ಲೈಂಗಿಕ ದೌರ್ಜನ್ಯ
ಪುತ್ತೂರು (ದಕ್ಷಿಣ ಕನ್ನಡ): ಸಹಪಾಠಿ ಜೊತೆ ಲೈಂಗಿಕ ಸಂಪರ್ಕ ಬೆಳೆಸಿ, ಆಕೆ ಮಗುವಿನ ತಾಯಿಯಾದ ಬಳಿಕ ಮದುವೆಯಾಗಲು ಒಪ್ಪದೇ ವಂಚಿಸಿದ ಪ್ರಕರಣದಲ್ಲಿ ಯುವತಿಗೆ ಜನಿಸಿದ ಶಿಶುವಿನ ತಂದೆಯು ಆರೋಪಿ ಕೃಷ್ಣ ಜೆ. ರಾವ್ (21) ಎಂಬುದು ಡಿಎನ್ಎ ಪರೀಕ್ಷೆಯಲ್ಲಿ ಖಚಿತವಾಗಿದೆ.
‘ಈ ಪ್ರಕರಣದ ಸಂತ್ರಸ್ತೆಗೆ ಜನಿಸಿದ ಶಿಶುವಿನ ತಂದೆ ಆರೋಪಿ ಕೃಷ್ಣ ಜೆ. ರಾವ್ ಎಂಬುದು ಡಿಎನ್ಎ ಪರೀಕ್ಷೆಯಲ್ಲಿ ಸಾಬೀತಾಗಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ. ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಕರಣ ಸಂಬಂಧ ಪುತ್ತೂರಿನ ಮಹಿಳಾ ಠಾಣೆಯ ಪೊಲೀಸರು ಆರೋಪಿ ಕೃಷ್ಣ ಜೆ. ರಾವ್ (21) ಹಾಗೂ ಆತನ ತಂದೆ ಜಗನ್ನಿವಾಸ ರಾವ್ (ಬಿಜೆಪಿ ಮುಖಂಡ) ಅವರನ್ನು ಈ ಹಿಂದೆ ಬಂಧಿಸಿದ್ದರು. ಅವರಿಬ್ಬರೂ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.
‘ಸಂತ್ರಸ್ತೆಯನ್ನು ಆರೋಪಿ ಮದುವೆ ಆಗಬೇಕು ಎಂಬುದು ಆಕೆಯ ಕುಟುಂಬದ ಒತ್ತಾಯ. ಈ ವಿಚಾರದಲ್ಲಿ ಪೊಲೀಸರು ಮಧ್ಯಪ್ರವೇಶ ಮಾಡಲಾಗದು. ಈಗಾಗಲೇ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಲಾಗಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು.
ಮನೆ ತುಂಬಿಸಿಕೊಳ್ಳಿ:
‘ಕೋರ್ಟ್ಗೆ ಸಲ್ಲಿಸಿರುವ ಡಿಎನ್ಎ ವರದಿಯಲ್ಲೂ ಮಗುವಿನ ತಂದೆ ಯಾರೆಂದು ಸ್ಪಷ್ಟವಾಗಿದೆ. ಯುವಕನ ತಂದೆ ಜಗನ್ನಿವಾಸ್ ರಾವ್, ತನ್ನ ಮಗನ ಭವಿಷ್ಯದ ಜೊತೆಗೆ, ಪುಟ್ಟ ಮಗುವಿನ ಭವಿಷ್ಯದ ಬಗ್ಗೆಯೂ ಆಲೋಚಿಸಬೇಕು. ಅವರಿಬ್ಬರಿಗೂ ಮದುವೆ ಮಾಡಿಸಿ ಮನೆ ತುಂಬಿಸಿಕೊಳ್ಳಬೇಕು’ ಎಂದು ವಿಶ್ವಕರ್ಮ ಮಹಾ ಮಂಡಲದ ರಾಜ್ಯ ಘಟಕದ ಅಧ್ಯಕ್ಷ ಕೆ.ಪಿ. ನಂಜುಂಡಿ ಒತ್ತಾಯಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ‘ಸಮಾಜದ ಹೆಣ್ಣುಮಗಳ ಮೇಲೆ ಅನ್ಯಾಯ ನಡೆದಿದೆ. ಹಿಂದುತ್ವವಾದಿ ಸಂಘಟನೆಗಳಾದ ಆರ್ಎಸ್ಎಸ್, ಬಜರಂಗದಳ, ಶ್ರೀರಾಮ ಸೇನೆಗಳು ಹಾಗೂ ಮುಖಂಡರಾದ ಕಲ್ಲಡ್ಕ ಪ್ರಭಾಕರ ಭಟ್, ನಳಿನ್ ಕುಮಾರ್ ಕಟೀಲ್, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಮತ್ತಿತರರು ಸೇರಿ ಸಂತ್ರಸ್ತೆಗೆ ನ್ಯಾಯ ಒದಗಿಸಿಕೊಡಬೇಕು’ ಎಂದರು.
ಸಂತ್ರಸ್ತೆಯ ತಾಯಿ, ‘ಮಗುವಿನ ಡಿಎನ್ಎ ಪರೀಕ್ಷೆ ನಡೆಯಲು ಯುವಕನ ಕಡೆಯವರೇ ಕಾರಣ. ಆತನೇ ಮಗುವಿನ ತಂದೆ ಎಂಬುದು ಸಾಬೀತಾಗಿದ್ದು, ಅವರಿಬ್ಬರಿಗೆ ಮದುವೆ ಮಾಡಿಸಲಿ’ ಎಂದರು.
ವಿಶ್ವಕರ್ಮ ಸಮಾಜದ ಮುಖಂಡರಾದ ಋಷಿಕುಮಾರ್ ಹಾಗೂ ಮೋಹನ ಆಚಾರ್ಯ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.