ಉಜಿರೆ: ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಸೋಮವಾರ ಬೆಳಿಗ್ಗೆ ಆನೆಮರಿಗೆ ‘ಶಿವಾನಿ’ ಎಂದು ನಾಮಕರಣ ಮಾಡಲಾಯಿತು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಆನೆ ಮರಿಗೆ ಪ್ರಸಾದ ಹಾಕಿ, ಗಂಟೆ ಕಟ್ಟಿದ ಬಳಿಕ ನಾಮಕರಣ ಶಾಸ್ತ್ರ ನಡೆಸಲಾಯಿತು. ಹೆಗ್ಗಡೆ ಅವರ ಮೊಮ್ಮಗಳು ಮಾನ್ಯ ‘ಶಿವಾನಿ’ ಹೆಸರನ್ನು ಪ್ರಕಟಿಸುವ ಮೂಲಕ ನಾಮಕರಣ ಮಾಡಲಾಯಿತು.
ಬಳಿಕ ಮಾತನಾಡಿದ ಡಿ.ವೀರೇಂದ್ರ ಹೆಗ್ಗಡೆ, ‘ಧರ್ಮಸ್ಥಳದಲ್ಲಿ ಜಾತ್ರೆ, ಉತ್ಸವ ಮೆರವಣಿಗೆ ಮೊದಲಾದ ವಿಶೇಷ ಸಂದರ್ಭಗಳಲ್ಲಿ ಗಜ ಸೇವೆಯನ್ನು ಬಳಸುವುದು ಸಂಪ್ರದಾಯವಾಗಿದೆ. ಈಗಾಗಲೇ ಲತಾ ಮತ್ತು ಲಕ್ಷ್ಮೀ ಎಂಬ ಎರಡು ಆನೆಗಳಿದ್ದು, 2020 ರ ಜುಲೈ 1ರಂದು ಬುಧವಾರ ಲಕ್ಷ್ಮೀ ಹೆಣ್ಣು ಮರಿಗೆ ಜನ್ಮ ನೀಡಿದೆ. ಶಿವನ ಸನ್ನಿಧಿಯಲ್ಲಿ ಇರುವುದರಿಂದ ‘ಶಿವಾನಿ’ ಎಂದು ನಾಮಕರಣ ಮಾಡಲಾಗಿದೆ’ ಎಂದರು.
‘ಧರ್ಮಸ್ಥಳದಲ್ಲಿರುವ ಆನೆಗಳಿಗೆ ವನ ಸಂಚಾರಕ್ಕೂ ಅವಕಾಶವಿದ್ದು, ಪ್ರಾಕೃತಿಕವಾಗಿ ದೊರಕುವ ಸೊಪ್ಪು, ಹಣ್ಣುಹಂಪಲುಗಳನ್ನು ನೀಡಲಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು. ಆನೆಮರಿಗೆ ನಾಮಕರಣ ಕಾರ್ಯಕ್ರಮವು ನೂತನವಾಗಿದ್ದು, ‘ಶಿವಾನಿ’ ನೀರಾಟದ ತುಂಟಾಟ ಪ್ರೇಕ್ಷಕರ ಕಣ್ಮನ ಸೆಳೆಯಿತು.
ಮಾಣಿಲದ ಮೋಹನದಾಸ ಸ್ವಾಮೀಜಿ, ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಾ.ಬಿ.ಯಶೋವರ್ಮ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.