ಸುಬ್ರಹ್ಮಣ್ಯ: ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ ಅವರು ಮಂಗಳವಾರ ಕುಕ್ಕೆ ಸುಬ್ರಹ್ಮಣ್ಯದ ವಿವಿಧೆಡೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟದ ಬಳಿ ನಿರ್ಮಾಣವಾಗುತ್ತಿರುವ ಸೇತುವೆ ಹಾಗೂ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದೆರು.
ಸುಬ್ರಹ್ಮಣ್ಯದ ಪಶು ಆಸ್ಪತ್ರೆ, ಬಿಸಿಎಂ ಹಾಸ್ಟೆಲ್, ಆಶ್ರಮ ಶಾಲೆ, ಸರ್ಕಾರಿ ಪ್ರಾಥಮಿಕ ಆಸ್ಪತ್ರೆ, ಸ್ನಾನಘಟ್ಟ, ಮಾದರಿ ಶಾಲೆ, ಮಾದರಿ ಶಾಲೆಯ ಈ ಹಿಂದಿನ ಮೈದಾನವನ್ನು ಪರಿಶೀಲಿಸಿದರು. ಬಿಸಿಎಂ ಹಾಸ್ಟೆಲ್ಗೆ ತೆರಳಿ ಶುಚಿತ್ವ, ಆಹಾರದ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿ ಆಹಾರ ಸವಿದರು.
‘ಮುಖ್ಯಮಂತ್ರಿ ಅವರ ಸೂಚನೆಯಂತೆ ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. ಬಿಸಿಎಂ ಹಾಸ್ಟೆಲ್ ಉತ್ತಮ ರೀತಿಯಲ್ಲಿದೆ. ಹೊಸ ಕಟ್ಟಡ ಅಗತ್ಯವಿದೆ. ಪಕ್ಕದ ಆಶ್ರಮ ಶಾಲೆ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಈ ವಾರ ಪೂರ್ಣಗೊಳ್ಳಲಿದ್ದು, ಶೀಘ್ರ ಹಸ್ತಾಂತರವಾಗಲಿದೆ’ ಎಂದರು.
ಸುಬ್ರಹ್ಮಣ್ಯದ ಪಶು ಆಸ್ಪತ್ರೆಗೆ ಗುತ್ತಿಗೆ ಆಧಾರದಲ್ಲಿ ವೈದ್ಯರ ನಿಯೋಜನೆ ಆಗಿದೆ. ಆಸ್ಪತ್ರೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಕ್ಕೆ ಸೂಚಿಸಲಾಗುವುದು ಎಂದರು.
ಸುಬ್ರಹ್ಮಣ್ಯ-ಮಂಜೇಶ್ವರ ಹೆದ್ದಾರಿಯಲ್ಲಿ ಸೇತುವೆ, ರಸ್ತೆ ಕಾಮಗಾರಿ ನಡೆಯುತ್ತಿದೆ. ಈ ಬಾರಿ ಮಳೆ ಬೇಗ ಬಂದಿದ್ದರಿಂದ ಕಾಮಗಾರಿ ಪೂರ್ಣಗೊಂಡಿಲ್ಲ. ಮಳೆ ಬಿಡುವು ನೀಡಿದರೆ ರಸ್ತೆಯನ್ನು ಸಮರ್ಪಕವಾಗಿಸಲು ಸೂಚಿಸಿದ್ದೇನೆ. ನದಿ ಬಳಿ ಸೂಚನ ಫಲಕಾ, ರಿಫ್ಲೆಕ್ಟರ್ ಅಳವಡಿಸಿ, ತೊಂದರೆ ಆಗದಂತೆ ಕ್ರಮ ವಹಿಸಲು ಸಂಬಂಧಿಸಿದವರಿಗೆ ಸೂಚಿಸಿದ್ದೇನೆ ಎಂದರು.
ಕುಮಾರಧಾರಾ ಸ್ನಾನಘಟ್ಟದಲ್ಲಿ ಎಸ್ಡಿಆರ್ಎಫ್ ತಂಡದವರನ್ನು ಭೇಟಿ ಮಾಡಿದ ತುಳಸಿ ಮದ್ದಿನೀನಿ, ಸಿದ್ಧತೆ ಬಗ್ಗೆ ಸೂಚನೆ ನೀಡಿದರು.
ಪುತ್ತೂರು ಉಪವಿಭಾಭಾಗಾಧಿಕಾರಿ ಸ್ಟೆಲ್ಲಾ ವರ್ಗಿಸ್, ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್, ಕಡಬ ಕಂದಾಯ ನಿರೀಕ್ಷಕ ಪೃಥ್ವಿ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಪ್ರಮೋದ್, ಸಿಡಿಪಿಒ ಶೈಲಜಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಗೀತಾ, ಆರ್ಎಫ್ಒ ವಿಮಲ್ಬಾಬು, ಶಿಕ್ಷಣಾಧಿಕಾರಿ ಲೋಕೇಶ್, ಸುಬ್ರಹ್ಮಣ್ಯ ಗ್ರಾಮ ಆಡಳಿತಾಧಿಕಾರಿ ರವಿಚಂದ್ರ, ಪಶು ವೈದ್ಯಾಧಿಕಾರಿ ಡಾ.ಮಲ್ಲಿಕಾ, ಸುಬ್ರಹ್ಮಣ್ಯ ಪಿಡಿಒ ಮಹೇಶ್, ಕಾರ್ಯದರ್ಶಿ ಮೋನಪ್ಪ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.