ADVERTISEMENT

ಗಾಂಜಾ ಪ್ರಕರಣ: ವೈದ್ಯರು ಹಾಗೂ ವೈದ್ಯ ವಿದ್ಯಾರ್ಥಿಗಳು ಸೇರಿ 13 ಮಂದಿಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 16:22 IST
Last Updated 28 ಜನವರಿ 2023, 16:22 IST
   

ಮಂಗಳೂರು: ಗಾಂಜಾ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಗರ ವೈದ್ಯಕೀಯ ಕಾಲೇಜುಗಳ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳೂ ಸೇರಿದಂತೆ 13 ಆರೋಪಿಗಳಿಗೆ ಪ್ರಧಾನ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಎಂ.ರವೀಂದ್ರ ಜೋಷಿ ಅವರು ಶುಕ್ರವಾರ ಜಾಮೀನು ನೀಡಿದ್ದಾರೆ.

‘ಬಂಧನಕ್ಕೊಳಗಾಗಿರುವ ವೈದ್ಯರು ಹಾಗೂ ವೈದ್ಯ ವಿದ್ಯಾರ್ಥಿಗಳನ್ನು ಗಾಂಜಾ ಸೇವನೆ ಪ್ರಕರಣದ ಆರೋಪಿಗಳಂತೆ ತೋರುತ್ತಿದ್ದು, ಎನ್‌ಡಿಪಿಎಸ್‌ ಕಾಯ್ದೆಯ ಸೆಕ್ಷನ್‌ 27 (ಬಿ) ಅಡಿ ಅವರ ವಿರುದ್ಧ ಕ್ರಮಕೈಗೊಳ್ಳಬಹುದು. ಹಾಗಾಗಿ ಜಾಮೀನು ಪಡೆಯಲು ಇವರು ಅರ್ಹರು’ ಎಂದು ಎನ್‌ಡಿಪಿಎಸ್‌ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳಿಗೆ ವಿಶೇಷ ನ್ಯಾಯಾಧೀಶರೂ ಆಗಿರುವ ಎಂ.ರವೀಂದ್ರ ಜೋಷಿ ಅಭಿಪ್ರಾಯಪಟ್ಟಿದ್ದಾರೆ. ₹ 50 ಸಾವಿರ ಭದ್ರತಾ ಠೇವಣಿ ಪಡೆದು 13 ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಅವರು ಆದೇಶಿಸಿದ್ದಾರೆ.

ನಿಷೇಧಿತ ಪದಾರ್ಥ ಗಾಂಜಾವನ್ನು ಅಕ್ರಮವಾಗಿ ಹೊಂದಿದ್ದ ಹಾಗೂ ಸೇವನೆ ಮಾಡಿದ ಆರೋಪದ ಮೇರೆಗೆ ನಾಲ್ವರು ವೈದ್ಯರು 18 ವೈದ್ಯ ವಿದ್ಯಾರ್ಥಿಗಳು ಸೇರಿದಂತೆ 24 ಆರೋಪಿಗಳನ್ನು ನಗರದ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು.

ADVERTISEMENT

ಬಂಧನಕ್ಕೊಳಗಾಗಿರುವ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು (22 ಮಂದಿ) ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ ಸೆಕ್ಷನ್ 439ರ ಅಡಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅವರಲ್ಲಿ ಒಟ್ಟು 13 ಮಂದಿಗೆ ಜಾಮೀನು ಸಿಕ್ಕಿದೆ. ಅನಿವಾಸಿ ಭಾರತೀಯ ನೀಲ್‌ ಕಿಶೋರಿಲಾಲ್‌ ರಾಮ್‌ಜಿ ಷಾ ಒಂದನೇ ಆರೋಪಿಯಾಗಿದ್ದು, ಅತನಿಗೆ ಜಾಮೀನು ಸಿಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.