದ್ದು, ಅವುಗಳಲ್ಲಿ ಎರಡು ಕಡೆ ಮೃತದೇಹಗಳ ಅವಶೇಷ ಸಿಕ್ಕಿದೆ.

ಜಿಪಿಆರ್ ಬಳಸಿ ಶೋಧ
13ನೇ ಜಾಗದ ಬಳಿ ವಿದ್ಯುತ್ ಮಾರ್ಗ ಹಾದು ಹೋಗಿತ್ತು. ಮೂರು ವಿದ್ಯುತ್ ಕಂಬಗಳಿದ್ದವು. ಆ ಜಾಗ ಕಿರು ಅಣೆಕಟ್ಟೆಯಿಂದ ಸುಮಾರು 15 ಮೀಟರ್‌ ದೂರದಲ್ಲಿದೆ. ಹಾಗಾಗಿ ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್‌ (ಜಿಪಿಆರ್) ಬಳಸಿ ನೆಲದಡಿಯ ಸಂಚರನೆ ತಿಳಿದು ನೆಲ ಅಗೆಯುವ ಕಾರ್ಯ ನಡೆಸಲಾಯಿತು.  ‘ಈ ಜಾಗದಲ್ಲಿ ಜಿಪಿಆರ್‌ ಬಳಸಿದ್ದು ಅಲ್ಲಿ ನೆಲದಡಿಯ ಸಂಚರನೆ ಹೇಗಿದೆ ಎಂಬುದನ್ನು ತಿಳಿದುಕೊಳ್ಳಲು. ಅಲ್ಲಿ ಅಗೆದರೂ ಯಾವುದೇ ಅಪಾಯ ಇಲ್ಲ ಎಂಬುದನ್ನು ಖಾತರಿಯಾದ ಬಳಿಕ ಕಾರ್ಯ ಆರಂಭಿಸಲಾಯಿತು. ಅಲ್ಲಿ ಮೃತದೇಹದ ಕುರುಹು ಸಿಕ್ಕಿಲ್ಲ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.