ADVERTISEMENT

ಮಂಗಳೂರು: ಯೇಸುವಿನ ಪುನರುತ್ಥಾನದ ಸಂಭ್ರಮ

ಜಿಲ್ಲೆಯಾದ್ಯಂತ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ, ಮನೆ–ಮನಗಳಲ್ಲಿ ಖುಷಿಯ ಅಲೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2024, 5:41 IST
Last Updated 1 ಏಪ್ರಿಲ್ 2024, 5:41 IST
ನಿಡ್ಡೋಡಿಯ ಸಂತ ತೆರೆಜಮ್ಮನವರ ದೇವಾಲಯದಲ್ಲಿ ಈಸ್ಟರ್ ಪ್ರಾರ್ಥನೆ ನೆರವೇರಿಸಿದ ಬಿಷಪ್ ಅವರನ್ನು ಗೌರವಿಸಲಾಯಿತು
ನಿಡ್ಡೋಡಿಯ ಸಂತ ತೆರೆಜಮ್ಮನವರ ದೇವಾಲಯದಲ್ಲಿ ಈಸ್ಟರ್ ಪ್ರಾರ್ಥನೆ ನೆರವೇರಿಸಿದ ಬಿಷಪ್ ಅವರನ್ನು ಗೌರವಿಸಲಾಯಿತು   

ಮಂಗಳೂರು: ಯೇಸುವಿನ ತ್ಯಾಗ ಮತ್ತು ಬಲಿದಾನವನ್ನು ನೆನಪಿಸುತ್ತ ಉಪವಾಸ ಮತ್ತು ವ್ರತ ಆಚರಣೆಯಲ್ಲಿ ತೊಡಗಿದ್ದ ಕ್ರೈಸ್ತರು ಯೇಸುಕ್ರಿಸ್ತನ ಪುನರುತ್ಥಾನದ ಈಸ್ಟರ್‌ ಹಬ್ಬವನ್ನು ಭಾನುವಾರ ಸಂಭ್ರಮದಿಂದ ಆಚರಿಸಿದರು.

ಮಂಗಳೂರು ಮತ್ತು ಬೆಳ್ತಂಗಡಿ ಧರ್ಮಪ್ರಾಂತ್ಯದ ಕಥೋಲಿಕ್‌ ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನಾ ವಿಧಿ ಮತ್ತು ಬಲಿಪೂಜೆ ನೆರವೇರಿದವು. ಮನೆಗಳಲ್ಲೂ ನೆಂಟರಿಷ್ಟರು ಮತ್ತು ಅತಿಥಿಗಳನ್ನು ಸ್ವಾಗತಿಸಿ, ಅವರೊಂದಿಗೆ ಹಬ್ಬದ ವಿಶೇಷ ಊಟ ಸವಿದು ಖುಷಿಪಟ್ಟರು.

ಮಾಂಡಿ ಗುರುವಾರದ ನಂತರ ಶುಭಶುಕ್ರವಾರದಂದು ಯೇಸುವನ್ನು ಶಿಲುಬೆಗೇರಿಸಿದ ಘಟನೆಯನ್ನು ನೆನೆದುಕೊಂಡ ಕ್ರೈಸ್ತರು ಚರ್ಚ್‌ಗಳಲ್ಲಿ ಶಿಲುಬೆಯ ಹಾದಿಯನ್ನು ಪ್ರದರ್ಶಿಸಿದ್ದರು. ಶನಿವಾರ ಸಂಜೆಯಿಂದಲೇ ಈಸ್ಟರ್‌ ಆಚರಣೆ ಆರಂಭವಾಗಿತ್ತು. ಕೆಲವು ಕಡೆಗಳಲ್ಲಿ ಶನಿವಾರ ರಾತ್ರಿ ಪಾಸ್ಕಾ ಜಾಗರಣೆ ನಡೆದಿತ್ತು. ಭಾನುವಾರ ಬೆಳಿಗ್ಗೆ ಹೊಸ ಬಟ್ಟೆ ತೊಟ್ಟು ಖುಷಿಯಿಂದ ಚರ್ಚ್‌ ಕಡೆಗೆ ಹೆಜ್ಜೆ ಹಾಕಿದರು. ಪ್ರಾರ್ಥನೆಯಲ್ಲಿ ಪಾಲ್ಗೊಂಡ ನಂತರ ಧರ್ಮಗುರುಗಳಿಂದ ಆಶೀರ್ವಾದ ಪಡೆದು ಪರಸ್ಪರ ಶುಭಾಶಯ ವಿನಿಯಮ ಮಾಡಿಕೊಂಡು ಮನೆ ಕಡೆಗೆ ಸಾಗಿದರು.

ADVERTISEMENT
ನಿಡ್ಡೋಡಿಯ ಸಂತ ತೆರೆಜಮ್ಮನವರ ದೇವಾಲಯದಲ್ಲಿ ಬಿಷಪ್ ಈಸ್ಟರ್ ಪ್ರಾರ್ಥನೆ ನೆರವೇರಿಸಿದರು 

ನಿಡ್ಡೋಡಿಯಲ್ಲಿ ಬಿಷಪ್‌ರಿಂದ ಪ್ರಾರ್ಥನೆ:

ಮೂಡುಬಿದಿರೆ ನಿಡ್ಡೋಡಿಯ ಸೇಂಟ್‌ ತೆರೇಜಮ್ಮನವರ ದೇವಾಲಯದಲ್ಲಿ  ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಪೀಟರ್ ಪಾವ್ಲ್ ಸಲ್ಡಾನ ಪ್ರಾರ್ಥನೆ ನೆರವೇರಿಸಿದರು. ‌ಪವಿತ್ರ ಬಲಿಪೂಜೆಯ ನಂತರ ಅವರು ಶುಭ ಸಂದೇಶ ನೀಡಿದರು.

ಸುರತ್ಕಲ್‌ನ ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ನಡೆದ ಈಸ್ಟರ್ ಆಚರಣೆಯಲ್ಲಿ ಧರ್ಮಗುರುಗಳಾದ ಆಸ್ಟಿನ್ ಪೀಟರ್ ಪೆರಿಸ್ ಮತ್ತು ರಿಚರ್ಡ್ ಡಿಸೋಜ ಬಲಿಪೂಜೆ ನೆರವೇರಿಸಿದರು

ಚರ್ಚ್‌ನ ಧರ್ಮಗುರು ಡ್ಯಾನಿಸ್ ಸುವಾರಿಸ್, ಪಾಲನಾ ಸಮಿತಿ ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಕಾರ್ಯದರ್ಶಿ ಜೀವನ್ ಕ್ರಾಸ್ತ, ಪಾಲನಾ ಮಂಡಳಿ ಸದಸ್ಯರು ಬಿಷಪ್ ಅವರನ್ನು ಬರಮಾಡಿಕೊಂಡರು. ಫಾ. ದೀಪಕ್ ನೊರೊನ್ಹಾ ಹಾಗೂ ಬ್ರದರ್ ಜೀವನ್ ಲೋಬೊ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.