
ಮಂಗಳೂರು: ಮಾದಕ ವಸ್ತು ಸೇವನೆಯ ದುಷ್ಪರಿಣಾಮಗಳ ಕುರಿತು ಯುವಜನರಲ್ಲಿ ಹಾಗೂ ವಿದ್ಯಾರ್ಥಿ ಸಮುದಾಯದಲ್ಲಿ ಅರಿವು ಮೂಡಿಸಲು ನಗರ ಪೊಲೀಸ್ ಕಮಿಷನರೇಟ್ ಸಹಭಾಗಿತ್ವದಲ್ಲಿ ‘ಮೇಕ್ ಎ ಚೇಂಜ್ ಫೌಂಡೇಷನ್’ ಸಂಸ್ಥೆಯು ‘ನಶೆ ಮುಕ್ತ’ ಮಂಗಳೂರು ಅಭಿಯಾನವನ್ನು ಹಮ್ಮಿಕೊಂಡಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದ ‘ಮೇಕ್ ಎ ಚೇಂಜ್ ಫೌಂಡೇಷನ್’ನ ಅಧ್ಯಕ್ಷ ಸುಹೈಲ್ ಕಂದಕ್, ‘ಈ ಅಭಿಯಾನದಡಿ 102 ಕಾರ್ಯಕ್ರಮಗಳನ್ನು ಹಾಗೂ 40 ಗುಂಪು ಸಭೆಗಳನ್ನು ಹಮ್ಮಿಕೊಳ್ಳಲಿದ್ದೇವೆ. ಪೊಲೀಸ್ ಅಧಿಕಾರಿಗಳು, ವಿಷಯ ತಜ್ಞರು ಮಾಹಿತಿ ನೀಡಲಿದ್ದಾರೆ. ಮಾದಕ ವಸ್ತು ಸೇವನೆಯ ದುಷ್ಪರಿಣಾಮ ಕುರಿತು ಯುವಜನರ ಜೊತೆ ಸಂವಾದ ನಡೆಯಲಿದೆ’ ಎಂದರು.
ಅಭಿಯಾನಕ್ಕೆ ಇದೇ 27ರಂದು ನಗರದ ಟಿಎಂಎ ಪೈ ಸಮಾವೇಶ ಸಭಾಂಗಣದಲ್ಲಿ ಚಾಲನೆ ನೀಡಲಾಗುತ್ತದೆ. ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್, ಸಂಸದ ಕ್ಯಾ.ಬ್ರಿಜೇಶ್ ಚೌಟ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಭಾಗವಹಿಸಲಿದ್ದಾರೆ. ಮಂಗಳೂರಿನ ಬಿಷಪ್, ರಾಮಕೃಷ್ಣ ಮಠದ ಸ್ವಾಮೀಜಿ ಮತ್ತು ಮಂಗಳೂರಿನ ಖಾಝಿ ಸಹಿತ ಹಲವು ಧಾರ್ಮಿಕ ಮುಖಂಡರು ಅಭಿಯಾನದಲ್ಲಿ ಕೈಜೋಡಿಸಲಿದ್ದಾರೆ ಎಂದರು.
ಮಾದಕ ದ್ರವ್ಯದ ಹಾನಿ ಕುರಿತ ಜಾಗೃತಿ ಸಂದೇಶ ಪಸರಿಸಲು ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದಲ್ಲಿ 30 ಸೆಕೆಂಡ್ನಿಂದ 60 ಸೆಕೆಂಡ್ವರೆಗಿನ ರೀಲ್ಸ್ ಮತ್ತು ಶಾರ್ಟ್ ವಿಡಿಯೊ ಸ್ಪರ್ಧೆ, ಮಾದಕ ಮುಕ್ತ ವಿನೂತನ ಮಾದರಿ ಪ್ರದರ್ಶನ ಹಮ್ಮಿಕೊಳ್ಳಲಿದ್ದೇವೆ. ‘ನಶೆ ಮುಕ್ತ ಮಂಗಳೂರು’ ಕುರಿತ ಮಾದರಿಗಳು ಅಥವಾ ಆವಿಷ್ಕಾರಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗುತ್ತದೆ. ಪ್ರಬಂಧ ಸ್ಪರ್ಧೆ, ಡಿಜಿಟಲ್ ಪೋಸ್ಟರ್ ಸ್ಪರ್ಧೆ ಏರ್ಪಡಿಸಲಿದ್ದೇವೆ. ಸಮಾಜದಲ್ಲಿ ಪ್ರೇರಣೆ ಮೂಡಿಸಲು ‘ಒನ್ ಡೇ ಇನ್ಫ್ಲುಯೆನ್ಸರ್’ ಕಾರ್ಯಕ್ರಮವನ್ನು, ಮಾಲ್ಗಳಲ್ಲಿ ಫಿಟ್ನೆಸ್ ಚಾಲೆಂಜ್, ಫ್ಲಾಷ್ ಮೋಬ್, ಹಮ್ಮಿಕೊಳ್ಳಲಿದ್ದೇವೆ ಎಂದರು.
ಸೆನ್ ಠಾಣೆಯ ಎಸಿಪಿ ರವೀಶ್ ನಾಯಕ್, ಬಾರ್ನ್ ಆಗೇನ್ ರಿಕವರಿ ಸೆಂಟರ್ನ ಸಹ ಸ್ಥಾಪಕಿ ಬೀನಾ ಸಲ್ದಾನ, ಕ್ಯಾಥೊಲಿಕ್ ಸಭಾ ಮಂಗಳೂರು ಪ್ರದೇಶದ ಅಧ್ಯಕ್ಷ ಅಶ್ವಿನ್ ಡಿಸೋಜ, ಅಬ್ದುಲ್ ಅಜೀಝ್ ತಂಝೀಲ್, ವಾಯ್ಸ್ ಆಫ್ ಸ್ಟೂಡೆಂಟ್ಸ್ನ ಅಭಿಶೇಕ್ ವಾಲ್ಮೀಕಿ, ವಿಕಾಸ್ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.