ADVERTISEMENT

ಮಂಗಳೂರು | ‘ಶಾಲಾ ಕಾಣಿಕೆ’: ಶೈಕ್ಷಣಿಕ ಸಾಮಗ್ರಿ ಕೊಡುಗೆ

​ಪ್ರಜಾವಾಣಿ ವಾರ್ತೆ
Published 28 ಮೇ 2025, 23:30 IST
Last Updated 28 ಮೇ 2025, 23:30 IST
   

ಮಂಗಳೂರು: ಆರಂಭೋತ್ಸವಕ್ಕೆ ಸಜ್ಜಾಗಿರುವ ಇಲ್ಲಿನ ಶಕ್ತಿನಗರದ ನಾಲ್ಯಪದವಿನ ಪಿಎಂಶ್ರೀ ಕುವೆಂಪು ಶತಮಾನೋತ್ತರ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ನೆರವಾಗಲು ‘ಶಾಲಾ ಕಾಣಿಕೆ’ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಊರಿನ ಜಾತ್ರೆ, ಬ್ರಹ್ಮಕಲಶೋತ್ಸವ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಂದ ಹಸಿರು ತರಕಾರಿ ಹಾಗೂ ಆಹಾರ ಧಾನ್ಯಗಳನ್ನು ದೇಣಿಗೆ ರೂಪದಲ್ಲಿ ಸಂಗ್ರಹಿಸಿ ‘ಹೊರೆಕಾಣಿಕೆ’  ಮೆರವಣಿಗೆ ನಡೆಸುವುದು ವಾಡಿಕೆ. ಅದೇ ಮಾದರಿಯಲ್ಲಿ ಈ ಸರ್ಕಾರಿ ಶಾಲೆಯು ದಾನಿಗಳಿಂದ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಉಪಯೋಗವಾಗುವ ಸಾಮಗ್ರಿ ಸಂಗ್ರಹಿಸುತ್ತಿದೆ.

‘ಕಾಣಿಕೆ ರೂಪದಲ್ಲಿ ಇದುವರೆಗೆ  ಟಿಪ್ಪಣಿ ಪುಸ್ತಕ, ಡಸ್ಟರ್, ಪೆನ್ಸಿಲ್‌ಬಾಕ್ಸ್‌, ಹೂದಾನಿ, ಎ4 ಮತ್ತು ಎ3 ಹಾಳೆಗಳು, ಪಠ್ಯ ಪೂರಕ ಸಾಮಗ್ರಿ, ಯುಕೆಜಿ ಎಲ್‌ಕೆಜಿ ವಿದ್ಯಾರ್ಥಿಗಳಿಗಾಗಿ ಆಟಿಕೆಗಳು ಸಂಗ್ರಹವಾಗಿವೆ. ಅವುಗಳನ್ನು ಇದೇ 30ರಂದು ಊರಿನ ವೈದ್ಯನಾಥ ದೇವಸ್ಥಾನದಿಂದ ಮೆರವಣಿಗೆಯಲ್ಲಿ ತರುತ್ತೇವೆ’ ಎಂದು ಪ್ರಭಾರ ಮುಖ್ಯಶಿಕ್ಷಕಿ ದಾಕ್ಷಾಯಣಮ್ಮ ಎಸ್‌. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಪ್ರತಿವರ್ಷವೂ ಏನಾದರೂ ಹೊಸ ಕಾರ್ಯಕ್ರಮ ಹಮ್ಮಿಕೊಳ್ಳುವ ಈ ಶಾಲೆ, ಕಳೆದ ಶೈಕ್ಷಣಿಕ ವರ್ಷದಲ್ಲಿ ‘ಗುರು ಕಾಣಿಕೆ’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಶಾಲೆಯ ಅಧ್ಯಾಪಕರು ನಿತ್ಯ ಒಂದಿಷ್ಟು ಹಣವನ್ನು ಡಬ್ಬಿಯಲ್ಲಿ ಕೂಡಿಡುತ್ತಿದ್ದರು. ‘ಪ್ರತಿ ತಿಂಗಳು ಯಾವುದಾದರೂ ಒಂದು ತರಗತಿಯನ್ನು ಲಕ್ಕಿಡಿಪ್ ಮೂಲಕ ಆಯ್ಕೆ ಮಾಡಿ, ಆ ತರಗತಿಗೆ ಶೈಕ್ಷಣಿಕ ಸಾಮಗ್ರಿ ಖರೀದಿಸಲು ‘ಗುರು ಕಾಣಿಕೆ’ಯ ಹಣವನ್ನು ಬಳಸಲಾಗುತ್ತದೆ’ ಎಂದು ದಾಕ್ಷಾಯಣಮ್ಮ ತಿಳಿಸಿದರು. 

ಮಂಗಳೂರಿನ ನಾಲ್ಯಪದವು ಪಿಎಂಶ್ರೀಕುವೆಂಪು ಶತಮಾನೋತ್ತರ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ: ಪ್ರಜಾವಾಣಿ ಚಿತ್ರ

63 ವರ್ಷ ಹಳೆಯದಾದ  ಈ ಶಾಲೆಗೆ  ಸಾವಿತ್ರಿಬಾಯಿ‍ ಫುಲೆ ಪ್ರಶಸ್ತಿಯೂ ದೊರಕಿದೆ. ಎರಡು ವರ್ಷಗಳ ಹಿಂದೆ ಈ ಶಾಲೆ ಪಿಎಂಶ್ರೀ ಯೋಜನೆಗೆ ಆಯ್ಕೆಯಾಗಿದೆ. ಕುವೆಂಪು ಜನ್ಮಶತಮಾನೋತ್ಸವ ವರ್ಷದಲ್ಲಿ ಈ ಶಾಲೆಗೆ ವಿಶೇಷ ಅನುದಾನ ಬಿಡುಗಡೆಯಾಗಿತ್ತು. ಈ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಮತ್ತು ಒಂದರಿಂದ ಎಂಟನೇ ತರಗತಿವರೆಗೆ ಕಲಿಕೆಗೆ ಅವಕಾಶವಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ 650 ವಿದ್ಯಾರ್ಥಿಗಳಿದ್ದರು. ಈ ಪ್ರಾಂಗಣದಲ್ಲಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ಕೂಡ ಇದ್ದು ಈ ಸಂಸ್ಥೆಯಲ್ಲಿ ಒಟ್ಟು 900 ವಿದ್ಯಾರ್ಥಿಗಳು ಕಲಿಯುತ್ತಾರೆ.

ಶಾಲೆಯಲ್ಲಿ ಸರ್ಕಾರದಿಂದ ನೇಮಕವಾದ 7 ಅಧ್ಯಾಪಕರು ಇದ್ದಾರೆ. ಶಾಲೆಯ ಎಸ್‌ಡಿಎಂಸಿ ಮತ್ತು ಹಳೆವಿದ್ಯಾರ್ಥಿ ಸಂಘ ಸೇರಿ ಇನ್ನೂ17 ಗೌರವ ಶಿಕ್ಷಕರನ್ನು ನೇಮಿಸಿ ಕೊಳ್ಳಲು ಸಿದ್ಧತೆ ಮಾಡಿಕೊಂಡಿವೆ. ಅವರ ಸಂದರ್ಶನ  ಪ್ರಕ್ರಿಯೆ ಮುಗಿದಿದೆ ಎಂದು ದಾಕ್ಷಾಯಣಮ್ಮ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.