ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಅವರು ಬುಧವಾರ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದರು.
ಆರಂಭದಲ್ಲಿ ಪಂಜಕ್ಕೆ ಭೇಟಿ ನೀಡಿದ ಸಚಿವರು ಸುಬ್ರಹ್ಮಣ್ಯದಲ್ಲಿ ಗುಡ್ಡ ಜರಿದು ದುರಂತ ಅಂತ್ಯ ಕಂಡ ಶೃತಿ ಮತ್ತು ಗಾನಶ್ರೀ ಅವರ ಪಂಜದ ಮನೆಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.
ಬಳಿಕ ಯೇನೆಕಲ್ಲಿಗೆ ತೆರಳಿದರು. ಪ್ರವಾಹದಿಂದ ಹಾನಿಗೊಳಗಾದ ಯೇನೆಕಲ್ಲು ಸೇತುವೆ ಮತ್ತು ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿ ಪರಿಹಾರದ ಭರವಸೆ ನೀಡಿದರು.
ಪರ್ವತಮುಖಿ ವೀಕ್ಷಣೆ:
ಸುಬ್ರಹ್ಮಣ್ಯ ದ ಪರ್ವತಮುಖಿಯಲ್ಲಿ ಗುಡ್ಡ ಜರಿದು ಮನೆಯಡಿ ಸಿಲುಕಿ ಮಕ್ಕಳು
ದುರಂತ ಅಂತ್ಯ ಕಂಡ ಪ್ರದೇಶಕ್ಕೆ ಭೇಟಿ ನೀಡಿ ದಿಗ್ಬ್ರಮೆ ವ್ಯಕ್ತಪಡಿಸಿದರು.
ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿಯಲ್ಲಿ ನೆರೆಯಿಂದ ಹಾನಿಗೊಳಗಾದ ಮನೆಗಳ ಮಾಲೀಕರಿಗೆ ಪರಿಹಾರದ ಚೆಕ್ ಹಸ್ತಾಂತರಿಸಿದರು.
ಸುಬ್ರಹ್ಮಣ್ಯ, ಮಾನಾಡು, ದೇವರಗದ್ದೆ, ಅಜ್ಜಿಹಿತ್ಲು, ಕಲ್ಲಜಡ್ಕ, ನೂಚಿಲ ಮೊದಲಾದ ಪ್ರದೇಶಗಳಲ್ಲಿ ನೆರೆಯಿಂದ ಹಾನಿಗೊಳಗಾದ 31ಮಂದಿಗೆ ಪರಿಹಾರದ ಚೆಕ್ ವಿತರಿಸಿದರು.
ಹರಿಹರದ ಶ್ರೀ ಹರಿಹರೇಶ್ವರ ದೇವಳಕ್ಕೆ ತೆರಳಿ ಅಲ್ಲಿ ಹಾನಿಗೊಳಗಾದ ತಡೆಗೋಡೆ ಇತ್ಯಾದಿ ವೀಕ್ಷಿಸಿದರು. ಹಾನಿಗೊಳಗಾದ ಹರಿಹರ ಸೇತುವೆ ಮತ್ತು ಅಲ್ಲಿ ನಡೆಯುತ್ತಿದ್ದ ಮರ ತೆರವು ಕಾರ್ಯಾಚರಣೆ ವೀಕ್ಷಿಸಿದರು.
ಸೋಮಶೇಖರ್ಗೆ ಪ್ರಶಂಸೆ: ಜೆಸಿಬಿ ಆಪರೇಟರ್ ಶರೀಫ್ ಅವರನ್ನು ರಕ್ಷಿಸಿದ ಸೋಮಶೇಖರ್ ಕಟ್ಟೆಮನೆ ಅವರನ್ನು ಬೆನ್ನುತಟ್ಟಿ ಪ್ರಶಂಸಿದರು.
ಸಚಿವರು ಬೆಂಡೋಡಿ ಸೇತುವೆ, ಕೊಲ್ಲಮೊಗ್ರು ಕಡಂಬಳ ಸೇತುವೆ, ಕಲ್ಮಕಾರು ಸಂತೆಡ್ಕ ಸೇತುವೆಗಳ ಸ್ಥಿತಿ ವೀಕ್ಷಿಸಿದರು.
ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ಪುತ್ತೂರು ಉಪವಿಭಾಗಾಧಿಕಾರಿ ಗಿರೀಶ್ ನಂದನ್, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.