ADVERTISEMENT

‘ಕೋವಿಡ್ ಜಾಗೃತಿಯಲ್ಲಿ ವೈದ್ಯರ ಪಾತ್ರ ಮಹತ್ತರ’

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 2:56 IST
Last Updated 3 ಆಗಸ್ಟ್ 2021, 2:56 IST
ಮಂಗಳೂರಿನಲ್ಲಿ ನಡೆದ ವೈದ್ಯರ ದಿನಾಚರಣೆಯಲ್ಲಿ ಡಾ. ಎಂ.ಅಚ್ಯುತ್‌ ಆರ್‌. ಕುಡ್ವಾ ಅವರನ್ನು ಸನ್ಮಾನಿಸಲಾಯಿತು.
ಮಂಗಳೂರಿನಲ್ಲಿ ನಡೆದ ವೈದ್ಯರ ದಿನಾಚರಣೆಯಲ್ಲಿ ಡಾ. ಎಂ.ಅಚ್ಯುತ್‌ ಆರ್‌. ಕುಡ್ವಾ ಅವರನ್ನು ಸನ್ಮಾನಿಸಲಾಯಿತು.   

ಮಂಗಳೂರು: ಕೋವಿಡ್-19 ಎರಡನೇ ಅಲೆಯ ಸಂದರ್ಭದಲ್ಲಿ ಸೋಂಕಿತರ ಸಾವಿನ ಪ್ರಮಾಣ ಹೆಚ್ಚಲು ರೋಗಿಗಳ ನಿರ್ಲಕ್ಷ್ಯ ಮತ್ತು ಅಸಡ್ಡೆ ಮುಖ್ಯ ಕಾರಣ. ಗ್ರಾಮೀಣ ಪ್ರದೇಶಗಳ ಜನಸಾಮಾನ್ಯರಲ್ಲಿ ಕೋವಿಡ್-19 ಅಪಾಯದ ಬಗ್ಗೆ ಅರಿವು ಮೂಡಿಸುವ ಮಹತ್ವದ ಹೊಣೆಗಾರಿಕೆ ಕುಟುಂಬ ವೈದ್ಯರ ಮೇಲಿದೆ ಎಂದು ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸದಾಶಿವ ಶ್ಯಾನಭಾಗ್ ಅಭಿಪ್ರಾಯಪಟ್ಟರು.

ನಗರದ ಮಾಯಾ ಇಂಟರ್‌ನ್ಯಾಷನಲ್‌ನಲ್ಲಿ ಕುಟುಂಬ ವೈದ್ಯರ ಸಂಘ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಸೋಂಕು ತೀವ್ರವಾದಾಗ ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಆದ್ದರಿಂದ ರೋಗಿಗಳು ದಾಖಲಾದ 48-72 ಗಂಟೆ ಅವಧಿಯಲ್ಲೇ ಮೃತಪಡುತ್ತಿರುವುದು ಎರಡನೇ ಅಲೆಯಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ. ಇದು ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣ ಎಂದು ವಿಶ್ಲೇಷಿಸಿದರು.

ADVERTISEMENT

ಕೋವಿಡ್ ಪ್ರಕರಣಗಳಲ್ಲಿ ಬೆಂಗಳೂರು ಹೊರತುಪಡಿಸಿದರೆ ದಕ್ಷಿಣ ಕನ್ನಡ ಜಿಲ್ಲೆ ಇಡೀ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದ್ದು, ಆರಂಭಿಕ ಅಥವಾ ಸೌಮ್ಯ ರೋಗಲಕ್ಷಣಗಳು ಕಾಣಿಸಿಕೊಂಡಾಗಲೇ ಜನರನ್ನು ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳುವಂತೆ ಕುಟುಂಬ ವೈದ್ಯರು ಪ್ರೇರೇಪಿಸುವುದರಿಂದ ಸೋಂಕಿನ ತೀವ್ರತೆ ಕಡಿಮೆ ಮಾಡ ಬಹುದು ಎಂದು ಸಲಹೆ ನೀಡಿದರು.

ನಾಲ್ಕು ದಶಕದ ಹಿಂದೆ ಮೂಲ್ಕಿಯಲ್ಲಿ ಯಾವುದೇ ಆರೋಗ್ಯ ಸೌಲಭ್ಯಗಳು ಇಲ್ಲದ ಸಂದರ್ಭದಲ್ಲಿ, ಅಲ್ಲಿ ಆಸ್ಪತ್ರೆ ಆರಂಭಿಸಿ ಬಡರೋಗಿಗಳಿಗೆ ಸೇವೆ ಸಲ್ಲಿಸುತ್ತಾ ಬಂದ ಡಾ.ಎಂ.ಅಚ್ಯುತ ಆರ್.ಕುಡ್ವಾ ಅವರನ್ನು ವೈದ್ಯರ ದಿನಾ ಚರಣೆ ಅಂಗವಾಗಿ ಸನ್ಮಾನಿಸಲಾಯಿತು.

ಕುಟುಂಬ ವೈದ್ಯರ ಸಂಘದ ಅಧ್ಯಕ್ಷ ಡಾ.ಜಿ.ಕೆ.ಭಟ್ ಸಂಕಬಿತ್ತಿಲು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಾ.ಅಣ್ಣಯ್ಯ ಕುಲಾಲ್ ನಿರೂಪಿಸಿದರು. ಕೋಶಾಧ್ಯಕ್ಷ ಡಾ.ವಿವೇಕಾನಂದ ಭಟ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.