
ಮಂಗಳೂರು: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಜಾಹೀರಾತು ನೀಡಿರುವ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು, ಸರ್ಕಾರದ ಚಿಹ್ನೆ ಬಳಸಿಕೊಂಡು ಖಾಸಗಿ ಸಂಸ್ಥೆ ಪಿಎಂ ಕೇರ್ ಅಡಿಯಲ್ಲಿ ಸಂಗ್ರಹಿಸಿರುವ ಹಣವನ್ನು ಯಾವ ಉದ್ದೇಶಕ್ಕೆ ಬಳಕೆ ಮಾಡಿದ್ದಾರೆ ಎಂದು ಉತ್ತರಿಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸವಾಲು ಹಾಕಿದರು.
ಶೂನ್ಯ ಪ್ರಸರಣ ಹೊಂದಿರುವ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಕರ್ನಾಟಕ ಸರ್ಕಾರವ ₹2.9 ಕೋಟಿ ಮೊತ್ತದಷ್ಟು ಜಾಹೀರಾತುಗಳನ್ನು ನೀಡಿ, ಅಕ್ರಮ ಎಸಗಿದೆ ಎಂಬ ಪ್ರಲ್ಹಾದ ಜೋಶಿ ಆರೋಪಕ್ಕೆ ಶುಕ್ರವಾರ ಇಲ್ಲಿ ಉತ್ತರಿಸಿದ ಅವರು, ‘ಕೋವಿಡ್–19 ಸಂದರ್ಭದಲ್ಲಿ ಪಿಎಂ ಕೇರ್ ಅಡಿಯಲ್ಲಿ ಪೂರೈಕೆ ಮಾಡಿದ್ದ ವೆಂಟಿಲೇಟರ್ಗಳ ಗುಣಮಟ್ಟ ಕೂಡ ಕಳಪೆಯಾಗಿದೆ’ ಎಂದರು.
‘ನ್ಯಾಷನಲ್ ಹೆರಾಲ್ಡ್’ ಇತಿಹಾಸ ಹೊಂದಿರುವ ಪತ್ರಿಕೆಯಾಗಿದ್ದು, ಸ್ವಾತಂತ್ರ್ಯ ಹೋರಾಟದ ವೇಳೆಯೂ ಪ್ರಮುಖ ಪಾತ್ರವಹಿಸಿದೆ. ಅದಕ್ಕೆ ₹2 ಕೋಟಿಯಷ್ಟು ಜಾಹೀರಾತು ಕೊಟ್ಟಿರುವುದನ್ನೇ ದೊಡ್ಡ ವಿಷಯ ಮಾಡುತ್ತಿದ್ದಾರೆ. ಜೋಶಿಯವರು ತಿಳಿದುಕೊಂಡು ಮಾತನಾಡಲಿ ಎಂದು ಪ್ರತಿಕ್ರಿಯಿಸಿದರು.
ಉದ್ಯೋಗ ಖಾತ್ರಿಯಾಗಿ ಉಳಿದಿಲ್ಲ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ (ನರೇಗಾ) ಹೆಸರನ್ನು ವಿಬಿ– ಜಿ ರಾಮ್ ಜಿ ಎಂದು ಬದಲಿಸಿರುವ ಕೇಂದ್ರ ಸರ್ಕಾರ, ಕಾಯ್ದೆಯ ಮೂಲ ಸ್ವರೂಪವನ್ನೇ ಬದಲಾಯಿಸಿದೆ. ಹೊಸ ಯೋಜನೆಯ ನಿಯಮಗಳು ಉದ್ಯೋಗ ಖಾತ್ರಿಯ ಯಾವುದೇ ಭರವಸೆ ಉಳಿಸಿಕೊಂಡಿಲ್ಲ ಎಂದು ಸಚಿವರು ಆರೋಪಿಸಿದರು.
ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಇದನ್ನು ಒಪ್ಪುವುದಿಲ್ಲ. ಈ ಬಗ್ಗೆ ಕಾನೂನು ಹೋರಾಟದ ಜೊತೆಗೆ, ವಿಶೇಷ ಅಧಿವೇಶನ ಕರೆದು ಚರ್ಚಿಸಲಿದೆ. ಕಾಯ್ದೆ ತಿದ್ದುಪಡಿ ಪ್ರಕಾರ ಶೇ 40ರಷ್ಟು ಮೊತ್ತವನ್ನು ರಾಜ್ಯ ಸರ್ಕಾರ ಭರಿಸಬೇಕಾಗಿದ್ದು, ಕೇಂದ್ರ ಸರ್ಕಾರ ಈ ಮಟ್ಟಿಗೆ ದಿವಾಳಿ ಆಗಿದೆಯೇ ಎಂದು ಪ್ರಶ್ನಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2022–23ರಲ್ಲಿ ₹76 ಕೋಟಿ, 2023–24ರಲ್ಲಿ ₹65 ಕೋಟಿ, 2024–25ರಲ್ಲಿ ₹64 ಕೋಟಿ ವೆಚ್ಚದ ಕಾಮಗಾರಿಗಳು ನಡೆದಿವೆ. ತಿದ್ದುಪಡಿಯಾದ ಕಾಯ್ದೆಯನ್ವಯ ಜನರಿಗೆ ಕೆಲಸ ಸಿಗುವುದೇ ಅನುಮಾನವಾಗಿದೆ. ಇದರ ವಿರುದ್ಧ ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸುವ ಮೂಲಕ ಕಾಂಗ್ರೆಸ್ ಹೋರಾಟ ನಡೆಸಲಿದ್ದು, ಹಿಂದಿನ ಯೋಜನೆಯನ್ನೇ ಉಳಿಸುವಂತೆ ಆಗ್ರಹಿಸಲಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಪದ್ಮರಾಜ್ ಆರ್, ಶಶಿಧರ್ ಹೆಗ್ಡೆ, ವಿನಯ್ರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.